ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿ ಕಚ್ಚುವ ಸಂಖ್ಯೆ ಹೆಚ್ಚಾಗುತ್ತಿದೆ. ನಾಯಿಗಳ ದಾಳಿಯಿಂದ ಜನ ಕಂಗಾಲಾಗಿದ್ದರೆ. ಒಮ್ಮೊಮ್ಮೆ ಏಕಕಾಲಕ್ಕೆ ಹಲವು ನಾಯಿಗಳು ಕಚ್ಚಿ ಕೆಲವರು ಸಾವನ್ನಪ್ಪಿರುವುದು ಸಹ ಬೆಂಗಳೂರಿನಲ್ಲಿ ನಡೆದಿದೆ. ನಾಯಿಗಳ ದಾಳಿಯನ್ನು ತಪ್ಪಿಸಲು ಬಿಬಿಎಂಪಿ ಹೊಸ ಮಾಸ್ಟರ್ ಪ್ಲಾನ್ ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊಸ ಪ್ಲಾನ್ ವಿವರ ಇಲ್ಲಿದೆ.
ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗದೆ ಇರುವ ಪ್ರದೇಶದಲ್ಲಿ ಆಹಾರದ ವ್ಯವಸ್ಥೆ ಮಾಡುವುದಕ್ಕೆ ಪಾಲಿಕೆಯ ಪಶುಸಂಗೋಪನಾ ವಿಭಾಗವು ಪ್ರಾಯೋಗಿಕವಾಗಿ ಹೊಸ ಪ್ಲಾನ್ ಪರಿಚಯಿಸಲಿದೆ ಎಂದು ಬಿಬಿಎಂಪಿಯ ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಹೇಳಿದ್ದಾರೆ. ಬೆಂಗಳೂರಿನ ಹಲವು ಜಾಗದಲ್ಲಿ ಬೀದಿ ನಾಯಿಗಳಿಗೆ ದಿನಕ್ಕೆ ಒಂದು ಹೊತ್ತಿನ ಆಹಾರವೂ ಸಹ ಸಿಗುತ್ತಿಲ್ಲ ಎನ್ನುವುದು ಪಾಲಿಕೆಯ ಗಮನಕ್ಕೆ ಬಂದಿದೆ.
ಈ ರೀತಿ ಊಟ ಸಿಗದೆ ಇರುವುದರಿಂದ ಬೀದಿ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳು ಜನರಿಗೆ ಕಚ್ಚುವ ಕೇಸ್ಗಳು ಹೆಚ್ಚಾಗುತ್ತಿವೆ. ಈ ರೀತಿ ನಾಯಿಗಳು ಜನರನ್ನು ಕಚ್ಚುವುದನ್ನು ತಪ್ಪಿಸಬೇಕಿದೆ. ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಬಿಬಿಎಂಪಿಯು ಪ್ರಾಣಿ ಪಾಲಕರು, ಪೌರಕಾರ್ಮಿಕರು, ಹೋಟೆಲ್ ಮಾಲಿಕರು, ಆರೋಗ್ಯ ವಿಭಾಗದ ಸಿಬ್ಬಂದಿ ಸೇರಿದಂತೆ ಆಸಕ್ತರೊಂದಿಗೆ ಸಮನ್ವಯ ಸಾಧಿಸಲು ಈ ಪ್ಲಾನ್ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಯೋಜನೆಯ ಜಾರಿ ವಿಧಾನ: ಪ್ರಾಣಿಗಳಿಗೆ ಆಹಾರ ನೀಡುವ ಪ್ರಾಣಿ ಪ್ರಿಯರ ನೋಂದಣಿಗೆ ಬಿಬಿಎಂಪಿಯಿಂದ ಅವಕಾಶ ನೀಡಲಾಗುವುದು. ಪೌರ ಕಾರ್ಮಿಕರು ಹಾಗೂ ಖಾಸಗಿ ಹೋಟೆಲ್ ಮಾಲೀಕರು ಈ ಪ್ಲಾನ್ನಲ್ಲಿ ಪಾಲ್ಗೊಳ್ಳುವಂತೆ ಮಾಡಿ ಆಹಾರ ನೀಡುವ ಸ್ಥಳಗಳನ್ನು ಗುರುತಿಸಲಾಗುವುದು. ಬೀದಿ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ಮಾಡಲಾಗುವುದು. ಇದಾದ ನಂತರ ಈ ಅಭಿಯಾನವನ್ನು ಪ್ರಾಯೋಗಿಕವಾಗಿ ಆಯ್ದ ಸ್ಥಳಗಳಲ್ಲಿ ಅನುಷ್ಠಾನ ಮಾಡಲಾಗುವುದು. ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಈ ಪ್ಲಾನ್ ವರ್ಕ್ಔಟ್ ಆದ ಮೇಲೆ, ಬೆಂಗಳೂರಿನ ಪಾಲಿಕೆಯ ಎಲ್ಲಾ ವಾರ್ಡ್ಗಳಲ್ಲಿ ಈ ಅಭಿಯಾನವನ್ನು ಅನುಷ್ಠಾನ ಮಾಡಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.
ಪ್ರಾಣಿ ಪಾಲಕರು ನೋಂದಾಯಿಸಿಕೊಳ್ಳಬಹುದು: ಬೆಂಗಳೂರಿನಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿರುವ ಪ್ರಾಣಿ ಪಾಲಕರು ಪಾಲಿಕೆ ಪಶುಸಂಗೋಪನಾ ಇಲಾಖೆಯಿಂದ ನೊಂದಣಿ ಮಾಡಿಕೊಳ್ಳಬಹುದು. ಪಶಸಂಗೋಪನೆ ವಿಭಾಗದ ಸಾಮಾಜಿಕ ಜಾಲತಾಣವಾದ X, Facebook ಮತ್ತು Instagram (@bbmp_animalhusbandry) ಪುಟಗಳಲ್ಲಿ ನೋಂದಾಣಿ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಲಿಂಕ್ ಆಯ್ಕೆ ನೀಡಲು ನಿರ್ಧರಿಸಲಾಗಿದೆ.
ನೋಂದಣಿ ಮಾಡುವುದು ಕಡ್ಡಾಯವಲ್ಲ: ಬೆಂಗಳೂರಿನಲ್ಲಿ ಪ್ರಾಣಿಪಾಲಕರ ನೋಂದಾಣಿಯು 2ನೇ ಅಕ್ಟೋಬರ್ 2024 ನಿಂದ ಪ್ರಾರಂಭವಾಗಲಿದೆ. 31ನೇ ಅಕ್ಟೋಬರ್ 2024ರವರೆಗೆ ನೋಂದಣಿಗೆ ಅವಕಾಶವಿರುತ್ತದೆ. ಆದರೆ, ಪ್ರಾಣಿ ಪಾಲಕರ ನೋಂದಣಿ ಕಡ್ಡಾಯವಾಗಿರುವುದಿಲ್ಲ ಎಂದೂ ಬಿಬಿಎಂಪಿ ಹೇಳಿದೆ.
1533ಗೆ ಕರೆ ಮಾಡಿ: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಪಾಲಿಕೆಯ ಪಶಸಂಗೋಪನಾ ವಿಭಾಗದ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಸಾರ್ವಜನಿಕವಾಗಿ ಯಾವುದೇ ಸಹಾಯಕ್ಕಾಗಿ ಬಿಬಿಎಂಪಿ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡಬಹುದು ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಸೋಮವಾರದಿಂದ ಲೋಕಾಯುಕ್ತ ತನಿಖೆ ಆರಂಭ!


