ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ( Actor Darshan ) ಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಅನಾರೋಗ್ಯದ ಆಧಾರದ ಮೇಲೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, 131 ದಿನಗಳ ಬಳಿಕ ದರ್ಶನ್ ಜೈಲಿನಿಂದ ಹೊರಬರಲಿದ್ದಾರೆ. ಇಷ್ಟು ದಿನ ಕತ್ತಲೆ ಕೋಣೆಯಲ್ಲಿದ್ದ ದರ್ಶನ್ ಬಾಳಲ್ಲಿ ಮತ್ತೆ ದೀಪಾವಳಿ ಬೆಳಕು ಮೂಡಿದೆ.
ನಿನ್ನೆ (ಅ.29) ನಟ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು ಮಂಡಿಸಿದ ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಬೆಳಗ್ಗೆ 10.30ರ ಸುಮಾರಿಗೆ ತೀರ್ಪು ಪ್ರಕಟಿಸಿದ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇದರಿಂದ ದರ್ಶನ್ ಅಭಿಮಾನಿಗಳಿಗೆ ಬಹಳ ಖುಷಿಯಾಗಿದೆ. ಆದರೆ, ಬೇಸರ ಸಂಗತಿ ಏನೆಂದರೆ, ಇದು ಮಧ್ಯಂತರ ಜಾಮೀನು ಆಗಿದ್ದು, ಕೇವಲ 6 ವಾರಗಳು ಮಾತ್ರ ದರ್ಶನ್ ಜೈಲಿನಿಂದ ಹೊರಗಡೆ ಇರಲಿದ್ದಾರೆ. ಸಮಯ ಮುಗಿದ ಬಳಿಕ ಮತ್ತೆ ಜೈಲು ಸೇರಬಹುದು ಅಥವಾ ಜಾಮೀನು ಅವಧಿ ವಿಸ್ತರಣೆ ಕೂಡ ಆಗಬಹುದು.
ಈ ಆರು ವಾರಗಳಲ್ಲಿ ನಟ ದರ್ಶನ್ ತಮಗಿರುವ ಆರೋಗ್ಯ ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ಒಂದು ವಾರದಲ್ಲಿ ದರ್ಶನ್ ಚಿಕಿತ್ಸೆಯ ವಿವರವನ್ನು ಸಹ ಕೋರ್ಟ್ ಸಲ್ಲಿಸಬೇಕಿದೆ. ಇನ್ನು ದರ್ಶನ್ ಪಾಸ್ಪೋರ್ಟ್ ಅನ್ನು ಕೂಡ ಕೋರ್ಟ್ ವಶಕ್ಕೆ ನೀಡಬೇಕಿದೆ. ಪಾಸ್ಪೋರ್ಟ್ ವಶಕ್ಕೆ ನೀಡಲು ಸರ್ಕಾರ ಪರ ವಕೀಲ ಪ್ರಸನ್ನ ಕುಮಾರ್ ಆಗ್ರಹಿಸಿದ್ದರು. ಇನ್ನು ದರ್ಶನ್ ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ದರ್ಶನ್ ಪರ ಸಿ.ವಿ ನಾಗೇಶ್ ಮಂಡಿಸಿದ ವಾದ: ಅರ್ಜಿದಾರರ ದೇಹದಲ್ಲಿ ಸಮರ್ಪಕವಾಗಿ ರಕ್ತಪರಿಚಲನೆ ಆಗುತ್ತಿಲ್ಲ, ಪಾದಗಳಲ್ಲಿ ನಂಬ್ ನೆಸ್ (ಮರಗಟ್ಟುವಿಕೆ) ಇದೆ. ಡಿಸ್ಕ್ ಸಮಸ್ಯೆ ಇದೆ. ಕಾಲಿನಲ್ಲಿ ನರದ ತೊಂದರೆ ಉಂಟಾಗಿದ್ದು, ಈಗಾಗಲೇ ಸ್ವಲ್ಪ ಮಟ್ಟಿಗೆ ಪಾದ ಸ್ಪರ್ಶ ಕಳೆದುಕೊಂಡಿದ್ದಾರೆ. ಹೀಗಿರುವಾಗ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾದರೆ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಎಡಮಾಡಿಕೊಡಬಹುದು. ವೈದ್ಯಕೀಯ ವರದಿಯಲ್ಲಿಯೂ ದರ್ಶನ್ ಅವರು ಪಾರ್ಶ್ವವಾಯು ತುತ್ತಾಗುವ ಸಾಧ್ಯತೆ ಅಧಿಕವಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದಿದೆ. ಇವೆಲ್ಲವನ್ನೂ ಗಮನಿಸಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ವಾದ: ವೈದ್ಯಕೀಯ ವರದಿಯಲ್ಲಿ ಪಾರ್ಶ್ವವಾಯು ತುತ್ತಾಗುತ್ತಾರೆ ಎಂದಿಲ್ಲ, ತುತ್ತಾಗಬಹುದು ಎಂದು ವೈದ್ಯರು ಅಂದಾಜಿಸಿದ್ದಾರಷ್ಟೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ ನಿಮ್ಮ ಮಾತಿನ ಅರ್ಥವೇನು? ಅರ್ಜಿದಾರರು ಅನಾರೋಗ್ಯದ ಅಂತಿಮ ಹಂತಕ್ಕೆ ತಲುಪುವರೆಗೆ ಕಾಯಬೇಕು ಎನ್ನುವುದೇ ಎಂದು ಪ್ರಶ್ನಿಸಿತು. ತದನಂತರ ಸರ್ಕಾರಿ ಪರ ವಕೀಲರನ್ನು ಉದ್ದೇಶಿಸಿ ನೋಡಿ ಆರೋಗ್ಯ ಎಂಬುವುದು ಮಾನವನ ಮೂಲಭೂತ ಹಕ್ಕು. ವ್ಯಕ್ತಿ ಆರೋಪಿಯಾಗಿರಲಿ, ಅಪರಾಧಿಯಾಗಿರಲಿ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಇದನ್ನು ಸುಪ್ರೀಂಕೋರ್ಟ್ ಸಹ ಹಲವು ವೇಳೆ ಪುನುರುಚ್ಚರಿಸಿದೆ ಎಂದಿತು.
ವಾದ-ಪತ್ರಿವಾದ ಆಲಿಸಿದ ನ್ಯಾಯಪೀಠ ಅರ್ಜಿಯ ತೀರ್ಪನ್ನು ಇಂದಿಗೆ ಪ್ರಕಟಿಸುವುದಾಗಿ ಹೇಳಿತ್ತು. ಇಂದು ಬೆಳಗ್ಗೆ ತೀರ್ಪು ಪ್ರಕಟಿಸಿದ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.
ಟಾಕ್ಸಿಕ್ ಚಿತ್ರೀಕರಣಕ್ಕಾಗಿ ಮರಗಳ ಮಾರಣಹೋಮ: ಕೇಸ್ ದಾಖಲಿಸಲು ‘ಸಚಿವ ಈಶ್ವರ್ ಖಂಡ್ರೆ’ ಸೂಚನೆ


