ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ನಷ್ಟ ತುಂಬಿಸಲು ಬಿಬಿಎಂಪಿ ಹಾಗೂ ಸರ್ಕಾರ ಇ -ಖಾತಾ ಪರಿಚಯಿಸಿದೆ. ಆದರೆ, ಬಿಬಿಎಂಪಿಯ ಕೆಲವು ಅಧಿಕಾರಿಗಳು ಇ- ಖಾತಾ ಮಾಡಿಸುವುದಕ್ಕೂ ಸಾರ್ವಜನಿಕರಿಂದ ದುಡ್ಡು ಪೀಕುತ್ತಿರುವ ಆರೋಪ ಕೇಳಿ ಬಂದಿದೆ. ಈ ರೀತಿ ಆರೋಪ ಕೇಳಿ ಬರುತ್ತಿದ್ದಂತೆಯೇ ಬಿಬಿಎಂಪಿ ಹೈ ಅಲರ್ಟ್ ಆಗಿದೆ. ಬಿಬಿಎಂಪಿಯ ಯಾವುದೇ ಕಾಮಗಾರಿ ಅಥವಾ ಹೊಸ ಯೋಜನೆಗಳನ್ನು ಪರಿಚಯಿಸಿದರೂ ಅದರಲ್ಲಿ ಭ್ರಷ್ಟಾಚಾರದ ವಾಸನೆ ಇದ್ದೇ ಇರುತ್ತೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಮೊದಲಿನಿಂದಲೂ ಇದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇದೀಗ ಮಹತ್ವದ ಇ – ಖಾತಾದಲ್ಲೂ ಕೆಲವು ಅಧಿಕಾರಿಗಳು ದುಡ್ಡು ಕೇಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ರೀತಿ ಮಾಡುವ ಅಧಿಕಾರಿಗಳಿಗೆ ಬುದ್ಧಿ ಕಲಿಸಲು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದವರು ಹಾಗೂ ಆಸ್ತಿ ಸಂಕ್ಷಣೆಯ ಮಹತ್ವದ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಸರ್ಕಾರ ಇ -ಖಾತಾ ಯೋಜನೆಯನ್ನು ಪರಿಚಯಿಸಿದೆ. ಅಲ್ಲದೇ ಪಾಲಿಕೆಗೆ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ (ಆಸ್ತಿ ತೆರಿಗೆ ಕಟ್ಟದವರಿಂದ) ಕೋಟ್ಯಾಂತರ ರೂಪಾಯಿ ಆದಾಯ ನಷ್ಟವಾಗ್ತಿದೆ. ಇದನ್ನೆಲ್ಲ ತಪ್ಪಿಸಬೇಕು ಎನ್ನುವ ಮಹತ್ವದ ಉದ್ದೇಶದಿಂದ ಇ – ಖಾತಾ ಪರಿಚಯ ಮಾಡಲಾಗಿದೆ. ಆದರೆ, ಕೆಲವು ಅಧಿಕಾರಿಗಳು ಇ – ಖಾತಾ ಮಾಡಿಸುವುದಕ್ಕೂ ಜನರಿಂದ ಹಣ ಪೀಕುತ್ತಿರುವ ಆರೋಪಗಳು ಕೇಳಿ ಬಂದಿವೆ. ಇದು ಬಿಬಿಎಂಪಿಗೆ ತೀವ್ರ ಮುಜುಗರವನ್ನು ಉಂಟು ಮಾಡಿದೆ. ಹೀಗಾಗಿ, ಇದಕ್ಕೆ ಬ್ರೇಕ್ ಹಾಕುವುದಕ್ಕೆ ಪಾಲಿಕೆ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ಇ – ಖಾತಾ ವಿಚಾರವಾಗಿ ಬಿಬಿಎಂಪಿಯು ಇದೀಗ ಇ-ಖಾತಾ ಸಾರ್ವಜನಿಕ ಸಹಾಯವಾಣಿ 9480683695 ಪ್ರಾರಂಭ ಮಾಡಿದೆ. ಅಲ್ಲದೇ ಲಂಚ ತೆಗೆದುಕೊಳ್ಳುವ ಅಥವಾ ಇ – ಖಾತಾ ಮಾಡಿಸಲು ಲಂಚ ಕೇಳುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಾರ್ವಜನಿಕರು ಇ-ಖಾತಾ ಪಡೆಯಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ವೃತ್ತಿಪರ, ಏಕ ಇ-ಖಾತಾ ಸಾರ್ವಜನಿಕರ ಸಹಾಯವಾಣಿಯನ್ನು 9480683695 ಪ್ರಾರಂಭಿಸಿರುವುದಾಗಿ ಬಿಬಿಎಂಪಿ ಹೇಳಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಸಾರ್ವಜನಿಕರಿಗೆ ಇ-ಖಾತಾಗಳು ಸುಗಮವಾಗಿ ಸಿಗಬೇಕು ಎನ್ನುವ ಕಾರಣಕ್ಕೆ ಬಿಬಿಎಂಪಿಯು ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲಾಗಿದೆ.
