BBMP
Loading ...

images

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು (ಎಂಎಚ್‌ಎ) ಮೇ 7ರಂದು ದೇಶಾದ್ಯಂತ 244 ಸ್ಥಳಗಳಲ್ಲಿ ಮಾಕ್ ಡ್ರಿಲ್‌ಗಳನ್ನು ನಡೆಸಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ 3 ಸ್ಥಳಗಳಲ್ಲಿ ಈ ಅಣಕು ಕಾರ್ಯಾಚರಣೆ ನಡೆಯಲಿದೆ.

ಕರ್ನಾಟಕದ ಬೆಂಗಳೂರು ನಗರ, ರಾಯಚೂರು ಮತ್ತು ಕಾರವಾರದಲ್ಲಿ ಈ ಡ್ರಿಲ್‌ಗಳು ನಡೆಯಲಿವೆ. ಈ ಡ್ರಿಲ್‌ಗಳು ಸಂಭವನೀಯ ದಾಳಿಯ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ಮತ್ತು ಪ್ರಮುಖ ಸ್ಥಳಗಳನ್ನು ಮರೆಮಾಚಲು ತರಬೇತಿ ನೀಡುವ ಗುರಿಯನ್ನು ಹೊಂದಿವೆ.

ಈ ಮೂರು ಸ್ಥಳಗಳೇ ಯಾಕೆ?
ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಮುಖ್ಯಸ್ಥರಾದ ಪ್ರಶಾಂತ್ ಕುಮಾರ್ ಠಾಕೂರ್ ಅವರು ಈ ಬಗ್ಗೆ ವಿವರ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬೆಂಗಳೂರು ಒಂದು ದೊಡ್ಡ ನಗರವಾಗಿದೆ. ಇಲ್ಲಿ ಹೆಚ್ಚಿನ ಜನಸಂಖ್ಯೆ ಇದೆ. ಇನ್ನು ರಾಯಚೂರಿನಲ್ಲಿ ರಾಜ್ಯಕ್ಕೆ ಗರಿಷ್ಠ ವಿದ್ಯುತ್‌ ಪೂರೈಕೆ ಮಾಡುವ ಉಷ್ಣ ವಿದ್ಯುತ್ ಸ್ಥಾವರ ಇದೆ. ಕಾರವಾರದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ ಎಂದು ವಿವರಿಸಿದ್ದಾರೆ.

ಬುಧವಾರ ಮಧ್ಯಾಹ್ನ 4 ಗಂಟೆಯೊಳಗೆ ಡ್ರಿಲ್‌ಗಳು ನಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿದ್ದು, ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವ ಪ್ರಮುಖ ಐಟಿ ಮತ್ತು ಬಿಟಿ ಸಂಸ್ಥೆಗಳನ್ನು ಹೊಂದಿದೆ. ಅಲ್ಲದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಯಲಹಂಕ ವಾಯುನೆಲೆ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸೇರಿದಂತೆ ಪ್ರಮುಖ ಸಂಸ್ಥೆಗಳೂ ನಗರದಲ್ಲಿವೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಳಿ ಕಾಳಿ ನದಿ ಸಮೀಪವಿರುವ ಕೈಗಾ ಅಟಾಮಿಕ್ ಪವರ್ ಸ್ಟೇಷನ್ (ಕೆಎಪಿಎಸ್‌) ದೇಶದ ಮೂರನೇ ಅತಿದೊಡ್ಡ ಅಣು ವಿದ್ಯುತ್ ಸ್ಥಾವರವಾಗಿದೆ. ಈ ಕರಾವಳಿ ನಗರವು ಪ್ರಮುಖ ನೌಕಾ ನೆಲೆಯಾದ ಐಎನ್‌ಎಸ್‌ ಕದಂಬವನ್ನು ಸಹ ಹೊಂದಿದೆ.

ರಾಯಚೂರು ಉಷ್ಣ ವಿದ್ಯುತ್ ಸ್ಥಾವರವು ರಾಜ್ಯದ ಮೊದಲ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರವಾಗಿದೆ. ಇದು ಕರ್ನಾಟಕದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಶೇ. 70 ಪ್ರತಿಶತದಷ್ಟನ್ನು ಪೂರೈಸುತ್ತದೆ. ಹೀಗಾಗಿ ಈ ಮೂರು ಸ್ಥಳಗಳನ್ನು ಮಾಕ್‌ ಡ್ರಿಲ್‌ಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ನಾಗರಿಕ ರಕ್ಷಣಾ ಪಡೆಯನ್ನು ತರಬೇತಿಗೊಳಿಸಲಾಗಿತ್ತು. ಆದರೆ ನಂತರ ಇಂತಹ ಚಟುವಟಿಕೆಗಳು ಸ್ಥಗಿತಗೊಂಡವು ಎಂದು ಪ್ರಶಾಂತ್‌ ಕುಮಾರ್‌ ಠಾಕೂರ್ ವಿವರಿಸಿದ್ದಾರೆ. “ಈಗ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ನಾಗರಿಕ ರಕ್ಷಣಾ ಪಡೆಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಾವು ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದೇವೆ,” ಎಂದು ಅವರು ವಿವರಿಸಿದ್ದಾರೆ.

1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ನಾಗರಿಕ ರಕ್ಷಣಾ ಪಡೆಯನ್ನು ತರಬೇತಿಗೊಳಿಸಲಾಗಿತ್ತು. ಆದರೆ ನಂತರ ಇಂತಹ ಚಟುವಟಿಕೆಗಳು ಸ್ಥಗಿತಗೊಂಡವು ಎಂದು ಪ್ರಶಾಂತ್‌ ಕುಮಾರ್‌ ಠಾಕೂರ್ ವಿವರಿಸಿದ್ದಾರೆ. “ಈಗ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ನಾಗರಿಕ ರಕ್ಷಣಾ ಪಡೆಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಾವು ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದೇವೆ,” ಎಂದು ಅವರು ವಿವರಿಸಿದ್ದಾರೆ.

Leave a Reply

Your email address will not be published. Required fields are marked *