Greater Bengaluru news9 : ಸಣ್ಣ ಗುತ್ತಿಗೆದಾರರಿಂದ ಕಮಿಷನ್ ಪಡೆದ ಆರೋಪದ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ್ ಶೇಗಜಿ ಹಾಗೂ ನಿರ್ದೇಶಕ ಚಿಂಚಳಿ ಅವರನ್ನು ಸಂಘದಿಂದ ಅಮಾನತು ಮಾಡಲಾಗಿದೆ.
ಸಣ್ಣ ಗುತ್ತಿಗೆದಾರರಿಂದ ಶೇ.3ರ ವರೆಗೆ ಕಮಿಷನ್ ಕೇಳಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಗುತ್ತಿಗೆದಾರರ ಸಂಘ ತುರ್ತು ಸುದ್ದಿಗೋಷ್ಠಿ ನಡೆಸಿ ಈ ಕ್ರಮ ಕೈಗೊಂಡಿದೆ. ವೈರಲ್ ಆದ ಆಡಿಯೋವು ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಂಘದ ಪ್ರತಿಷ್ಠೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, “ಈ ವ್ಯವಹಾರ ಖಾಸಗಿ ಜಾಗದಲ್ಲಿ ನಡೆದಿದ್ದು, ಇದಕ್ಕೂ ಗುತ್ತಿಗೆದಾರರ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ. ಯಾವ ಕಾರಣಕ್ಕೂ ನಾವು 80% ಕಮಿಷನ್ ಇದೆ ಎಂದು ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು.
ಸಂಘದ ಹೆಸರನ್ನು ದುರುಪಯೋಗಪಡಿಸಿಕೊಂಡು ಯಾವುದೇ ಅನೈತಿಕ ಚಟುವಟಿಕೆ ನಡೆಸುವುದನ್ನು ಸಹಿಸಲಾಗುವುದಿಲ್ಲ. ಸಂಘದ ಗೌರವ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.


