Greater Bengaluru News9 : ರಾಜಧಾನಿ ಬೆಂಗಳೂರಿನ ಹಲವೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಆಲಿಕಲ್ಲು ಮಳೆ ಆರಂಭವಾಗಿದೆ. ಮಳೆಯ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಹವಾಮಾನ ಇಲಾಖೆಯು ನಗರಕ್ಕೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಮುಂದಿನ ಮೂರು ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ.
ನಗರದ ಸಂಪಂಗಿರಾಮನಗರ, ಕಂಠೀರವ ಸ್ಟೇಡಿಯಂ, ಕಾರ್ಪೋರೇಷನ್ ಸರ್ಕಲ್ ಸುತ್ತಮುತ್ತ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿಯೂ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.
ಜಲಾವೃತಗೊಂಡ ರಸ್ತೆಗಳು; ಧರೆಗುರುಳಿದ ಬೃಹತ್ ಮರ
ನಗರದಲ್ಲಿ ಸಂಜೆ 6 ಗಂಟೆಯ ನಂತರ ದಿಢೀರನೆ ಹವಾಮಾನ ಬದಲಾಗಿದ್ದು, ವರುಣನ ಅಬ್ಬರ ಜೋರಾಗಿದೆ. ವಿಧಾನಸೌಧ, ಕಬ್ಬನ್ ಪಾರ್ಕ್, ಕಾರ್ಪೋರೇಷನ್ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಕೇಂದ್ರ ಭಾಗಗಳಲ್ಲಿ ಕಳೆದ ಅರ್ಧ ಗಂಟೆಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ರಸ್ತೆಗಳು ಜಲಾವೃತ: ಭಾರಿ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದು, ರಸ್ತೆಗಳ ಮೇಲೆ ನೀರು ಮೊಣಕಾಲುದ್ದ ಹರಿಯುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಆಟೋ ಚಾಲಕರು ತೀವ್ರ ಪರದಾಡುವಂತಾಗಿದೆ.
ಮರ ಉರುಳಿ ಟ್ರಾಫಿಕ್ ಜಾಮ್: ನಗರದ ಖನಿಜ ಭವನದ ಮುಂಭಾಗದಲ್ಲಿ ಭಾರಿ ಗಾಳಿಗೆ ಬೃಹತ್ ಮರವೊಂದು ರಸ್ತೆಗೆ ದರೆಗುರುಳಿದೆ. ಇದರ ಪರಿಣಾಮವಾಗಿ ರೇಸ್ ಕೋರ್ಸ್ ರಸ್ತೆ ಸುತ್ತಮುತ್ತ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ.
ಹವಾಮಾನ ಇಲಾಖೆಯ ಎಚ್ಚರಿಕೆ
“ಮುಂದಿನ 3 ಗಂಟೆಗಳ ಕಾಲ ಆಲಿಕಲ್ಲು ಹಾಗೂ ಬಿರುಗಾಳಿ ಸಹಿತ ಮಳೆಯ ಅಬ್ಬರ ಹೀಗೆಯೇ ಮುಂದುವರಿಯಲಿದೆ. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಮರಗಳ ಕೆಳಗೆ ಅಥವಾ ದುರ್ಬಲ ಕಟ್ಟಡಗಳ ಬಳಿ ಆಶ್ರಯ ಪಡೆಯಬಾರದು.”
ಸಂಜೆ ಕಚೇರಿ ಮುಗಿಸಿ ಮನೆಗೆ ಮರಳುವ ಅವಧಿಯಲ್ಲೇ ಮಳೆ ಮತ್ತು ಟ್ರಾಫಿಕ್ ಜಾಮ್ ಒಟ್ಟಿಗೇ ಆಘಾತ ನೀಡಿರುವುದರಿಂದ ಬೆಂಗಳೂರಿಗರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಬಿಬಿಎಂಪಿ ಮತ್ತು ಸಂಚಾರ ಪೊಲೀಸ್ ಸಿಬ್ಬಂದಿ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.


