BBMP
Loading ...

Power

ಬೆಂಗಳೂರು: ಕೆಲವು ತಿಂಗಳ ಹಿಂದೆ ವಿದ್ಯುತ್ ತಂತಿ ತುಂಡಾಗಿ ಬಿದ್ದು, ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ‌ ನಡೆದಿತ್ತು. ಬೆಂಗಳೂರಿನ ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಚಿಕ್ಕನಹಳ್ಳಿ ಗ್ರಾಮದ ನಿವಾಸಿ ಮಂಜಮ್ಮ(50) ಮೃತಪಟ್ಟಿದ್ದರು. ಇದೇ ರೀತಿಯಲ್ಲಿ ವಿದ್ಯುತ್ ತಂತಿ ತಗುಲಿ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 147 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಬೆಂಗಳೂರು, ಚಾಮುಂಡೇಶ್ವರಿ ವಿದ್ಯುತ್ ಪೂರೈಕೆ ಕಾರ್ಪೊರೇಷನ್ ಮೈಸೂರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಹಾಗೂ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಸೇರಿದ ಎಲ್‌ಟಿ ಲೈನ್ ತಂತಿಗಳು ಹರಿದು ಅಥವಾ ಮೇಲಿಂದ ಬಿದ್ದು ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗುತ್ತಿವೆ.

ಎಲ್‌ಟಿ ತಂತಿ ಆಯುಷ್ಯ 25 ವರ್ಷವೇ?
ಎಲ್‌ಟಿ (ವಿದ್ಯುತ್ ವಾಹಕ/ಕಂಡಕ್ಟರ್‌ಗಳು)ಗಳ ಆಯುಷ್ಯ 25 ವರ್ಷವೇ ಎಂಬ ಪ್ರಶ್ನೆಗೆ ಇಂಧನ ಇಲಾಖೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪ ಹಾಗೂ ಇನ್ನಿತರ ಕಾರಣಗಳಿಂದ ಶಿಥಿಲಗೊಳ್ಳುವ ಸಾಧ್ಯತೆ ಇದೆ ಎಂದು ಉತ್ತರ ನೀಡಿದೆ. ವಿದ್ಯುತ್ ವಿತರಣಾ ತಂತಿಗಳನ್ನು ಅಳವಡಿಸಿದ ನಂತರ ಬಾಳಿಕೆ ಅವಧಿ 35- 40 ವರ್ಷಗಳಾಗಿದ್ದರೂ ತಂತಿಯ ಮೇಲಿನ ಒತ್ತಡ ಮತ್ತು ನೈಸರ್ಗಿಕ ಪರಿಸ್ಥಿತಿಗಳ ಮೇಲೆ ಬಾಳಿಕೆ ಅವಲಂಬಿತವಾಗಿದೆ ಎಂದು ಉತ್ತರಿಸಿದೆ.

Power

ಮುಂಜಾಗ್ರತೆ ಕ್ರಮಗಳೇನು?
ಹಳೆಯ ವಾಹಕಗಳನ್ನು ಕಾಲಕಾಲಕ್ಕೆ ಬದಲಾವಣೆ ಮಾಡಲಾಗುತ್ತಿದೆ. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸರಿಪಡಿಸಲಾಗುತ್ತಿದೆ. ಲೈನ್‌ಗೆ ತಗಲುವ ಮರದ ಕೊಂಬೆಗಳನ್ನು ಕಾಲ ಕಾಲಕ್ಕೆ ತೆಗೆಯಲಾಗುತ್ತಿದೆ. ಜನ ಸಂಪರ್ಕ ಸಭೆಯ ಮೂಲಕ ಅಪಘಾತ ತಡೆಗಟ್ಟಲು ವಿದ್ಯುತ್ ಸುರಕ್ಷತೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಗುತ್ತಿದೆ. ರೋಡ್ ಕ್ರಾಸಿಂಗ್ ಗಳನ್ನು ರೋಡ್ ಗಾರ್ಡಿಂಗ್ ಅಳವಡಿಸಿ ವಿದ್ಯುತ್ ತಂತಿ ಬೀಳುವುದನ್ನು ತಪ್ಪಿಸಲಾಗುತ್ತಿದೆ. ಯು.ಜಿ ಕೇಬಲ್‌ಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಇಂಧನ ಇಲಾಖೆ ವಿವರಣೆ ನೀಡಿದೆ.

ಬೆಂಗಳೂರು ನಗರ ಭಾಗದಲ್ಲಿ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿವೆ. ಆದರೆ ಇದನ್ನು ಕಾಲ ಕಾಲಕ್ಕೆ ಬದಲಾವಣೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಚಾರ್ಜ್ ಉತ್ತರ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಗಳಲ್ಲಿ ವಿದ್ಯುತ್ ಕಂಬ ಬಿದ್ದು ಯಾವುದೇ ಅನಾಹುತ ನಡೆದಿಲ್ಲ ಎಂದು ಇಂಧನ ಇಲಾಖೆ ವಿವರ ನೀಡಿದೆ.

ಸೋಲಾರ್ ವಿದ್ಯುತ್ ತಂತಿ ತಗುಲಿ ಸಾವು
ಸಿರವಾರ ತಾಲ್ಲೂಕಿನ ಮಾಚನೂರು ಗ್ರಾಮದ ಸೋಲಾರ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿದೆ. ಅತ್ತನೂರು ಗ್ರಾಮದ ಅಜೀರ್ ಪಾಷ ಅಬೀಬ್ ಪಾಷ (18) ಮೃತ ಯುವಕ. ಸೋಲಾರ್ ಪ್ಲಾಂಟ್‌ನಲ್ಲಿ ಸೋಲಾರ್ ಪ್ಲೇಟ್‌ಗಳನ್ನು ಸ್ವಚ್ಛ ಮಾಡುವಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸ್ವಚ್ಛತೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೋಲಾರ್ ವಿದ್ಯುತ್ ತಂತಿ ತಗುಲಿ ಯುವಕ ಮೃತಪಟ್ಟಿದ್ದಾನೆ. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *