ಬೆಂಗಳೂರು: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಉತೀರ್ಣ ಅಂಕವನ್ನು 33ಕ್ಕೆ ನಿಗದಿ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ( Madhu Bangarappa ) ಅವರು ತಿಳಿಸಿದ್ದಾರೆ.
ಇಂದು (ಅ.15) ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರು ಕನ್ನಡ ಭಾಷೆಗೆ ನಿಗದಿ ಮಾಡಿರುವ 125 ಅಂಕವನ್ನು 100ಕ್ಕೆ ಇಳಿಸುವ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ತೆಗೆದುಕೊಂಡ ಬಳಿಕ ನಿರ್ಧಾರ ಮಾಡುತ್ತೇವೆ. ಕನ್ನಡ ವಿಷಯದ ಮೇಲಿನ ಅಂಕಗಳ ಬಗ್ಗೆ ಸದ್ಯಕ್ಕೆ ಮಾತನಾಡುವುದಿಲ್ಲ ಆದರೆ, ಇದೇ ಅಕಾಡೆಮಿ ವರ್ಷದಲ್ಲಿ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ಎಲ್ಲ ವಿಷಯಗಳಿಗೆ ನಿಗದಿ ಮಾಡಿರುವ ಉತ್ತೀರ್ಣ ಅಂಕ 35 ಅನ್ನು 33ಕ್ಕೆ ಇಳಿಸುವ ಬಗ್ಗೆ ಚರ್ಚಿಸಲು ಸಾರ್ವಜನಿಕ ವಲಯಕ್ಕೆ ಬಿಟ್ಟಿದ್ದೆವು. ಅದರಲ್ಲಿ ಸುಮಾರು 701 ಮಂದಿ 33 ಅಂಕಗಳ ಪರವಾಗಿಯೂ ಹಾಗೂ 35ರ ಪರವಾಗಿ ಕೇವಲ 8 ಅಭಿಪ್ರಾಯಗಳು ಬಂದವು. ಹೀಗಾಗಿ ಈ ಅಕಾಡೆಮಿಕ್ ವರ್ಷದಿಂದ ನಮ್ಮ ರಾಜ್ಯದಲ್ಲಿ ಉತ್ತೀರ್ಣ ಅಂಕವನ್ನು 33ಕ್ಕೆ ನಿಗದಿ ಮಾಡಲಾಗಿದೆ. ಈ ಬಗ್ಗೆ ನಾಳೆ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇನ್ನು ಎಸ್ಸೆಸ್ಸೆಲ್ಸಿಯಲ್ಲಿ ಒಟ್ಟು 206 ಅಂಕ ಹಾಗೂ ಪಿಯುಸಿಯಲ್ಲಿ 198 ಅಂಕ ಬಂದರೆ ಅವರನ್ನು ಉತ್ತೀರ್ಣರು ಎಂದು ಪರಿಗಣಿಸಲಾಗುತ್ತದೆ. ಒಟ್ಟಾರೆ 206 ಅಂಕ ಬಂದು ಯಾವುದಾದರೂ ಒಂದು ವಿಷಯದಲ್ಲಿ 33ಕ್ಕಿಂತ ಕಡಿಮೆ ಅಥವಾ ಕನಿಷ್ಠ 30 ಅಂಕವಿದ್ದರೆ ಅದನ್ನು ಉತ್ತಿರ್ಣ ಎಂದು ಪರಿಗಣಿಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಇನ್ನು ಪಿಯುಸಿಯಲ್ಲಿಯೂ ಇದೇ ನಿಯಮ ಅನ್ವಯವಾಗುತ್ತದೆ. ಆದರೆ, ಒಟ್ಟಾರೆ ಅಂಕವನ್ನು 198ಕ್ಕೆ ನಿಗದಿ ಮಾಡಲಾಗಿದೆ ಎಂದು ಮಧು ಬಂಗಾರಪ್ಪ ಅವರು ತಿಳಿಸಿದರು.


