Greater Bengaluru News9 : ಬೆಸ್ಕಾಂ ಇಲಾಖೆಯ ಡಿ.ಪಾಳ್ಯ ಶಾಖೆಯ ಜೆ.ಇ. ರಾಘವೇಂದ್ರ ಮತ್ತು ಸಿಬ್ಬಂದಿ ಕಚೇರಿ ವೇಳೆಯಲ್ಲೇ ಡಾಬಾದಲ್ಲಿ ಎಣ್ಣೆ ಪಾರ್ಟಿ ಮಾಡಿಕೊಂಡು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಇವರನ್ನು ಅಮಾನತುಪಡಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆ.ಇ. ರಾಘವೇಂದ್ರ ಎಂಬವರು ಈ ಹಿಂದೆ ಬೆಸ್ಕಾಂ ಇಲಾಖೆಯ ವಾಟದಹೊಸಹಳ್ಳಿ ಶಾಖೆಯಲ್ಲಿ ನಿರ್ವಹಿಸುತ್ತಿದ್ದು, ಇವರು ರೈತರ ಜಮೀನಿನಲ್ಲಿ ಕಂಬ ಬದಲಾಯಿಸುವ ವಿಚಾರವಾಗಿ ಹಣ ಪಡೆಯುತ್ತಿದ್ದ ವೀಡಿಯೋ ಖಾಸಗಿ ಚಾನಲ್ನಲ್ಲಿ ಪ್ರಸಾರವಾಗಿ ಮೇಲಾಧಿಕಾರಿಗಳಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.
ಅಮಾನತು ಶಿಕ್ಷೆ ಪೂರ್ಣಗೊಂಡು ಕೇವಲ 25 ದಿನಗಳ ಹಿಂದೆಯಷ್ಟೇ ಗುಡಿಬಂಡೆ ಬೆಸ್ಕಾಂ ಉಪವಿಭಾಗದ ವ್ಯಾಪ್ತಿಗೆ ಬರುವ ಡಿ.ಪಾಳ್ಯ ಶಾಖೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದರು.
ಈಗ ಪುನಃ ಇದೇ ಜೆ.ಇ. ರಾಘವೇಂದ್ರ ತಮ್ಮ ಸಿಬ್ಬಂದಿ (ಈಗ ಬೆಸ್ಕಾಂ ಇಲಾಖೆಯ ನೌಕರರ ಸಂಘದ ತಾಲೂಕು ಅದ್ಯಕ್ಷ ಹಾಗೂ ಲೈನ್ ಮೆನ್) ಶ್ರೀನಿವಾಸ ಮತ್ತು ಮತ್ತೊರ್ವ ಲೈನ್ ಮೆನ್ ಕಚೇರಿ ವೇಳೆಯಲ್ಲಿ ಮದ್ಯಾಹ್ನದ ಊಟದ ಸಮಯ ಡಾಬಾವೊಂದರಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಾ ಕಚೇರಿಯ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ವೀಡಿಯೋ ಆರೋಗ್ಯಸ್ವಾಮಿ ಚಿನ್ನಪ್ಪ ಎಂಬವರ ಸಾಮಾಜಿಕ ಜಾಲತಾಣ (ಫೇಸ್ಬುಕ್) ದಲ್ಲಿ ಈ ವಿಡಿಯೋ ಹರಿದಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಕರ್ತವ್ಯ ನಿರತ ಸರ್ಕಾರಿ ನೌಕರರು ಕಚೇರಿ ವೇಳೆಯಲ್ಲಿ ಡಾಬಾದಲ್ಲಿ ಕುಳಿತು ದಾಖಲೆಗಳನ್ನು ಪರಿಶೀಲನೆ ಮಾಡುವುದಾದರೆ ಇವರಿಗೆ ಇನ್ನು ಕಚೇರಿ ಏಕೆ ಬೇಕು, ಡಾಬಾಗಳನ್ನೇ ಕಚೇರಿಗಳನ್ನಾಗಿ ಮಾಡಿಕೊಳ್ಳಬಹುದಲ್ಲವೇ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ.


