ಬೆಂಗಳೂರು: ಅನಧಿಕೃತ ಕಟ್ಟಡಗಳ ನಿರ್ಮಾಣ ಮತ್ತು ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಿರ್ಲಕ್ಷ್ಯ ತೋರಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ)ಗಳಿಗೆ ನೋಟಿಸ್ ಜಾರಿ ಮಾಡುವಂತೆ ವಲಯ ಆಯುಕ್ತ ವಿನೋತ್ ಪ್ರಿಯಾ ಅವರಿಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ಸೂಚನೆ ನೀಡಿದರು.
ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಡಿ ವಲಯ ಕಛೇರಿಯ ಸಭಾಂಗಣ ಕೊಠಡಿಯಲ್ಲಿ ಬಿಬಿಎಂಪಿ ಆಯುಕ್ತರು ಸಾರ್ವಜನಿಕ ಕುಂದು-ಕೊರತೆಗಳನ್ನು ಆಲಿಸಿದರು.
ಈ ವೇಳೆ ಪಾರಿವಾಳಗಳ ಹಾವಳಿ, ಅಕ್ರಮ ಕಟ್ಟಡಗಳು, ಅನಧಿಕೃತ ಕಟ್ಟಡಗಳ ನಿರ್ಮಾಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳ ನಿರ್ಲಕ್ಷ್ಯಯುತ ನಡೆ, ದಕ್ಷಿಣ ವಲಯ ಆಯುಕ್ತರ ಕಚೇರಿ ಮತ್ತು ಸುತ್ತಮುತ್ತಲಿನ ಕಸದ ಹಾವಳಿ, ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಮಂಜೂರಾಗಿದ್ದರೂ ಕಾರ್ಯನಿರ್ವಹಣೆ ಮಾಡದ ಸಮುದಾಯ ಭವನ ಸಮಸ್ಯೆಗಳನ್ನು ಆಯುಕ್ತರ ಮುಂದೆ ಬಂದವು.
ಈ ವೇಳೆ ದಕ್ಷಿಣ ವಲಯದ ಉದ್ಯಾನವನ, ಮೈದಾನ, ಕೆರೆಗಳ ಸ್ಥಿತಿಗತಿ ಕುರಿತು ತಿಂಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಗಿರಿನಾಥ್ ಅವರು, ಅನಧಿಕೃತ ಕಟ್ಟಡಗಳ ನಿರ್ಮಾಣ ಮತ್ತು ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಿರ್ಲಕ್ಷ್ಯ ತೋರಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳಿಗೆ ನೋಟಿಸ್ ಜಾರಿ ಮಾಡುವಂತೆ ಪ್ರಿಯಾ ಅವರಿಗೆ ಸೂಚಿಸಿದರು.
ಉದ್ಯಾನ, ಮೈದಾನ ಹಾಗೂ ಕೆರೆಗಳಿಗೆ ಸಂಬಂಧಿಸಿದಂತೆ ಪ್ರತಿ ಸ್ಥಳಕ್ಕೂ ಅಧಿಕಾರಿಗಳು ಖುದ್ದಾಗಿ ಭೇಟಿ ನಿಡಿ ಜಿಯೊ ಲೊಕೇಶನ್ ಸಹಿತ ಛಾಯಾಚಿತ್ರದ ವರದಿ ಸಲ್ಲಿಸುವಂತೆ ತಿಳಿಸಿದರು.
ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗಾಗಿ ಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅದನ್ನು ಹೊರತುಪಡಿಸಿ ಬೇರೆಡೆ ವ್ಯಾಪಾರ ಮಾಡುವವರನ್ನು ತೆರವುಗೊಳಿಸಬೇಕು. ಪಾಲಿಕೆಯಿಂದ ಅನುಮತಿ ಪಡೆದ ಸ್ಥಳಗಳಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಹಾಗೂ ಶನಿವಾರದೊಳಗೆ ಫುಟ್ ಪಾತ್ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದರು.
ವಿವಿ ಪುರಂ ಮತ್ತು ಚಿಕ್ಕಪೇಟೆ ನಿವಾಸಿಗಳು ಧರ್ಮರಾಯ ಸ್ವಾಮಿ ದೇವಸ್ಥಾನ ಉಪವಿಭಾಗದ ಎಇಇ ಕೃಷ್ಣಕುಮಾರ್ ಅವರ ನಿರ್ಲಕ್ಷ್ಯದಿಂದ ಅಕ್ರಮ ನಿರ್ಮಾಣಗಳು ಶುರುವಾಗಿದೆ ಎಂದು ದೂರಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಡಿಸೆಂಬರ್ 26 ರೊಳಗೆ ಎಇಇ ವರದಿ ಸಲ್ಲಿಸಬೇಕು ಅಥವಾ ವಲಯ ಆಯುಕ್ತರು ಅವರನ್ನು ಅಮಾನತುಗೊಳಿಸಬೇಕು ಎಂದು ಸೂಚಿಸಿದರು.
ಗುರಪ್ಪನ ಪಾಳ್ಯದಲ್ಲಿ ಸಮುದಾಯ ಭವನ ನಿರ್ಮಾಣವಾಗಿ 4 ವರ್ಷಗಳಾಗಿವೆ. ಆದರೆ ಇನ್ನೂ ಸಮುದಾಯ ಭವನ ತೆರೆದಿಲ್ಲ ಎಂದು ಸ್ಥಳೀಯರು ದೂರಿದಾಗ, ‘ಬಾಕಿ ಕಾಮಗಾರಿಗೆ ಅಂದಾಜು ಪಟ್ಟಿ ಸಿದ್ಧಪಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಆದೇಶಿಸಿದರು.
ಇಂದು ಹುಟ್ಟೂರಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಅಂತ್ಯಕ್ರಿಯೆ: ಹೀಗಿದೆ ಪಾರ್ಥೀವ ಶರೀರ ಸಾಗುವ ರೂಟ್ ಮ್ಯಾಪ್


