ಬೆಂಗಳೂರು: ಹಿಂಗಾರು ಹಂಗಾಮಿನ ಋತುವಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ”ಹವಾಮಾನ ಚತುರ ಡಿಜಿಟಲ್ ಕೃಷಿ” ಎಂಬ ಘೋಷವಾಕ್ಯದಡಿ ಬೃಹತ್ ‘ಕೃಷಿ ಮೇಳ 2024’ ಹಮ್ಮಿಕೊಳ್ಳಲಾಗಿದೆ. ಈ ಮೇಳವು ನಾಳೆ ನವೆಂಬರ್ 14ರಿಂದ ನವೆಂಬರ್ 17ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಕೃಷಿ ಮೇಳ ಆಯೋಜನೆ ಕುರಿತು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ವಿ.ಸುರೇಶ್ ಅವರು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಮಾತ್ರವಲ್ಲದೇ, ಅರಣ್ಯ ಇಲಾಖೆ, ಮೀನುಗಾರಿ, ರೇಷ್ಮೆ ಇಲಾಖೆ, ಅರಣ್ಯ, ಪಶುಸಂಗೋಪನೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಸಮಾಜ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಹಕಾರದಲ್ಲಿ ಜರುಗಲಿದೆ ಎಂದು ಮಾಹಿತಿ ನೀಡಿದರು.
ಪ್ರತಿ ವರ್ಷ ಹೊಸ ಬೀಜ ತಳಿಗಳು, ತಂತ್ರಜ್ಞಾನ ಆವಿಷ್ಕಾರ, ಹೊಸ ಸಲಕರಣೆಗಳೊಂದಿಗೆ ನಡೆದುಕೊಂಡು ಬರುತ್ತಿರುವ ಕೃಷಿ ಮೇಳದಲ್ಲಿ ಈ ವರ್ಷವು ಒಟ್ಟು 04 ನಾಲ್ಕು ನೂತನ ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ.
ಹೊಸ 04 ನಾಲ್ಕು ನೂತನ ತಳಿಗಳು
* ಮುಸುಕಿನ ಜೋಳ ಸಂಕರಣ ಎಂ.ಎ.ಎಚ್ 15-84
* ಹಲಸಂದೆ ಕೆಬಿಸಿ-12
* ಸೂರ್ಯ ಕಾಂತಿ ಕೆ.ಬಿ.ಎಸ್.ಎಚ್-90
* ಬಾಜ್ರ ನೇಪಿಯರ್ ಪಿ.ಬಿ.ಎನ್-242
ಈ ನಾಲ್ಕು ಹೊತ ಬೀಜ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನು ರೈತರಿಗೆ ಮೇಳದಲ್ಲಿ ಲೋಕರ್ಪಾಣೆಗೊಳಿಸಲಾಗುವುದು. ಅವುಗಳ ಇಳುವರಿ, ಬಿತ್ತನೆ ವಿಧಾನ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುವುದು ಎಂದರು.
ಆಗಮಿಸುವ ಲಕ್ಷಾಂತರ ಸಾರ್ವಜನಿರಕು ಸೇರಿದಂತೆ ರೈತರಿಗೆ ಸಮಗ್ರ ಕೃಷಿ ಪದ್ಧತಿ, ಖುಷಿ ಬೇಸಾಯ, ರೇಷ್ಮೆ ಕೃಷಿ, , ನೂತನ ತಳಿಗಳ ಪ್ರಾತಕ್ಷಿಕೆ, ತೋಟಗಾರಿಕೆ, ಸಿರಿಧಾನ್ಯ, ಜಲಾನಯನ ನಿರ್ವಹಣೆ, ಸಾವಯವ ಕೃಷಿ, ಮಣ್ಣು ರಹಿತ ಕೃಷಿ ಪದ್ಧತಿ ಯಂತಹ ಅನೇಕ ಪ್ರಾತಕ್ಷಿಕೆಗಳಿಂದ ರೈತರಿಗೆ ಸೂಕ್ತ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದರು.
ಮೇಳದಲ್ಲಿ ಏನೆಲ್ಲ ಇರಲಿದೆ?
ಮೇಳದಲ್ಲಿ ಡಿಜಿಟಲ್ ಕೃಷಿಗೆ ಅಗತ್ಯವಾಗಿರುವ ಸಲಕರಣೆ ಪ್ರದರ್ಶನಗೊಳ್ಳಲಿವೆ. ಸಾಧನಗಳು ತಂತ್ರಜ್ಞಾನ ಸಹಿತ ಕೃಷಿ ಚಟುವಟಿಕೆಗಳನ್ನು ಸರಳಗೊಳಿಸಲು ಒತ್ತು ನೀಡಲಾಗಿದೆ. ಮಣ್ಣು ಮತ್ತು ಬೆಳೆಗಳ ಆರೋಗ್ಯ ಪರಿವೀಕ್ಷಣೆಗೆ ಮಲ್ಟಿಸ್ಪೆಕ್ಟ್ರಲ್ ಡ್ರೋನ್, ಕೃಷಿ ಡ್ರೋನ್, ರೋಬೋಟಿಕ್ ಕೃಷಿ ಯಂತ್ರ, ಹಣ್ಣಿನ ವರ್ಗೀಕರಣ ಯಂತ್ರ, ಸ್ವಯಂಚಾಲಿತ ರಸಗೊಬ್ಬರ ಹರಡುವ ಯಂತ್ರ, ಆಳ ನಿಯಂತ್ರಕ ರೋಟವೇಟರ್, ಸ್ವಯಂಚಾಲಿತ ಬೂಮ್ ಸ್ಟೇಯರ್, ಸೌರಶಕ್ತಿ ಚಾಲಿತ ಬರ್ಡ್ ಸ್ಟೇರರ್ಗಳು ಕೃಷಿ ಮೇಳದಲ್ಲಿ ಪ್ರದರ್ಶನವಾಗಲಿವೆ.
ಈ ವರ್ಷವು ಕೃಷಿಯಲ್ಲಿ ಸಾಧನೆ ಮಾಡಿದ ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಮೇಳದಲ್ಲಿ 700 ಮಳಿಗೆ, ಅಗತ್ಯ ವ್ಯವಸ್ಥೆ
ಒಟ್ಟು 700 ಮಳಿಗೆಗಳು ಕೃಷಿ ಮೇಳದಲ್ಲಿ ಇರಲಿವೆ. ಹೊಸ ನೂತನ ತಂತ್ರ ಜ್ಞಾನ, ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ಪರಿಹಾರ, ಪ್ರಾತಕ್ಷ್ಮತೆ ಒದಗಿಸಲಿದ್ದೇವೆ. ಕೃಷಿ ಮೇಳಕ್ಕೆ ಆಗಮಿಸುವ ರೈತರು ಹಾಗೂ ಸಾರ್ವಜನಿಕರಾಗಿ ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣ ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಸಹ ಇರುತ್ತದೆ.
ಕೃಷಿ ಮೇಳಕ್ಕೆ ಬರುವವರಿಗೆ ಅನುಕೂಲವಾಗಲೆಂದು ಪ್ರತ್ಯೇಕ ವಾಹನ ನಿಲುಗಡೆ, ಉಚಿತ ಪ್ರವೇಶ, ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಕಲ್ಲಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಕೋರಿದ್ದಾರೆ.


