BBMP
Loading ...

BBK 11

ಬೆಂಗಳೂರು: ಬಿಗ್​ಬಾಸ್​ ಶೋ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಶೋ ಭಾರಿ ಜನಪ್ರಿಯತೆ ಸಹ ಪಡೆದುಕೊಂಡಿದೆ. ಕನ್ನಡದಲ್ಲಿಯೂ ಕಳೆದ 11 ವರ್ಷಗಳಿಂದ ಈ ಶೋ ಮೂಡಿಬರುತ್ತಿದೆ. ಟಿಆರ್​ಪಿ ವಿಚಾರದಲ್ಲೂ ದಾಖಲೆ ಬರೆದಿದೆ. ಈವರೆಗೆ ಸಾಕಷ್ಟು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಬಿಗ್​ಬಾಸ್​ ಮನೆಗಳು ಬದಲಾಗಿವೆ, ಶೋ ನಡೆಸುವ ಚಾನೆಲ್​ ಸಹ ಬದಲಾಗಿದೆ. ಸ್ಪರ್ಧಿಗಳಿಗೆ ನೀಡುವ ಟಾಸ್ಟ್​ಗಳು ಕೂಡ ಬದಲಾಗುತ್ತಿರುತ್ತದೆ. ಅಷ್ಟೇ ಯಾಕೆ ವೀಕ್ಷಕರ ಅಭಿರುಚಿ ಕೂಡ ಆಗಾಗ ಬದಲಾಗುತ್ತಲೇ ಇರುತ್ತದೆ. ಆದರೆ, ಈವರೆಗೆ ಬದಲಾಗದ ಒಂದೇ ಒಂದು ಸಂಗತಿ ಏನೆಂದರೆ ಅದು ನಿರೂಪಕ.

ಹೌದು, ಕಳೆದ 10 ಸೀಸನ್​ ಹಾಗೂ ಪ್ರಸ್ತುತ ನಡೆಯುತ್ತಿರುವ 11ನೇ ಸೀಸನ್​ ಅನ್ನು ನಟ ಕಿಚ್ಚ ಸುದೀಪ್  ನಿರೂಪಣೆ ಮಾಡಿದ್ದಾರೆ. ಆದರೆ, ಬದಲಾವಣೆ ಜಗದ ನಿಯಮ ಎನ್ನುವಂತೆ ಇದೀಗ ಬಿಗ್​ಬಾಸ್​ ನಿರೂಪಣೆಯಿಂದ ಹಿಂದೆ ಸರಿಯಲು ನಟ ಕಿಚ್ಚ ಮನಸ್ಸು ಮಾಡಿದ್ದಾರೆ. ಇದೇ ನನ್ನ ಕೊನೆಯ ಸೀಸನ್​ ಎಂದು ಹೇಳಿದ್ದು, ಇದನ್ನು ಕೇಳಿದ ಬಿಗ್​ಬಾಸ್​ ಪ್ರೇಕ್ಷಕರಿಗೆ ಬಹಳ ಬೇಸರವಾಗಿದೆ. ಕಿಚ್ಚನ ಈ ದಿಢೀರ್​ ನಿರ್ಧಾರಕ್ಕೆ ಕಾರಣವೇನು ಎಂಬ ಚರ್ಚೆಗಳು ಸಹ ಇದೀಗ ನಡೆಯುತ್ತಿವೆ. ಇದರ ನಡುವೆ ಕಿಚ್ಚನ ಈ ಖಡಕ್​ ನಿರ್ಧಾರಕ್ಕೆ ಅವರಿಗಾದ ಅವಮಾನವೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂಥದ್ದೊಂದು ಗಂಭೀರ ಆರೋಪವನ್ನು ಕನ್ನಡಪರ ಹೋರಾಟಗಾರ ಹಾಗೂ ಬಿಗ್​ಬಾಸ್​ ಸೀಸನ್​ 9ರ ಸ್ಪರ್ಧಿ ರೂಪೇಶ್​ ರಾಜಣ್ಣ ಮಾಡಿದ್ದಾರೆ.

ಅಷ್ಟಕ್ಕೂ ಕಿಚ್ಚ ತಮ್ಮ ಎಕ್ಸ್​ ಖಾತೆಯಲ್ಲಿ ಹೇಳಿದ್ದೇನು ಅನ್ನೋದನ್ನು ನೋಡುವುದಾದರೆ, ಸೀಸನ್​ 11ರ ಗ್ರಾಂಡ್​ ಓಪನಿಂಗ್​ ಎಪಿಸೋಡ್ 9.9 ಟಿಆರ್​ಪಿಯೊಂದಿಗೆ​ ಹಿಂದಿನ ಎಲ್ಲ ದಾಖಲೆಗಳನ್ನು​ ಮುರಿದಿದೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಕಿಚ್ಚ, ಬಿಗ್​ಬಾಸ್​ ಸೀಸನ್​ 11ರ ಮೇಲೆ ನೀವು ತೋರಿದ ಸ್ಪಂದನೆಗೆ ಧನ್ಯವಾದಗಳು. ಶೋ ಮತ್ತು ನನ್ನ ಮೇಲೆ ನೀವು ತೋರಿದ ಪ್ರೀತಿ ಮತ್ತು ಗೌರವ ಎಂಥದ್ದು ಎಂಬುದನ್ನು ಟಿಆರ್​ಪಿ ನಂಬರ್​ ಹೇಳುತ್ತಿದೆ. ಸುಮಾರು 11 ವರ್ಷಗಳ ಕಾಲ ಒಟ್ಟಿಗೆ ನಡೆದಿದ್ದೇನೆ. ಇನ್ನು ಮುಂದೆ ನಾನು ಮಾಡಬೇಕಾಗಿರುವುದನ್ನು ಮಾಡುವ ಸಮಯ ಬಂದಿದೆ. ಬಿಗ್​ಬಾಸ್​ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ಈ ನಿರ್ಧಾರವನ್ನು ಕಲರ್ಸ್​ ಕನ್ನಡ ಮತ್ತು ಈ ಎಲ್ಲಾ ವರ್ಷಗಳಿಂದ ಬಿಗ್​ಬಾಸ್​ ಶೋ ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ ಮತ್ತು ನಾನು ಕೂಡ ಸಾಧ್ಯವಾದಷ್ಟು ನಿಮ್ಮೆಲ್ಲರನ್ನು ರಂಜಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಪ್ಪುಗೆ ಸದಾ ಹೀಗೆ ಇರಲಿ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

