BBMP
Loading ...

BBMP

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರಷ್ಟೇ ಅಲ್ಲ, ಎಲ್ಲೆಂದರಲ್ಲಿ ಸಿಗರೇಟು, ಬೀಡಿ ತುಂಡುಗಳನ್ನು ಬಿಸಾಡಿದರೂ ದಂಡ ತೆರಬೇಕಾಗುತ್ತದೆ ಹುಷಾರ್‌..!

ಸಿಗರೇಟ್‌, ಬೀಡಿ ತುಂಡು ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) 2015ರಲ್ಲಿಯೇ ಆದೇಶ ನೀಡಿತ್ತು. ಇದಾಗಿ ದಶಕದ ಬಳಿಕ ಈ ಆದೇಶ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮೂರು ವರ್ಷಗಳ ಹಿಂದೆ ಸಿಗರೇಟು, ಬೀಡಿ ತುಂಡುಗಳಿಂದ ಸಾರ್ವಜನಿಕರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಗ್ಗಿಸಲು ಹೊರಡಿಸಿದ್ದ ಮಾರ್ಗಸೂಚಿಯಂತೆ ಪಾಲಿಕೆಯು ಬೀಡಿ, ಸಿಗರೇಟ್‌ ತುಂಡುಗಳನ್ನು ಬಿಸಾಡುವವರ ವಿರುದ್ಧ ಸಮರ ಸಾರಿದೆ.

ಈ ಸಂಬಂಧ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಈಗಾಗಲೇ ಆದೇಶವನ್ನು ಹೊರಡಿಸಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿರುವ ಬಿಬಿಎಂಪಿ, ಆ ಕುರಿತು ಮಾರ್ಷಲ್‌ಗಳಿಗೆ ತರಬೇತಿಯನ್ನೂ ನೀಡಿ ಅವರನ್ನು ಕಾರ್ಯಾಚರಣೆಗಿಳಿಸಲು ಸಜ್ಜಾಗಿದೆ. ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಿಗರೇಟ್‌ ತುಂಡುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು 2020ರ ಅನ್ವಯ 500 ರೂ. ದಂಡ ವಿಧಿಸಲು ಮಾರ್ಷಲ್‌ಗಳಿಗೆ ಅಧಿಕಾರ ನೀಡಲಾಗಿದೆ.

ಆದೇಶದಲ್ಲೇನಿದೆ?:
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯು ಕಳೆದ ಜ.17ರಂದು ಹೊರಡಿಸಿರುವ ಆದೇಶದಂತೆ ಪಾಲಿಕೆ ವ್ಯಾಪ್ತಿಯಲ್ಲಿನ ದಿನಸಿ ಅಂಗಡಿ, ವಾಣಿಜ್ಯ ಸಂಕೀರ್ಣಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಮತ್ತು ಇತರೆಡೆ ಧೂಮಪಾನ ಮಾಡಿ ಸಿಗರೇಟು, ಬೀಡಿ ತುಂಡುಗಳನ್ನು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದ್ದು, ಅದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಹಾಗಾಗಿ ನಗರದ ಸ್ವಚ್ಛತೆ ಹಾಳಾಗುತ್ತಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯ ಅನ್ವಯ ವಿಲೇವಾರಿ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಲಾಗಿದೆ.

ಆ ಹಿನ್ನೆಲೆಯಲ್ಲಿಅಂಗಡಿ, ವಾಣಿಜ್ಯ ಸಮುಚ್ಚಯಗಳು, ಬಾರ್‌ ಮತ್ತು ರೆಸ್ಟೋರೆಂಟ್‌ ಹಾಗೂ ಇನ್ನಿತರೆಡೆ ಧೂಮಪಾನ ಮಾಡಿ ಸಿಗರೇಟು ಮತ್ತು ಬೀಡಿ ತುಂಡುಗಳನ್ನು ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು 2020ರ ಅನ್ವಯ ದಂಡ ವಿಧಿಸಲು ಆದೇಶ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಸದ್ಯ ಬೀಡಿ, ಸಿಗರೇಟು ತುಂಡುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಬಿಬಿಎಂಪಿಯಲ್ಲಿ ಯಾವುದೇ ಪ್ರಮಾಣೀಕೃತ ಕಾರ್ಯವಿಧಾನವಿಲ್ಲ. ಬಹುತೇಕ ಎಲ್ಲಾಸಿಗರೇಟು, ಬೀಡಿ ತುಂಡುಗಳನ್ನು ಕಸದ ಜತೆಯೇ ಸೇರಿಸಲಾಗುತ್ತದೆ. ಸಣ್ಣ ಪುಟ್ಟ ಅಂಗಡಿಗಳ ಮುಂದೆ ಸಿಗರೇಟು, ಬೀಡಿ ಸೇದುವ ಜನರು ತುಂಡುಗಳನ್ನು ಅಲ್ಲೇ ತುಳಿದು ಬೆಂಕಿ ಆರಿಸಿ ಹೊರಟು ಹೋಗುತ್ತಾರೆ. ಆನಂತರ ಅಂಗಡಿ ಮಾಲೀಕರು ಅದನ್ನು ಗುಡಿಸಿ ಕಸದ ಜತೆ ಹಾಕುತ್ತಿದ್ದಾರೆ.

