ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10ರಿಂದ 14ರವರೆಗೆ ವೈಮಾನಿಕ ಪ್ರದರ್ಶನ (ಏರ್ ಶೋ) ನಡೆಯಲಿದೆ. ಈ ಹಿನ್ನೆಲೆ ಈ ಮಾರ್ಗದಲ್ಲಿ ವಾಹನ ದಟ್ಟಣೆ ಕೂಡ ಅಧಿಕವಾಗಿರಲಿದೆ. ಈಗಾಗಲೇ ಇಲ್ಲಿ ಏರ್ಶೋ ನಡೆಯುವ ಕಾರಣ ಮಾರ್ಗ ಬದಲಾವಣೆ ಮಾಡಲಾಗಿದೆ. ಆದರೆ, ಇಲ್ಲಿನ ಟ್ರಾಫಿಕ್ನಿಂದ ಪಾರಾಗಲು ಹಲವು ಬದಲಿ ಮಾರ್ಗಗಳಿವೆ. ಅವುಗಳನ್ನು ಮುಂದೆ ತಿಳಿಯಿರಿ..
ಯಲಹಂಕ ವಾಯುನೆಲೆಯು ಏರ್ಪೋರ್ಟ್ ರಸ್ತೆಗೆ ಹೊಂದಿಕೊಂಡಿದೆ. ಅಲ್ಲದೆ ಇದು ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ದೇವನಹಳ್ಳಿ ಪಟ್ಟಣಗಳು ಹಾಗೂ ಹೈದರಾಬಾದ್ ಸೇರಿದಂತೆ ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಹೀಗಾಗಿ ಏರ್ಪೋರ್ಟ್ಗೆ ಹೋಗಿ ಬರುವ ವಾಹನಗಳು ಸೇರಿ ದಿನವಿಡೀ ವಾಹನ ದಟ್ಟಣೆ ಅಧಿಕವಾಗಿರುತ್ತೆ. ಇನ್ನು ಏರ್ಶೋ ನಡೆಯುವ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಸಂಚರಿಸುವವರಿಗೆ ತುಸು ಕಷ್ಟವೇ ಆಗಲಿದೆ.
ಹಾಗಾಗಿ ಏರ್ಶೋ ನಡೆಯುವ ಸಂದರ್ಭದಲ್ಲಿ ಈ ಮಾರ್ಗದ ಬದಲಿಗೆ ಹಲವು ಪರ್ಯಾಯ ಮಾರ್ಗಗಳಿದ್ದು ಅವುಗಳನ್ನು ಬಳಸಬಹುದು. ಮುಖ್ಯವಾಗಿ ಏರ್ಪೋರ್ಟ್ ರಸ್ತೆ ಬದಲಿಗೆ ಬೆಂಗಳೂರಿನಿಂದ ಹೊರಡುವವರು ಹೆಬ್ಬಾಳದಿಂದ ಹೆಣ್ಣೂರು ಮಾರ್ಗವಾಗಿ ಬಾಗಲೂರು ರಸ್ತೆ ಪ್ರವೇಶಿಸಿ, ಕೆಂಪೇಗೌಡ ಏರ್ಪೋರ್ಟ್ ಮೂಲಕ ಮತ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರಿಕೊಳ್ಳಬಹುದು.
ವೈಟ್ಫೀಲ್ಡ್, ಕೆ.ಆರ್.ಪುರ, ವರ್ತೂರು, ಎಲೆಕ್ಟ್ರಾನಿಕ್ ಸಿಟಿ ಭಾಗಗಳಿಂದ ಬರುವವರು ಏರ್ಪೋರ್ಟ್ ರಸ್ತೆ ಬದಲಿಗೆ ಬೂದಿಗೆರೆ ಕ್ರಾಸ್ ಮೂಲಕ ಬೂದಿಗೆರೆ, ಬೆಟ್ಟಕೋಟೆ ಮಾರ್ಗವಾಗಿ ದೇವನಹಳ್ಳಿ ಅಥವಾ ಏರ್ಪೋರ್ಟ್ ಹಿಂಬದಿಯ ರಸ್ತೆ ಮೂಲಕವೂ ಸಂಚರಿಸಬಹುದು. ಇಲ್ಲದಿದ್ದರೆ, ಸೀದಾ ಹೊಸಕೋಟೆಗೆ ತೆರಳಿ ಕೋಲಾರ ರಸ್ತೆಯಲ್ಲಿರುವ ಹೊಸ ಹೆದ್ದಾರಿ ಮೂಲಕ ದೇವನಹಳ್ಳಿ ತಲುಪಿ ಹೈದರಾಬಾದ್ ರಸ್ತೆಗೆ ಹೋಗಬಹುದು.
