ಬೆಂಗಳೂರು ಪಾಲಿಕೆ ಚುನಾವಣೆ: ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಗ್ರೇಟರ್ ಬೆಂಗಳೂರು ಪಾಲಿಕೆಗಳ ಚುನಾವಣೆ ಆಗಸ್ಟ್ 15 ರ ನಂತರ ನಡೆಯಲಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಕೇಸ್ ವಿಚಾರಣೆ ಹಂತದಲ್ಲಿದ್ದು, ಇದಕ್ಕೆ ಕರ್ನಾಟಕ ಸರ್ಕಾರ ಫೆಬ್ರವರಿ 22 ರಂದು ಈ ಅಫಿಡವಿಟ್ ಸಲ್ಲಿಸಿತ್ತು.
ಬೆಂಗಳೂರಿನ ಪಾಲಿಕೆಗಳಿಗೆ ಆಗಸ್ಟ್ 15ರ ನಂತರ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಚುನಾವಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ, ಕರ್ನಾಟಕ ರಾಜ್ಯ ಚುನಾವಣೆ ಆಯೋಗಕ್ಕೆ ವಾರ್ಡ್, ಮೀಸಲಾತಿ ವಿವರಗಳನ್ನು ಕೂಡ ಸಲ್ಲಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ತಿಳಿಸಿತ್ತು.
ಬೆಂಗಳೂರು ಆಡಳಿತ ಕಾಯ್ದೆ 2024 ಜಾರಿಯಾಗಿದ್ದು, ಇನ್ನು ಎರಡು ತಿಂಗಳ ಒಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಬೇಕು. ಅದಕ್ಕೆ ಬೇಕಾದ ತಯಾರಿಯಲ್ಲಿದೆ ಸರ್ಕಾರ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಹುತೇಕ 5 ಪಾಲಿಕೆಗಳನ್ನು ರಚಿಸಿ, ತಲಾ 150 ವಾರ್ಡ್ ರಚಿಸುವ ಸಿದ್ಧತೆ ನಡೆದಿದೆ.
ಸುಪ್ರೀಂ ಕೋರ್ಟ್ಗೆ ಎರಡು ತಿಂಗಳ ಹಿಂದೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ, ರಾಜ್ಯ ಸರ್ಕಾರ ‘ಬೆಂಗಳೂರು ಆಡಳಿತ ಮಸೂದೆ– 2024’ (ಜಿಬಿಎ) ಅನ್ನು ವಿಧಾನ ಮಂಡಲದಲ್ಲಿ ಮಂಡಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ವಿಧಾನ ಮಂಡಲದ ಜಂಟಿ ಸಮಿತಿಯೂ ವರದಿ ಸಲ್ಲಿಸಲಿದೆ. ಮಾರ್ಚ್ನಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡಿಸಿ, ಅನುಮೋದನೆ ಪಡೆಯಲಾಗುತ್ತದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿತ್ತು.
ಬಿಬಿಎಂಪಿಗೆ ಚುನಾವಣೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹಾಗೂ ಶಿವರಾಜು ಅವರ ನಡುವೆ ನಡೆಯುತ್ತಿರುವ ಮೊಕದ್ದಮೆಗೆ ಪ್ರತಿಕ್ರಿಯಿಸಿರುವ ಕರ್ನಾಟಕದ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಫೆಬ್ರುವರಿ 22ರಂದು ಈ ಪ್ರಮಾಣಪತ್ರ ಸಲ್ಲಿಸಿದ್ದರು.
ಮೇ 15ರ ಒಳಗೆ ಪಾಲಿಕೆಗಳ ರಚನೆಯಾಗುತ್ತಾ
ಸರ್ಕಾರ ಸಲ್ಲಿಸಿರು ಅಫಿಡವಿಟ್ ಪ್ರಕಾರ, 2025ರ ಮಾರ್ಚ್ 31ರೊಳಗೆ ರಾಜ್ಯಪಾಲರಿಂದ ಮಸೂದೆಗೆ ಅಂಕಿತ ದೊರೆಯಲಿದೆ. ಬಿಬಿಎಂಪಿಯನ್ನು ವಿಭಜಿಸಿ, ಹೊಸ ಪಾಲಿಕೆಗಳನ್ನು ಮೇ 15ರೊಳಗೆ ಸರ್ಕಾರ ರಚಿಸುತ್ತದೆ. ಜುಲೈ 15ರೊಳಗೆ ಪಾಲಿಕೆಗಳ ವಾರ್ಡ್ಗಳ ಗಡಿ ಗುರುತಿಸಿ, ಮರು ವಿಂಗಡಣೆ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಆಗಸ್ಟ್ 15ರೊಳಗೆ ವಾರ್ಡ್ಗಳಿಗೆ ಮೀಸಲಾತಿ ನಿಗದಿಪಡಿಸಿ, ಅಂತಿಮ ಅಧಿಸೂಚನೆ ಹೊರಡಿಸಿ, ಕರ್ನಾಟಕ ಚುನಾವಣೆ ಆಯೋಗಕ್ಕೆ ಚುನಾವಣೆ ನಡೆಸಲು ಸಲ್ಲಿಸಲಾಗುವುದು ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ. ಹೀಗಾಗಿ ಈ ಅವಧಿಯೊಳಗೆ ಎಲ್ಲವೂ ನಡೆಯುವುದೇ ಎಂಬ ಕುತೂಹಲ ಸದ್ಯ ಕಾಡಿದೆ.
ಪಾಕ್ ಜೊತೆಗೆ ಯುದ್ದ ಬೇಡ ಅಂತ ನಾನು ಹೇಳಿಲ್ಲ. ಅನಿವಾರ್ಯ ಆದ್ರೆ ಮಾಡಬೇಕು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.!


