Greater bengaluru news9: “ನವೆಂಬರ್ 1 ನೇ ತಾರೀಕಿನಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಐತಿಹಾಸಿಕ ನಿರ್ಣಯಕ್ಕೆ ಸರ್ಕಾರ ತೀರ್ಮಾನ ಮಾಡಿದೆ. ಇದು ಬೆಂಗಳೂರಿನ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗುತ್ತದೆ. ಇದೊಂದು ಕ್ರಾಂತಿಕಾರಕ ತೀರ್ಮಾನ. ಆಸ್ತಿ ಶುದ್ಧೀಕರಣಕ್ಕೆ ನಾಂದಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಒಬ್ಬರು ಇಬ್ಬರು ಮೂವರಿಗೆ ಖಾತಾ ಮಾಡಿದ್ದರೆ ಅಂತಹ ಪ್ರಕರಣಗಳನ್ನು ಹೇಗೆ ಬಗೆಹರಿಸುತ್ತೀರಿ ಎಂದು ಕೇಳಿದಾಗ, “ಇದಕ್ಕಾಗಿ ನಮ್ಮ ಕಂದಾಯ ಇಲಾಖೆಯಲ್ಲಿ ಐತಿಹಾಸಿಕ ಕಾನೂನು ತಂದಿದ್ದು, ಬೋಗಸ್ ಆಗಿ ನೋಂದಣಿಯಾಗಿರುವ ದಾಖಲೆಗಳನ್ನು ವಜಾಗೊಳಿಸಲು ಜಿಲ್ಲಾ ನೋಂದಣಧಿಕಾರಿಗೆ ಅಧಿಕಾರ ನೀಡಲಾಗಿದೆ. ಇದು ವಿಧಾನಸಭೆಯಲ್ಲಿ ಅನುಮೋದನನೆ ಪಡೆಯಲಾಗಿದೆ” ಎಂದು ತಿಳಿಸಿದರು.
ಸರ್ವರ್ ಸಮಸ್ಯೆ ಉಂಟಾಗಲಿದೆಯೇ ಎಂದು ಕೇಳಿದಾಗ, “ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ನಾವು ಸರಿಪಡಿಸುತ್ತೇವೆ. ಐದು ಪಾಲಿಕೆಗಳು ಇರುವ ಕಾರಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸಮಸ್ಯೆಯಾಗಬಾರದು ಎಂದು 10 ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಅದು ಸಾಲದಿದ್ದರೆ ಇನ್ನೂ ಐದು ಕೇಂದ್ರಗಳನ್ನು ಸ್ಥಾಪಿಸುತ್ತೇವೆ” ಎಂದರು.
ಪಾಲಿಕೆಗಳ ಆದಾಯ ಸರ್ಕಾರಕ್ಕೆ ಸೇರಲಿದೆಯೇ ಎಂದಾಗ, “ಆಯಾಯ ಪಾಲಿಕೆಗಳ ಅದಾಯ ಅದೇ ಪಾಲಿಕೆಗಳಿಗೆ ಸೇರಲಿದೆ. ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ. ಒಂದು ರೂಪಾಯಿಯೂ ಸರ್ಕಾರಕ್ಕೆ ಬರುವುದಿಲ್ಲ. ಭೂ ಪರಿವರ್ತನಾ ಶುಲ್ಕ ಒಂದೆರಡು ರೂಪಾಯಿ ಕಂದಾಯ ಇಲಾಖೆಗೆ ಹೋಗಬಹುದು” ಎಂದರು.
ಓಸಿ ಸಿಸಿ ವಿಚಾರವಾಗಿ ಸರ್ಕಾರದ ತೀರ್ಮಾನದ ಬಗ್ಗೆ ಹೇಳಿ ಎಂದು ಕೇಳಿದಾಗ, “1200 ಅಡಿಗಳವರೆಗಿನ ನಿವೇಶನಗಳಿಗೆ ಅನುಮತಿ ನೀಡಿದ್ದೇವೆ. ಉಳಿದಂತೆ ಸುಪ್ರೀಂ ಕೋರ್ಟ್ ತೀರ್ಪಿಗೆ ಧಕ್ಕೆಯಾಗದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾನೂನು ಇಲಾಖೆ, ತಜ್ಞರು ಚರ್ಚೆ ಮಾಡಿ ಸಲಹೆ ನೀಡಲಿದ್ದಾರೆ. ಜನರಿಗೆ ಸಹಾಯ ಮಾಡಬೇಕು ಎಂದು ಮುಖ್ಯಮಂತ್ರಿಗಳು ವಿಚಾರವಾಗಿಯೇ 8 ಸಭೆಗಳನ್ನು ನಡೆಸಿದ್ದಾರೆ. ಮೂರು ಬಾರಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. ನಾವು ಪ್ರತ್ಯೇಕವಾಗಿ ಎರಡು ಮೂರು ಬಾರಿ ಸಭೆ ಮಾಡಿದ್ದೇವೆ” ಎಂದರು.
ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕೇಳಿದಾಗ, “ನಾವು ಹೆಚ್ಚು ಶಕ್ತಿಶಾಲಿಯಾದಷ್ಟು, ಶತ್ರುಗಳು ಹೆಚ್ಚು, ಕಡಿಮೆ ಶಕ್ತಿ ಇದ್ದರೆ ಕಡಿಮೆ ಶತ್ರುಗಳು, ಶಕ್ತಿಯೇ ಇಲ್ಲದಿದ್ದರೆ, ಶತ್ರುಗಳೂ ಇರುವುದಿಲ್ಲ” ಎಂದು ತಿಳಿಸಿದರು.