ಯಲಹಂಕದಿಂದ ಕೋಗಿಲು ಕ್ರಾಸ್ ಮೂಲಕ ಮುಂದಕ್ಕೆ ಚಲಿಸಿ ಬಾಗಲೂರು ಕ್ರಾಸ್ ಮೂಲಕವೂ ಏರ್ಪೋರ್ಟ್ ಒಳ ರಸ್ತೆ ಮೂಲಕ ಟೋಲ್ಗೇಟ್ ಬಳಿಗೆ ತಲುಪಬಹುದು. ಬಾಗಲೂರು ಮೂಲಕ ಇಂಡಸ್ಟ್ರಿಯಲ್ ಏರಿಯಾ ಮುಖೇನ ದೇವನಹಳ್ಳಿ ಮಾರ್ಗಕ್ಕೆ ಬಂದು ತಲುಪಬಹುದು. ಏರ್ಶೋ ವೇಳೆ ಈ ಮಾರ್ಗಗಳಲ್ಲಿ ಟ್ರಾಫಿಕ್ ಕಿರಿಕಿರಿಯಿಲ್ಲದೆ ಸಂಚರಿಸಬಹುದು.
ಮತ್ತೊಂದು ಮಾರ್ಗವೆಂದರೆ ಯಲಹಂಕ-ರಾಜಾನುಕುಂಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ರಸ್ತೆಯ ಟೋಲ್ ಗೇಟ್ ಬಳಿಯೂ ಉಗನವಾಡಿ ರಸ್ತೆಯ ಮೂಲಕ ಮತ್ತೆ ಹೈದರಾಬಾದ್ ಹೆದ್ದಾರಿಗೆ ಪ್ರವೇಶಿಸಬಹುದು ಅಥವಾ ದೊಡ್ಡಬಳ್ಳಾಪುರ ತಲುಪಿ ಅಲ್ಲಿಂದಲೂ ಹೊಸದಾಗಿ ನಿರ್ಮಿಸಿರುವ ಹೆದ್ದಾರಿ ಮೂಲಕವೂ ಬರಬಹುದು. ಸಾಧ್ಯವಾದಷ್ಟು ಏರ್ಶೋ ನಡೆಯುವ ಸಮಯದಲ್ಲಿ ಏರ್ಪೋರ್ಟ್ ರಸ್ತೆಯಲ್ಲಿ ಸಂಚರಿಸುವವರು ಈ ಬದಲಿ ಮಾರ್ಗಗಳಲ್ಲಿ ಪ್ರಯಾಣಿಸುವುದು ಒಳ್ಳೆಯದು.
ಏರ್ಶೋ ನಡೆಯುವ ಸಂದರ್ಭದಲ್ಲಿ ಅದನ್ನು ವೀಕ್ಷಿಸಲು ಹೆಚ್ಚಿನ ಜನ ಬರುವುದರಿಂದ ಟ್ರಾಫಿಕ್ ಜಾಮ್ ವಿಪರೀತವಾಗುವ ಸಾಧ್ಯತೆ ಇದೆ. ಏರ್ಶೋ ಪ್ರವೇಶಿಸಲು ಸದ್ಯ ಏರ್ಪೋರ್ಟ್ ರಸ್ತೆಯ ಎರಡೂ ಮಾರ್ಗಗಳನ್ನು ಬಳಸಲಾಗುತ್ತಿದೆ. ಹೀಗಾಗಿ ನಿಧಾನಗತಿಯಲ್ಲಿ ವಾಹನ ಸಂಚಾರವಿರಲಿದೆ. ಗಣ್ಯರ ಪ್ರವೇಶಕ್ಕೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಕೂಡ ಮಾಡಲಾಗಿದೆ. ಹೀಗಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆ. ಕೇವಲ ತುರ್ತು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಲು ಪೊಲೀಸರು ಮುಂದಾಗಿದ್ದಾರೆ. ಹಾಗಾಗಿ ಈ ಮಾರ್ಗದಲ್ಲಿ ಸಂಚರಿಸುವವರು ಬದಲಿ ಮಾರ್ಗಗಳ ಬಗ್ಗೆ ತಿಳಿದುಕೊಂಡಿರಿ.
ನಮ್ಮ ಮೆಟ್ರೋ ದುಬಾರಿ: ಟಿಕೆಟ್ ರೇಟ್ ನೋಡಿ ಪ್ರಯಾಣಿಕರು ಕಂಗಾಲು, ಭುಗಿಲೆದ್ದ ಆಕ್ರೋಶ!


