ಬೆಂಗಳೂರು: ಹೈಟೆನ್ಷನ್ ವಿದ್ಯುತ್ ತಂತಿಯಿಂದ ಶಾಕ್ ಹೊಡೆದು ಅಸ್ವಸ್ಥನಾಗಿದ್ದ ಬಾಲಕ ಅನಂತ್ (10) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಜೂನ್ 15ರಂದು ಕೆ.ಆರ್.ಪುರಂನ ಸ್ವಾತಂತ್ರ್ಯ ನಗರದಲ್ಲಿ ಬಾಲಕನಿಗೆ ವಿದ್ಯುತ್ ಶಾಕ್ ತಗುಲಿದ ಘಟನೆ ಸಂಭವಿಸಿತ್ತು.
ನೇಪಾಳ ಮೂಲದ ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ಬಾಲಕ ನಗರದಲ್ಲಿ ವಾಸವಿದ್ದ. 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಬಾಲಕನ ತಾಯಿ, ಹೌಸ್ಕೀಪಿಂಗ್ ಕೆಲಸ ಮಾಡುತ್ತ ಮಕ್ಕಳನ್ನ ಪೋಷಿಸುತ್ತಿದ್ದರು.
ಮೇ 15 ರಂದು ಸಂಜೆ ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕ, ಪೊರಕೆಯನ್ನ ಎಸೆಯಲು ತೆರಳಿದ್ದ. ಆ ವೇಳೆ ಬಾಲಕನ ಕೈಯಲ್ಲಿದ್ದ ಪೊರಕೆ ಮನೆಯ ಪಕ್ಕದಲ್ಲಿ ಹಾದುಹೋಗಿರುವ ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿತ್ತು. ಇದರಿಂದ ಬಾಲಕನಿಗೆ ತೀವ್ರವಾಗಿ ವಿದ್ಯುತ್ ಶಾಕ್ ಹೊಡೆದಿತ್ತು. ತಕ್ಷಣ ಬಾಲಕನನ್ನ ಆತನ ಚಿಕ್ಕಪ್ಪ ಕೆ. ಆರ್. ಪುರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಕೈ, ಕಾಲು ಮತ್ತು ದೇಹದ ಕೆಲವು ಭಾಗಗಳಲ್ಲಿ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದರಿಂದ ಬಾಲಕನನ್ನ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 12:30ರ ಸುಮಾರಿಗೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.


