Greater Bengaluru News9 : ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ವದಂತಿಗಳು ತೀವ್ರಗೊಂಡಿರುವ ಬೆನ್ನಲ್ಲೇ, ರಾಜಭವನದ ಲೋಕಭವನದಲ್ಲಿ ನಡೆಯಬೇಕಿದ್ದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಕುರಿತು ಪ್ರಮುಖ ಸ್ಪಷ್ಟನೆ ಲಭ್ಯವಾಗಿದೆ.
ಸದ್ಯಕ್ಕೆ ಲೋಕಭವನದಲ್ಲಿ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಕನಿಷ್ಠ ಎರಡು ದಿನಗಳ ಕಾಲ ಕಾಯುವಂತೆ ರಾಜ್ಯ ಸರ್ಕಾರವು ಮೌಖಿಕವಾಗಿ ಸೂಚಿಸಿದೆ ಎಂದು ತಿಳಿದುಬಂದಿದೆ.
ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಲಿರುವ ನೂತನ ಸಚಿವರ ಪಟ್ಟಿ ಇನ್ನೂ ಅಂತಿಮಗೊಳ್ಳದ ಕಾರಣ ಈ ವಿಳಂಬ ಉಂಟಾಗಿದೆ. ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನಡುವಿನ ಚರ್ಚೆಗಳು ಇನ್ನೂ ಪೂರ್ಣಗೊಳ್ಳದಿರುವುದರಿಂದ, ನಾಳೆ (ಬುಧವಾರ) ಲೋಕಭವನದಲ್ಲಿ ಯಾವುದೇ ಪ್ರಮಾಣವಚನ ಸಮಾರಂಭ ನಡೆಯುವುದಿಲ್ಲ ಎಂಬುದನ್ನು ರಾಜಭವನ ಹಾಗೂ ಸರ್ಕಾರಿ ಮೂಲಗಳು ಖಚಿತಪಡಿಸಿವೆ.
ಕೊನೆಯ ಕ್ಷಣದ ತುರ್ತು ರಾಜಕೀಯ ಬೆಳವಣಿಗೆಗಳು ಅಥವಾ ದಿಢೀರ್ ಬದಲಾವಣೆಗಳನ್ನು ಹೊರತುಪಡಿಸಿದರೆ, ಮುಂದಿನ ಎರಡು ದಿನಗಳ ಕಾಲ ಲೋಕಭವನದಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳಿರುವುದಿಲ್ಲ. ದೆಹಲಿ ಮಟ್ಟದಲ್ಲಿ ನೂತನ ಸಚಿವರ ಆಖೈರು ಪಟ್ಟಿ ಸಿದ್ಧಗೊಂಡು ಅಧಿಕೃತ ಮುದ್ರೆ ಬಿದ್ದ ನಂತರವಷ್ಟೇ, ಸಮಾರಂಭದ ಸಿದ್ಧತೆಗಳಿಗಾಗಿ ರಾಜ್ಯ ಸರ್ಕಾರವು ಲೋಕಭವನದ ಅಧಿಕಾರಿಗಳನ್ನು ಸಂಪರ್ಕಿಸಲಿದೆ. ಹೀಗಾಗಿ, ಸಚಿವ ಸಂಪುಟ ಕಸರತ್ತು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.