ಕಿಚ್ಚನ ಈ ದಿಢೀರ್​ ನಿರ್ಧಾರದಿಂದ ಬಿಗ್​ಬಾಸ್​ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಎಷ್ಟೋ ಮಂದಿ ಸುದೀಪ್​ಗಾಗಿಯೇ ಬಿಗ್​ಬಾಸ್​ ಶೋ ನೋಡುತ್ತಿದ್ದರು. ಅವರಿಲ್ಲದ ಶೋ ಅನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ ಎಂದು ಹೇಳಿದವರಿದ್ದಾರೆ. ಹೀಗಾಗಿ ಕಿಚ್ಚ ಇದ್ದಕ್ಕಿದ್ದಂತೆ ಈ ನಿರ್ಧಾರ ಘೋಷಣೆ ಮಾಡಿದ್ದೇಕೆ ಎನ್ನುತ್ತಿದ್ದಾರೆ. ಇದರ ನಡುವೆ ಕಿಚ್ಚನ ಅವಮಾನ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇಂಥದ್ದೊಂದು ಗಂಭೀರ ಆರೋಪವನ್ನು ರೂಪೇಶ್​ ರಾಜಣ್ಣ ಮಾಡಿದ್ದಾರೆ. ಬಿಗ್​ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೇ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್​ ಬಿಗ್​ಬಾಸ್ ನಿರೂಪಣೆ ಮಾಡುವುದನ್ನು ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಏ ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕ ಮೊದಲು ಬಿಗ್​ಬಾಸ್ ಬಿಡಿ ಇಲ್ಲ ಬಿಗ್​ಬಾಸ್ ನಿಲ್ಲಿಸಬೇಕಾಗುತ್ತದೆ. ಅಸಲಿ ವಿಷಯವನ್ನು ನಾಳೆ ಮಾತಾಡ್ತೀನಿ ಎಂದು ರೂಪೇಶ್​ ರಾಜಣ್ಣ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರೂಪೇಶ್​ ಅವರು ಏನು ಮಾತನಾಡುತ್ತಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮನೆ ಮಾಡಿದೆ. ಬಹುಶಃ ಇಂದು ಈ ವಿಚಾರವಾಗಿ ರೂಪೇಶ್​ ರಾಜಣ್ಣ ಮಾತನಾಡುವ ಸಾಧ್ಯತೆ ಇದೆ.

ಇನ್ನು ಶೋ ಆರಂಭಕ್ಕೂ ಮುನ್ನವೇ ಬಿಗ್​ಬಾಸ್​ ನಿರೂಪಕರು ಬದಲಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಸುದೀಪ್​ ಕೂಡ ಈ ಬಗ್ಗೆ ಮಾತನಾಡಿದ್ದರು. ನಿರೂಪಣೆ ನಿಲ್ಲಿಸಲು ಬಯಸಿದ್ದೆ ಆದರೆ, ಆಯೋಜಕರು ಮನವರಿಕೆ ಮಾಡಿದ ರೀತಿ ಇಷ್ಟವಾಯಿತು ಎಂದಿದ್ದರು. ಶೋ ಆರಂಭಕ್ಕೂ ಮುನ್ನ ರಿಷಭ್​ ಶೆಟ್ಟಿ ಅವರ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಸುದೀಪ್​ ಅವರೇ ನಿರೂಪಕರಾಗಿ ಕಾಣಿಸಿಕೊಂಡರು. ಇದೀಗ ಶೋನಿಂದ ಹೊರಹೋಗುವ ನಿರ್ಧಾರ ಘೋಷಣೆ ಮಾಡಿದ್ದಾರೆ. ಸುದೀಪ್​​ ಬದಲು ಮುಂದಿನ ಶೋ ಯಾರು ನಡೆಸಿಕೊಳ್ಳುತ್ತಾರೆ ಎಂಬ ಕುತೂಹಲವೂ ಮನೆ ಮಾಡಿದೆ.

ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ದೇಶಾದ್ಯಂತ `ಕಬ್ಬಿಣ, ಸಿಮೆಂಟ್’ ಬೆಲೆ ಇಳಿಕೆ!

Leave a Reply

Your email address will not be published. Required fields are marked *