Greater Bengaluru News9 : ಶನಿವಾರ ಸಂಜೆ ವಿಧಿವಶರಾಗಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದೆ.
ದೇವೇಗೌಡರೊಂದಿಗಿನ 72 ವರ್ಷಗಳ ಸುದೀರ್ಘ ದಾಂಪತ್ಯ ಯಾನವನ್ನು ಚೆನ್ನಮ್ಮ ಮುಗಿಸಿದ್ದಾರೆ. ಅಂತಿಮ ವಿಧಿವಿಧಾನದಲ್ಲಿ ಭಾಗಿಯಾಗಿದ್ದ ಪುತ್ರರಾದ ಹೆಚ್.ಡಿ ರಮೇಶ್, ಹೆಚ್ಡಿ ರೇವಣ್ಣ, ಮೊಮ್ಮಗ ಸೂರಜ್, ಚೆನ್ನಮ್ಮನವರ ಪಲ್ಲಕ್ಕಿಗೆ ಹೆಗಲು ಕೊಟ್ಟರು.
ಸಮಾಧಿ ಗುಂಡಿಗೆ ಪಾರ್ಥಿವ ಶರೀರ ಇಳಿಸಿ ಅಂತಿಮ ಪೂಜೆ ಸಲ್ಲಿಸಲಾಗಿದ್ದು, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಚೆನ್ನಮ್ಮನಿಗೆ ಹೂವು, ತುಳಸಿ, ಪತ್ರೆ ಸಮರ್ಪಿಸಿದರು. ಹೀಗೆ ಎಲ್ಲಾ ಪೂಜೆಗಳ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಚೆನ್ನಮ್ಮನವರ ಅಂತ್ಯಕ್ರಿಯೆ ನೆರವೇರಿತು.
8 ದಶಕ ಸಾರ್ಥಕ ಜೀವನ ನಡೆಸಿದ್ದ ಚೆನ್ನಮ್ಮ, ರಂಗನಾಥನ ಬೆಟ್ಟದ ತಪ್ಪಲಿನಲ್ಲೇ ಮಣ್ಣಲ್ಲಿ ಮಣ್ಣಾದರು. ಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಪ್ರಲ್ಹಾದ ಜೋಶಿ, ವಿ ಸೋಮಣ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.


