BBMP
Loading ...

Siddaramaiah

Greater Bengaluru News9 : ಪಂಚ ರಾಜ್ಯಗಳ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಮುಂಬರುವ ಚುನಾವಣೆಯ ಬಗ್ಗೆ ಚರ್ಚೆ ಶುರುವಾಗಿದೆ. ಚುನಾವಣೆಗೆ ಇನ್ನೂ ಎರಡು ವರ್ಷ ಅವಧಿ ಇದ್ದರೂ 2028ಕ್ಕೆ ಕರ್ನಾಟಕವನ್ನು ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್‌ ಸಿದ್ದತೆ ಶುರುವಾಗಿದೆ. ಆದರೆ, ಈ ಚುನಾವಣೆಗೂ ಮೊದಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಅದುವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ.

ಜೂನ್ 10ರಿಂದ 24 ಒಳಗಾಗಿ ಐದು ಪಾಲಿಕೆಗಳ ಚುನಾವಣೆಗೆ ದಿನಾಂಕ ಫಿಕ್ಸ್ ಮಾಡಲು ಈಗಾಗಲೇ ಚುನಾವಣಾ ಆಯೋಗ ಪಾಲಿಕೆಗಳು ಆಯುಕ್ತರಿಗೆ ಸೂಚನೆ ನೀಡಿದೆ. ಹೀಗಾಗಿ, ರಾಜಕೀಯ ಪಕ್ಷಗಳಲ್ಲಿ ಈ ವಿಚಾರ ಸಂಚಲನ ಮೂಡಿಸಿದೆ. ಈಗಾಗಲೇ ಆರಂಭಿಕ ಹಂತದ ಚುನಾವಣಾ ಸಿದ್ದತೆಗೆ ಪಕ್ಷಗಳು ಮುಂದಾಗುತ್ತಿವೆ.

ನಾಯಕರ ದಿಢೀರ್ ಸಭೆ, ತಂತ್ರಗಾರಿಕೆ
ಜಿಬಿಎ ಚುನಾವಣೆಯ ಬಗ್ಗೆ ದಿನಾಂಕ ನಿಗದಿ ಮಾಡಲು ಚುನಾವಣಾ ಆಯೋಗ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಅಲರ್ಟ್ ಆಗಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಭಾನುವಾರ ಮಹತ್ವದ ಸಭೆ ನಡೆದಿದೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಈ ಸಭೆಯಲ್ಲಿ ಭಾಗಿಯಾಗಿದ್ದರು. ಜಿಬಿಎ ಚುನಾವಣೆಯ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾಗಿರುವ ತ್ರಂತ್ರಗಾರಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ಅಗಿದೆ ಎಂಬ ಮಾಹಿತಿ ಇದೆ.

ಎರಡು ಪಕ್ಷಗಳ ಸವಾಲು!
ರಾಜ್ಯದಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷವಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಎದುರಿಸಬೇಕಾಗಿದೆ. ಲೋಕಸಭೆ ಚುನಾವಣೆಯ ಬಳಿಕ ಇದೀಗ ಎರಡನೇ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಎದುರಿಸುವ ಸಾಧ್ಯತೆ ಇದೆ. ಇದು ಯಶಸ್ವಿಯಾದಲ್ಲಿ 2028ರ ವಿಧಾನಸಭೆ ಚುನಾವಣೆಗೂ ಅನುಕೂಲಕರ ವಾತಾವರಣ ನಿರ್ಮಿಸಿಕೊಡಿಲಿದೆ. ಹೀಗಾಗಿ ಮೈತ್ರಿ ಪಕ್ಷವನ್ನು ಕಟ್ಟಿಹಾಕುವುದು ಆಡಳಿತರೂಢ ಕಾಂಗ್ರೆಸ್ ಪಾಲಿಗೆ ಬಹುದೊಡ್ಡ ಸವಾಲಾಗಿದೆ.

ಐದು ಪಾಲಿಕೆಗಳಲ್ಲಿ ಗೆಲುವು ಸಾಧ್ಯತೆ ಚರ್ಚೆ
ಬಿಬಿಎಂಪಿಯನ್ನು ಜಿಬಿಎ ಎಂಬ ವಿಭಜನೆ ಮಾಡಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ ನಲ್ಲಿ ವಿರೋಧ ವ್ಯಕ್ತವಾಗಿತ್ತು. ಬೆಂಗಳೂರನ್ನು ಐದು ತುಂಡುಗಳಾಗಿ ವಿಭಜನೆ ಮಾಡುವ ಮೂಲಕ ಮೂಲ ಬೆಂಗಳೂರಿಗೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪವನ್ನು ಬಿಜೆಪಿ ಮಾಡುತ್ತಿತ್ತು. ಅಷ್ಟೇ ಅಲ್ಲದೆ, ಬೆಂಗಳೂರು ನಗರವನ್ನು ಐದು ಪಾಲಿಕೆಗಳಾಗಿ ವಿಭಜನೆ ಮಾಡಿರುವ ಹಿಂದೆ ಚುನಾವಣೆ ಗೆಲ್ಲುವ ಹುನ್ನಾರ ಇದೆ ಎಂಬ ಆರೋಪ ಮಾಡಲಾಗಿತ್ತಿದೆ.

ಆದರೆ ಆಡಳಿತರೂಢ ಕಾಂಗ್ರೆಸ್‌ಗೆ ಇದು ಅಷ್ಟೊಂದು ಸುಲಭದ ತುತ್ತಲ್ಲ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ, ಮೆಟ್ರೋ ದರ ಏರಿಕೆ, ನಗರದ ಅಭಿವೃದ್ದಿಯಲ್ಲಿ ಹಿನ್ನಲೆ, ಘನತ್ಯಾಜ್ಯದ ಸಮಸ್ಯೆ ಹಾಗೂ ರಸ್ತೆ ಗುಂಡಿಗಳು ಚುನಾವಣೆಯ ಪ್ರಮುಖ ಅಸ್ತ್ರವಾಗಲಿದೆ.

ರಸ್ತೆ ಗುಂಡಿ ವಿಚಾರವಾಗಿ ಉದ್ಯಮಿಗಳು ಟ್ವೀಟ್ ಮಾಡಿದ ಪರಿಣಾಮ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಇದನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ದ ಟೀಕಾಸ್ತ್ರವಾಗಿ ಬಳಕೆ ಮಾಡಿತ್ತು. ಈ ನಡುವೆ ವಿಧಾನಸಭೆಯಲ್ಲಿ ಬೆಂಗಳೂರು ರಸ್ತೆ ಗುಂಡಿಗಳು ಹಾಗೂ ಅಪಘಾತಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಅವರು ಕೊಟ್ಟ ಲಿಖಿತ ಉತ್ತರದ ಅಂಕಿ- ಅಂಶಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸುತ್ತಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಜಿಬಿಎ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಮಹತ್ವದ ಸಭೆಯನ್ನು ನಡೆಸಲಾಗಿದೆ. ಖಾಸಗಿ ಹೋಟೆಲ್ ನಲ್ಲಿ ಸಿಎಂ, ಡಿಸಿಎಂ ಜೊತೆ ಸಭೆ ನಡೆಸಿರುವ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇದ್ದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರನ್ನೂ ಕರೆಸಿಕೊಂಡು ಚರ್ಚೆ ನಡೆಸಿರುವ ಸುರ್ಜೇವಾಲಾ ಜಿಬಿಎ ಚುನಾವಣೆಗೆ ಬಿಜೆಪಿ, ಜೆಡಿಎಸ್‌ ಮೈತ್ರಿ ಪಕ್ಷಗಳನ್ನ ಎದುರಿಸುವ ಕುರಿತು ಚರ್ಚೆ ನಡೆಸಿದ್ದಾರೆ.ಈ ವೇಳೆ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಕೂಡ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದ್ದು, ಚುನಾವಣೆಗೆ ಸಿದ್ದತೆ ಜೊತೆಗೆ ಕಾನೂನಾತ್ಮಕ ಅಂಶಗಳ ಕುರಿತಾಗಿಯೂ ಚರ್ಚೆ ನಡೆದಿದೆ ಎಂಬ ಮಾಹಿತಿ ಇದೆ.

Leave a Reply

Your email address will not be published. Required fields are marked *