Greater Bengaluru News9 : ವಿಚ್ಛೇದಿತ ಪತ್ನಿ ಉದ್ಯೋಗದಲ್ಲಿದ್ದಾರೆ ಎಂಬ ಕಾರಣದಿಂದ ಅಪ್ರಾಪ್ತ ಮಗಳಿಗೆ ನೀಡಬೇಕಾದ ಜೀವನಾಂಶವನ್ನು ಕಡಿತಗೊಳಿಸಲು ತಂದೆಯು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಾಲಯ ತೀರ್ಪಿನಲ್ಲಿ, ತಾಯಿಗೆ ಆದಾಯವಿದ್ದರೂ ಮಗುವನ್ನು ಪೋಷಿಸುವುದು ತಂದೆಯ ಕಾನೂನುಬದ್ಧ ಕರ್ತವ್ಯವಾಗಿದ್ದು, ಈ ಹೊಣೆಗಾರಿಕೆಯಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
2014ರ ಸೆಪ್ಟೆಂಬರ್ 30 ರಂದು ಚಾಮರಾಜನಗರ ಜಿಲ್ಲಾ ಪ್ರಧಾನ ಸಿವಿಲ್ ಕೋರ್ಟ್ ಮತ್ತು 2025ರ ಮಾರ್ಚ್ 28 ರಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಹೊರಡಿಸಲಾದ ಆದೇಶದ ವಿರುದ್ಧ ಅರ್ಜಿದಾರ ಎ.ಕೆ. ಅರುಣ್ ವಾದಿಸಿದ್ದರು. ಹೈಕೋರ್ಟ್ ತೀರ್ಪಿನಲ್ಲಿ, ಅಪ್ರಾಪ್ತ ಮಗುವಿನ ಅಗತ್ಯಗಳನ್ನು ಪೂರೈಸುವುದು ತಂದೆಯ ಕಾನೂನುಬದ್ಧ ಕರ್ತವ್ಯವಾಗಿದ್ದು, ಹಿಂದಿನ ಆದೇಶಗಳು ಸೂಕ್ತವಾಗಿವೆ ಎಂದು ನಿರ್ಧರಿಸಲಾಗಿದೆ.
ವಿಚಾರಣಾ ನ್ಯಾಯಾಲಯಗಳು ನಿಗದಿಸಿರುವ ಜೀವನಾಂಶದ ಮೊತ್ತ ಹೆಚ್ಚಿದೆ ಹಾಗೂ ತನ್ನ ಸಾಮರ್ಥ್ಯಕ್ಕೆ ಮೀರಿದೆ. ವಿಚ್ಛೇದಿತ ಪತ್ನಿ ಉದ್ಯೋಗ ಮಾಡುತ್ತಿದ್ದು, ಮಾಸಿಕ 61 ಸಾವಿರ ರು. ವೇತನ ಪಡೆಯುತ್ತಿದ್ದಾರೆ. ವಿವಾಹ ಅಸಿಂಧುಗೊಂಡು, ವಿಚ್ಚೇದನ ಮಂಜೂರಾಗಿದ್ದರೂ ಮತ್ತು ಪತ್ನಿಯು ಮಗುವನ್ನು ಆರೈಕೆ ಮಾಡಲು ಆರ್ಥಿಕ ಸಾಮರ್ಥ್ಯ ಹೊಂದಿದ್ದರೂ ವಿಚಾರಣಾ ನ್ಯಾಯಾಲಯಗಳು ಮಗುವಿನ ಜೀವನಾಂಶಕ್ಕೆಂದು ಮಾಸಿಕ 5 ಸಾವಿರ ರು. ನೀಡಬೇಕೆಂಬ ಹೊರೆ ಹಾಕಿದೆ. ಇದು ನ್ಯಾಯಸಮ್ಮತವಾಗಿಲ್ಲ. ಆದ್ದರಿಂದ ಜೀವನಾಂಶ ಮೊತ್ತವನ್ನು ಕಡಿತಗೊಳಿಸುವ ಅಗತ್ಯವಿದೆ ಎಂದು ಅರ್ಜಿದಾರರು ಕೋರಿದ್ದರು.
ಈ ವಾದ ಒಪ್ಪದ ಹೈಕೋರ್ಟ್, ವಿಚ್ಛೇದಿತ ಪತ್ನಿ 61 ಸಾವಿರ ರು. ಮಾಸಿಕ ವೇತನ ಪಡೆಯುತ್ತಾರೆ ಎಂಬುದನ್ನು ಸಾಬೀತುಪಡಿಸಲು ಅಗತ್ಯವಾದ ಸಾಕ್ಷ್ಯ-ದಾಖಲೆಗಳನ್ನು ಅರ್ಜಿದಾರರು ನ್ಯಾಯಾಲಯಗಳ ಮುಂದಿರಿಸಿಲ್ಲ. ಹಾಗೊಂದು ವೇಳೆ ಮಗುವಿನ ತಾಯಿ ಆದಾಯ ಮೂಲ ಹೊಂದಿರುವುದಾಗಿ ಕಲ್ಪಿಸಿಕೊಂಡರೂ ಸಹ ಮಗಳ ಜೀವನ ನಿರ್ವಹಣೆಯ ಕಾನೂನುಬದ್ಧ ಹೊಣೆಗಾರಿಕೆಯಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.


