BBMP
Loading ...

BESCOM

ಬೆಂಗಳೂರು: ಟ್ರಾನ್ಸ್​ಫಾರ್ಮರ್​ ದುರಸ್ತಿ ಮಾಡುವಾಗ ವಿದ್ಯುತ್ ಶಾಕ್​ ತಗುಲಿ ಗಂಭೀರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ​ ಪವರ್​ ಮ್ಯಾನ್​ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಮೃತ ಪವರ್​ಮ್ಯಾನ್​ರನ್ನು ಪ್ರಕಾಶ್​ ಎಂದು ಗುರುತಿಸಲಾಗಿದೆ. ಕಳೆದ ಏಪ್ರಿಲ್ 2ರಂದು ಈ ಘಟನೆ ಸಂಭವಿಸಿತು. ಗಂಭೀರ ಸುಟ್ಟ ಗಾಯಗಳಿಂದ ನಾಲ್ಕೈದು ದಿನಗಳಿಂದ ಪ್ರಕಾಶ್​ ಅವರು ಆಸ್ಪತ್ರೆಯಲ್ಲಿ ನೋವಿನಿಂದ ನರಳಾಡುತ್ತಿದ್ದರು. ಈ ಅವಘಡಕ್ಕೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ. ಇಷ್ಟೆಲ್ಲ ಆದರೂ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಷ್ಟು ದಿನ ಪ್ರಕಾಶ್​ ನರಳಾಡಿದರೂ ಅವರ ಬಗ್ಗೆ ಅಧಿಕಾರಿಗಳು ಯಾವುದೇ ಮಾನವೀಯತೆ ತೋರಲಿಲ್ಲ. ಈ ಸಾವು ನ್ಯಾಯವೇ? ಇದಕ್ಕೆ ಯಾರು ಹೊಣೆ? ಕ್ರಮ ಯಾಕೆ ಜರುಗಿಸಿಲ್ಲ? ಪ್ರಾಣಕ್ಕೆ ಬೆಲೆ ಇಲ್ಲವೇ? ನಿಜಕ್ಕೂ ಬೆಸ್ಕಾಂನ ಬೇಜವ್ದಾರಿ ಇಲ್ಲಿ ಎದ್ದು ಕಾಣುತ್ತಿದೆ.

ದುಡಿಯುವ ಮಗನನ್ನು ಕಳೆದುಕೊಂಡ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಬೆಸ್ಕಾಂನಲ್ಲಿ ಪ್ರಾಣಕ್ಕೆ ರಕ್ಷಣೆಯೇ ಇಲ್ಲ ಎಂಬಾಂತಾಗಿದೆ. ಈ ಕೂಡಲೇ ಬೆಸ್ಕಾಂ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಘಟನೆಯ ಹಿನ್ನೆಲೆ
45 ವರ್ಷದ ಪವರ್​ಮ್ಯಾನ್​ ಪ್ರಕಾಶ್​ ಎಂಬುವರು ಬೆಸ್ಕಾಂನ ಸುಂಕದಕಟ್ಟೆಯ ವಿಭಾಗದಲ್ಲಿ ಜಿಒಎಸ್ ತೆರೆಯಲು ಪ್ರಯತ್ನಿಸುವಾಗ ಆರ್ಕಿಂಗ್ ಸಂಭವಿಸಿದ ಪರಿಣಾಮ ವಿದ್ಯುತ್​ ಶಾಕ್​ನಿಂದ ಮೈ ತುಂಬಾ ಗಂಭೀರ ಸುಟ್ಟ ಗಾಯಗಳಾಗಿತ್ತು. ಪರಿಸ್ಥಿತಿ ಗಂಭೀರವಾಗಿ, ಪ್ರಕಾಶ್​ ಅವರನ್ನು ತಕ್ಷಣ ಕೆಂಗೇರಿಯ ಬಿಜಿಎಸ್​ ಆಸ್ಪತ್ರೆಗೆ ದಾಖಲಿಸಲಾಗಿಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಟಿ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಈ ಘಟನೆ ಸುಂಕದಕಟ್ಟೆ ವಿಭಾಗದ ನಾಡಕೇರಪ್ಪ ಇಂಡ್ಸ್ ಎಸ್ಟೇಟ್, ಬ್ಯಾಡರಹಳ್ಳಿ MUSSನ ಡ್ರಮ್ ಕಾರ್ಖಾನೆಯ ಹತ್ತಿರ ಇರುವ ಬೈರವೇಶ್ವರ ಕೈಗಾರಿಕಾ ಎಸ್ಟೇಟ್​ನಲ್ಲಿ ನಡೆದಿದೆ. ದೂರಿನ ಹಿನ್ನೆಲೆಯಲ್ಲಿ ಟಿಸಿ ನಂಬರ್​ 848 ಅನ್ನು ದುರಸ್ತಿ ಮಾಡಲು ಪ್ರಕಾಶ್​ ಬಂದಿದ್ದರು. ಈ ವೇಳೆ ವಿದ್ಯುತ್​ ಶಾಕ್​ನಿಂದ ಅವಘಡ ಸಂಭವಿಸಿದೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಈ ಒಂದು ದುರ್ಘಟನೆ ಸಂಭವಿಸಿದೆ. ದುರಸ್ಥಿ ಮಾಡುವಾಗ ಅನುಸರಿಸಬೇಕಾದ ಮುನ್ನೆಚ್ಛರಿಕಾ ಕ್ರಮಗಳನ್ನು ಅನುಸರಿಸದೇ ಇದ್ದುದ್ದರಿಂದ 11 ಕೆವಿ ಸಾಮರ್ಥ್ಯದ ಟಾನ್ಸ್​ಫಾರ್ಮರ್​ನಲ್ಲಿ ಸಂಭವಿಸಿದ ವಿದ್ಯುತ್​ ಶಾಕ್​ನಿಂದ ಮೈತುಂಬಾ ಸುಟ್ಟು ಹೋಗಿತ್ತು. ಈ ನೋವಿನಿಂದ ಪ್ರಕಾಶ್​ ನರಳಾಡುತ್ತಿದ್ದರು. ಇದೀಗ ಪ್ರಕಾಶ್​ ಸಾವಿಗಿಡಾಗಿದ್ದಾರೆ.

ಬೆಸ್ಕಾಂ ನಿರ್ಲಕ್ಷ್ಯ: ಟಿಸಿ ರಿಪೇರಿ ಮಾಡುವಾಗ ವಿದ್ಯುತ್​ ಶಾಕ್​, ಸುಟ್ಟಗಾಯಗಳಿಂದ ಪವರ್​ ಮ್ಯಾನ್ ನರಳಾಟ

Leave a Reply

Your email address will not be published. Required fields are marked *