ಶಿವಮೊಗ್ಗ: ಮನೆ ಇ-ಸ್ವತ್ತು ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಮುದ್ದಿನಕೊಪ್ಪ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಮಾರನಾಯ್ಕ ಲೋಕಾಯುಕ್ತ ಪೊಲೀಸರು ಬಲೆಗೆ ಬಿದ್ದ ಕಾರ್ಯದರ್ಶಿ.
ಗುರುವಾರ ಮಧ್ಯಾಹ್ನ ಗ್ರಾಪಂ ಕಚೇರಿಯ ಕಾರ್ಯದರ್ಶಿಯ ಕೊಠಡಿಯಲ್ಲಿ ಕುಮಾರನಾಯ್ಕ 3 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಲೋಕಾಯುಕ್ತ ದಾಳಿಯಾಗಿದೆ. ಶ್ರೀರಾಮಪುರದ ವಿನೋದ್ ಎಂಬುವರ ತಾಯಿ ಹೆಸರಿನಲ್ಲಿದ್ದ ನಿವೇಶದನಲ್ಲಿ ಮನೆ ನಿರ್ಮಿಸಿದ್ದರು. ಅದರ ಈ-ಸ್ವತ್ತು ಮಾಡಿಕೊಡಲು ಕಾರ್ಯದರ್ಶಿ ಕುಮಾರನಾಯ್ಕ 3000 ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ವಿನೋದ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು ಹಣ ಕೇಳಿದ್ದರ ಆಡಿಯೋವನ್ನು ಒದಗಿಸಿದ್ದರು. ಲೋಕಾಯುಕ್ತ ಅಧೀಕ್ಷಕ ಮಂಜುನಾಥ ಚೌದರಿ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್, ಇನ್ಸ್ಪೆಕ್ಟರ್ಗಳಾದ ಗುರುರಾಜ್ ಎನ್.ಮೈಲಾರ್, ಕೆ.ಪಿ.ರುದ್ರೇಶ್, ಸಿಬ್ಬಂದಿ ಯೋಗೇಶ್, ಟೀಕಪ್ಪ, ಸುರೇಂದ್ರ, ಮಂಜುನಾಥ್, ಬಿ.ಟಿ.ಚನ್ನೇಶ್, ದೇವರಾಜ್, ಪ್ರಕಾಶ್ ಬಾರಿದಮರ, ಅರುಣ್ ಕುಮಾರ್, ಅಂಜಲಿ, ಚಂದ್ರಿಬಾಯಿ, ಗೋಪಿ, ಪ್ರದೀಪ್, ಜಯಂತ್ ಭಾಗವಹಿಸಿದ್ದರು.


