Greater Bengaluru News9 : ಬೆಸ್ಕಾಂ ಅಧಿಕಾರಿ ದರ್ಶನ್ ವಿದ್ಯುತ್ ಗುತ್ತಿಗೆದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ನಗರದ ಬೆಸ್ಕಾಂ ಕಚೇರಿಯಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
‘ನಿಟ್ಟೂರಿನ ಸಿದ್ಧಲಿಂಗೇಶ್ವರ ಎಲೆಕ್ಟ್ರಿಕಲ್ಸ್ ಮಾಲೀಕ, ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಶಶಿಕುಮಾರ್ ಅವರಿಗೆ ದರ್ಶನ್ ನಿಂದಿಸಿದ್ದಾರೆ. ಅವಮಾನ ಮಾಡಿ, ಅಗೌರವದಿಂದ ನಡೆದುಕೊಂಡಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಸಿ.ರಮೇಶ್ ಒತ್ತಾಯಿಸಿದರು.
ದರ್ಶನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬೆಸ್ಕಾಂ ಹಿರಿಯ ಅಧಿಕಾರಿ ಮತ್ತು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ವಿದ್ಯುತ್ ಗುತ್ತಿಗೆದಾರರು ಬೆಸ್ಕಾಂ ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರ ಕೆಲಸ ಸರಾಗವಾಗಿ ನಡೆಯಲು ಕಚೇರಿ ಅಧಿಕಾರಿಗಳು ಸಹಕರಿಸಬೇಕು. ಗುತ್ತಿಗೆದಾರರ ಜತೆಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದರು.
ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಅಶೋಕ್ಕುಮಾರ್, ಪದಾಧಿಕಾರಿಗಳಾದ ಬೇವಿನಗುಡ್ಡಯ್ಯ, ಕೆ.ಎನ್.ರಾಮಕೃಷ್ಣಪ್ಪ, ದಾದಾಪೀರ್, ನಾಗರಾಜು, ಪ್ರಕಾಶ್ ಇತರರು ಪಾಲ್ಗೊಂಡಿದ್ದರು.


