ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸದಿರುವುದರಿಂದ ಜುಲೈ 8ರಿಂದ ನಗರದಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ತಿಳಿಸಿದೆ.
ಗುತ್ತಿಗೆದಾರರ ಒಂಬತ್ತು ಬೇಡಿಕೆಗಳನ್ನು ಈಡೇರಿಸುವಂತೆ ಎರಡು ತಿಂಗಳಿಂದ ಐದಾರು ಬಾರಿ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನಡೆದ ಸಭೆಯಲ್ಲೂ ಬೇಡಿಕೆ ಈಡೇರಿಸಲು ಸೂಚಿಸಲಾಗಿತ್ತು. ಆದರೂ ಮುಖ್ಯ ಆಯುಕ್ತರು ಗುತ್ತಿಗೆದಾರರನ್ನು ಕಡೆಗಣಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ, ಸೋಮವಾರದಿಂದ ಎಲ್ಲ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಂಗಳವಾರ ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ತಿಳಿಸಿದರು.
ವಾರ್ಡ್ ಕಾಮಗಾರಿ, ಮಳೆನೀರುಗಾಲುವೆ, ರಸ್ತೆಗಳು, ವೈಟ್ ಟಾಪಿಂಗ್, ಕೆರೆ, ಯೋಜನೆ, ತೋಟಗಾರಿಕೆ ವಿಭಾಗ ಸೇರಿದಂತೆ ಎಲ್ಲ ರೀತಿಯ ಕಾಮಗಾರಿಗಳನ್ನೂ ಸ್ಥಗಿತಗೊಳಿಸಲು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಮ್ಮತಿಸಿದ್ದಾರೆ’ ಎಂದು ಹೇಳಿದರು.
ಬೇಡಿಕೆಗಳೇನು?: ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್ಲುಗಳನ್ನು ಪಾವತಿ ಮಾಡುವ ಸಮಯದಲ್ಲಿ ತಡೆಹಿಡಿದಿರುವ ಶೇ 25 ಬಾಕಿ ಹಣ ಬಿಡುಗಡೆ ಮಾಡಬೇಕು. 24 ತಿಂಗಳಿಂದ ಕೈಗೊಂಡ ಕಾಮಗಾರಿಗಳಿಗೆ ಸುಮಾರು 1,600 ಕೋಟಿ ರೂ. ಪಾವತಿಸಬೇಕಾಗಿದ್ದು, ಅದರಲ್ಲಿ ಕನಿಷ್ಠ 12 ತಿಂಗಳ ಎಲ್ಒಸಿ ಬಿಡುಗಡೆ ಮಾಡಬೇಕು. ಗುತ್ತಿಗೆದಾರರಿಗೆ ಬಿಲ್ ಸಲ್ಲಿಸಲು ಸರಳ ಮಾದರಿ ಹಾಗೂ ಟಿವಿಸಿಸಿ ರ್ಯಾಂಡಮೈಸೇಷನ್ ತನಿಖೆ ಕೈಬಿಡಬೇಕು. ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಿಂದ ಬಿಲ್ ಪಾವತಿಸಬೇಕು. ಕಟ್ಟಡ ಕಾಮಗಾರಿಗಳ ಬಿಲ್ಗಳನ್ನು ‘ಎಸೆನ್ಷಿಯಲ್’ ಎಂದು ಪರಿಗಣಿಸಿ ತ್ವರಿತವಾಗಿ ಪಾವತಿಸಬೇಕು. ಹಿಂದಿನ ಪದ್ಧತಿಯಂತೆ ಟೆಂಡರ್ ಪ್ರೀಮಿಯಂ ಅಧಿಕಾರವನ್ನು ಮುಖ್ಯ ಎಂಜಿನಿಯರ್ಗೆ ನೀಡಬೇಕು. ಕೆಆರ್ಐಡಿಎಲ್ ಸಂಸ್ಥೆಯ ಬಾಕಿ ಬಿಲ್ಲುಗಳನ್ನು ಪಾವತಿಸಬೇಕು ಎಂಬ ಬೇಡಿಕೆಗಳನ್ನು ಗುತ್ತಿಗೆದಾರರ ಸಂಘ ಮುಂದಿಟ್ಟಿದೆ.
ದರ್ಶನ್ ಮೇಲಿನ ಅಭಿಮಾನದ ಹುಚ್ಚು: 1 ವರ್ಷದ ಮಗುವಿಗೆ ಕೈದಿಯಂತೆ ಬಟ್ಟೆ ತೊಡಿಸಿ, ಖೈದಿ ನಂಬರ್ ಹಾಕಿ ಫೋಟೋಶೂಟ್


