ಬೆಂಗಳೂರು: ಬೆಸ್ಕಾಂನಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಹಲವರಿಂದ 23 ಲಕ್ಷ ರೂ. ಹಣ ಪಡೆದು ವಂಚಿಸಿರುವ ಆರು ಮಂದಿ ವಿರುದ್ಧ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಲ್ಲದೆ, ಹೊರಗುತ್ತಿಗೆ ನೌಕರಿ ಕೆಲಸಕ್ಕೆ ಸೇರಿಸಿ 18ತಿಂಗಳ ನಂತರ ಖಾಯಂ ಆಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಬಗ್ಗೆ ಲೋಹಿತ್ಗೌಡ ಎಂಬುವರು ದೂರು ನೀಡಿದ್ದಾರೆ.
ದಾಸರಹಳ್ಳಿಯ ಪ್ರವೀಣ್ ಎಂ ಸೋಮನ ಕಟ್ಟಿ (30), ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ವಿಘ್ನೇಶ್ ಹೆಗಡೆ (44), ದಾಬಸ್ ಪೇಟೆಯ ವೆಂಕಟೇಶಯ್ಯ, ಆರ್ಟಿ ನಗರದ ಶಿವಣ್ಣ (63), ತಿಪ್ಪಸಂದ್ರದ ಶ್ರೀನಿವಾಸ್ (29) ಮತ್ತು ಸಹಕಾರನಗರದ ರಾಜನೀಶ್ (42) ವಿರುದ್ಧ ದೂರು ದಾಖಲಾಗಿದೆ.
ಮಾದವನಗರದ ಯಮುನಾಬಾಯಿ ರಸ್ತೆ ನಿವಾಸಿ ಲೋಹಿತ್ಗೌಡ ಅವರಿಗೆ 2021ರಲ್ಲಿ ಪರಿಚಯವಾದ ಪ್ರವೀಣ ಹಾಗೂ ವಿಘ್ನೇಶ್ ಹೋಟೆಲ್ವೊಂದಕ್ಕೆ ಕರೆಸಿಕೊಂಡು ಆ ಮೂಲಕ ಮತ್ತೆ ಮೂವರನ್ನು ಪರಿಚಯಿಸಿ ನಿಮಗೆ ಬೆಸ್ಕಾಂ, ಕೆಪಿಟಿಸಿಎಲ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾರೆ. ಆ ಸಂದರ್ಭದಲ್ಲಿ ಕೆಲವು ಉದ್ಯೋಗದ ಆರ್ಡರ್ ಪ್ರತಿಗಳನ್ನು ತೋರಿಸಿದ್ದಾರೆ.