”10 ವರ್ಷದ ಹಿಂದೆ ಬೆಂಗಳೂರು ನಗರದಲ್ಲಿಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಹೆಲ್ತ್‌ ಸಂಸ್ಥೆ ನಡೆಸಿದ ಸಮೀಕ್ಷೆಯಂತೆ ದಿನಕ್ಕೆ ಸುಮಾರು 31 ಲಕ್ಷ ಬೀಡಿ, ಸಿಗರೇಟು ತುಂಡುಗಳು ಸೃಷ್ಟಿಯಾಗುತ್ತಿದ್ದವು. ಇವು ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತವೆ. ಹಾಗಾಗಿ ವೈಜ್ಞಾನಿಕ ರೀತಿಯಲ್ಲಿ ತುಂಡುಗಳ ವಿಲೇವಾರಿ ಜತೆಗೆ ದಂಡ ವಿಧಿಸಬೇಕೆಂದು ಸಮೀಕ್ಷೆಯಲ್ಲಿ ತಿಳಿಸಲಾಗಿತ್ತು. ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಆ ಪ್ರಮಾಣ ಕನಿಷ್ಠವೆಂದರೂ ದಿನಕ್ಕೆ 50 ಲಕ್ಷ ತುಂಡುಗಳನ್ನು ದಾಟಿದೆ. ಹಾಗಾಗಿ ಅವುಗಳನ್ನು ತಡೆಯುವ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಜರೂರಿದೆ” ಎನ್ನುತ್ತಾರೆ ತಂಬಾಕು ಮುಕ್ತ ಬೆಂಗಳೂರು ನಿರ್ಮಾಣ ನಿಟ್ಟಿನಲ್ಲಿಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಕಾರ್ಯಕರ್ತರು.

ಎನ್‌ಜಿಟಿ ಆದೇಶವೇನಿತ್ತು?
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿ ಮತ್ತು ಸಿಗರೇಟು, ಬೀಡಿ ತುಂಡುಗಳ ವೈಜ್ಞಾನಿಕ ವಿಲೇವಾರಿಗೆ ಹೋರಾಡುತ್ತಿರುವ ಡಾಕ್ಟರ್‌ ಫಾರ್‌ ಯು ಸಂಸ್ಥೆ 2015ರಲ್ಲಿರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಮುಂದೆ ಅರ್ಜಿ ಹೂಡಿತ್ತು. ಅದನ್ನು ಆಲಿಸಿದ ಎನ್‌ಜಿಟಿ 2015ರಲ್ಲಿಯೇ ಬಟ್ಸ್‌ಗಳಲ್ಲಿಯೂ (ಬೀಡಿ, ಸಿಗರೇಟು ತುಂಡುಗಳು) ರಾಸಾಯನಿಕ ಹಾನಿಕಾರಕ ಅಂಶಗಳಿದ್ದು, ಅವುಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ 2017ರಲ್ಲಿಎಲ್ಲಾರಾಜ್ಯಗಳಿಗೂ ಅಗತ್ಯ ಕ್ರಮಕ್ಕೆ ಸೂಚಿಸಿತ್ತು. ಆನಂತರ 2020ರಲ್ಲಿಎನ್‌ಜಿಟಿ, ಸಿಗರೇಟು, ಬೀಡಿ ತುಂಡುಗಳ ಸಮರ್ಪಕ ವಿಲೇವಾರಿಗೆ ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸೂಚಿಸಿತ್ತು. ಅದರಂತೆ ಕರ್ನಾಟಕದಲ್ಲಿರಾಜ್ಯ ತಂಬಾಕು ನಿಯಂತ್ರಣ ಮಂಡಳಿ ಸದಸ್ಯ ಹಾಗೂ ಕ್ಯಾನ್ಸರ್‌ ತಜ್ಞ ಡಾ. ಯು.ಎಸ್‌.ವಿಶಾಲ್‌ ರಾವ್‌ ಅಧ್ಯಕ್ಷತೆಯಲ್ಲಿಸಮಿತಿ ರಚಿಸಿತ್ತು. ಆ ಸಮಿತಿ ಶಿಫಾರಸಿನಂತೆ ಕೆಎಸ್‌ಪಿಸಿಬಿ 2023ರಲ್ಲಿಮಾರ್ಗಸೂಚಿ ಹೊರಡಿಸಿತ್ತು.

ಬೀಡಿ, ಸಿಗರೇಟು ತುಂಡಿನಲ್ಲೇನಿರುತ್ತದೆ?
”ಬೀಡಿ, ಸಿಗರೇಟು ತುಂಡಿನಲ್ಲಿಸುಮಾರು 6 ಸಾವಿರದಿಂದ 7 ಸಾವಿರ ವಿಷಕಾರಿ ಅಂಶಗಳಿರುತ್ತವೆ. ಕ್ಯಾಡ್ಮಿಯಂ, ಆರ್ಸೆನಿಕ್‌, ಲೆಡ್‌ ಅಧಿಕ ಪ್ರಮಾಣದಲ್ಲಿರುತ್ತವೆ. ಅವುಗಳಲ್ಲಿಶೇ.70ರಷ್ಟು ಅಂಶಗಳು ಕ್ಯಾನ್ಸರ್‌ಕಾರಕ ಮತ್ತು ಅವು ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿವೆ” ಎನ್ನುತ್ತಾರೆ ವೈದ್ಯರು.

ಬಿಬಿಎಂಪಿ ಚುನಾವಣೆ ಕೇಸ್‌: ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರದ ಅಫಿಡವಿಟ್ ಪ್ರಕಾರ ಆಗಸ್ಟ್‌ 15ರ ಬಳಿಕ ಪಾಲಿಕೆ ಚುನಾವಣೆ

Leave a Reply

Your email address will not be published. Required fields are marked *