ಚನ್ನಪಟ್ಟಣ: ಬೆಸ್ಕಾಂ ಮತ್ತು ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆಯ ಜೀವವೊಂದು ಬಲಿಯಾಗಿರುವ ಘಟನೆ ತಾಲೂಕಿನ ಪೌಳಿದೊಡ್ಡಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಗಂಗಮ್ಮ(54) ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿರುವ ಮಹಿಳೆ. ಬೀದಿ ದೀಪಕ್ಕೆ ಅಳವಡಿಸಿದ ವಿದ್ಯುತ್ ತಂತಿ ತಗುಲಿ ಈಕೆ ಸಾವನ್ನಪ್ಪಿದ್ದು, ಈಕೆಯನ್ನು ರಕ್ಷಿಸಲು ತೆರಳಿದ ಸಾವಿತ್ರಮ್ಮ ಎಂಬುವವರು ಸಹ ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಸಾವಿತ್ರಮ್ಮ ಎಂಬುವವರನ್ನು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಕೆಯ ಸ್ಥಿತಿಯೂ ಚಿಂತಾಜನಕವಾಗಿದೆ.
ಏನಾಯಿತು?
ಮೃತ ಗಂಗಮ್ಮ ಗ್ರಾಮದ ಕೆರೆಯಲ್ಲಿ ತಮ್ಮ ಎಮ್ಮೆಗೆ ನೀರು ಕುಡಿಸಿಕೊಂಡು ಹಿಂದಿರುಗುವಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗ್ರಾಮದ ಬೀದಿ ದೀಪಕ್ಕೆ ವಿದ್ಯುತ್ ಅಳವಡಿಸಲಾಗಿದ್ದ ವಿದ್ಯುತ್ ವೈರ್ ತುಂಡಾಗಿ ಕೆಳಗೆ ಹಾಕಲಾಗಿದ್ದ ಅರಣ್ಯ ಇಲಾಖೆಯ ತಂತಿ ಬೇಲಿಮೇಲೆ ಬಿದ್ದಿತ್ತು. ಇದನ್ನು ಅರಿಯದ ಗಂಗಮ್ಮ ಎಂದಿನಂತೆ ತಮ್ಮ ಎಮ್ಮೆಯ ಜೊತೆ ಆ ಜಾಗದಲ್ಲಿ ಮನೆಯ ಕಡೆ ಹೋಗುವಾಗ ಈ ಅವಘಡ ಸಂಭವಿಸಿದೆ. ಹೀಗೆ ಕೆಳಗೆ ಬಿದ್ದದನ್ನು ಗಮನಿಸಿದ ಸಾವಿತ್ರಮ್ಮ ಎಂಬುವವರು ಈಕೆಯ ರಕ್ಷಣೆಗೆ ಹೋಗಿದ್ದಾರೆ.
ಈ ಘಟನೆಗೆ ಬೆಸ್ಕಾಂ ಸಿಬ್ಬಂದಿ ಮತ್ತು ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯ ಮುಖಂಡ ವಿ.ಬಿ.ಚಂದ್ರಯ್ಯ ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಗಂಗಮ್ಮ ಮೃತದೇಹ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದು, ಸಂಬಂಧಿಸಿದವರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಬೆಂಗಳೂರಿಗೂ ಕಾಲಿಟ್ಟ ಚೀನಾದ HMPV ವೈರಸ್! 8 ತಿಂಗಳ ಮಗುವಿನಲ್ಲಿ ಸೋಂಕು ಪತ್ತೆ