ಬಿಬಿಎಂಪಿಯು ತೆಗೆದುಕೊಂಡಿರುವ ತುರ್ತು ಕ್ರಮಗಳು
1. ವೃತ್ತಿಪರ, ಏಕ ಇ-ಖಾತಾ ಸಾರ್ವಜನಿಕರ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
eKhata Citizen Helpline – 9480683695
2. ಬಿಬಿಎಂಪಿಯಲ್ಲಿ ಇ – ಖಾತಾ ಮಾಡಿಸಲು ಯಾರೇ ಲಂಚ ಕೇಳಿದರೆ ಅಥವಾ ವಿಳಂಬವಾದರೆ, ದಯವಿಟ್ಟು ಸಾರ್ವಜನಿಕರ ಸಹಾಯವಾಣಿಗೆ ಕರೆ ಮಾಡಿ ಎಂದು ಬಿಬಿಎಂಪಿಯು ಹೇಳಿದೆ.
3. ಅಲ್ಲದೇ ಸಾರ್ವಜನಿಕರು ಸಹ ತಾವೇ ಆನ್ಲೈನ್ನಲ್ಲಿ ಇ-ಖಾತಾವನ್ನು ಮಾಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿರುವುದಾಗಿ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
https://BBMPeAasthi.karnataka.gov.in
ಸಾರ್ವಜನಿಕರು YouTube ತರಬೇತಿ ವೀಡಿಯೊಗಳನ್ನು ನೋಡಬಹುದು: ಕನ್ನಡದಲ್ಲಿ: https://youtu.be/JR3BxET46po ಹಾಗೂ ಇಂಗ್ಲೀಷ್ನಲ್ಲಿ ವಿಡಿಯೋ ಇದೆ: https://youtu.be/GL8CWsdn3wo
4. ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸರಳವಾಗಿ ಇ-ಖಾತಾ ನೀಡಲು ಮುಂದಾಗಿದ್ದು, 1000ಕ್ಕೂ ಅಧಿಕ ಹೆಚ್ಚುವರಿ ಕೇಸ್ ವರ್ಕರ್ ಲಾಗಿನ್ಗಳನ್ನು ನೀಡಲಾಗಿದೆ. ಅಲ್ಲದೇ 200ಕ್ಕೂ ಅಧಿಕ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಇನ್ನು ಯಾವುದೇ ಅಧಿಕಾರಿಗಳಿಂದ ಯಾವುದಾದರೂ ಅನಗತ್ಯ ವಿಳಂಬವಾದರೆ, ಪಾಲಿಕೆಯು ಕ್ರಮ ಕೈಗೊಳ್ಳುತ್ತದೆ ಮತ್ತು ಸಾರ್ವಜನಿಕರು ಬದಲಿ ಸಹಾಯಕ ಕಂದಾಯ ಅಧಿಕಾರಿ/ಕೇಸ್ ವರ್ಕರ್ ಗಳನ್ನು ಸಹ ಭೇಟಿ ನೀಡಬಹುದಾಗಿದೆ ಎಂದು ಬಿಬಿಎಂಪಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಹೀಗಾಗಿ, ಇ – ಖಾತಾ ಮಾಡಿಸಲು ಯಾವುದೇ ಕಾರಣಕ್ಕೂ ಲಂಚ ಕೊಡ್ಬೇಡಿ.


