ತುಮಕೂರು: ದಿನಾಂಕ 14/04/2025ರ ಸೋಮವಾರದಿಂದ 18/04/2025ರ ಶುಕ್ರವಾರದವರೆಗೆ ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಉಜ್ಜನಿಯಲ್ಲಿ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವ ನಡೆಯಲಿದೆ.
ಕುಣಿಗಲ್ ತಾಲೂಕಿನ ಉಜ್ಜನಿ ಗ್ರಾಮವು ಶ್ರೀ ಚೌಡೇಶ್ವರಿದೇವಿಯು ನೆಲೆಸಿರುವ ಪುಣ್ಯ ಕ್ಷೇತ್ರ. ಈ ಕ್ಷೇತ್ರವು ಹೇಮಗಿರಿ, ರಾಮಗಿರಿ, ಕೃಷ್ಣಗಿರಿಯ ಮಧ್ಯ ಇದೆ. ಈ ಕ್ಷೇತ್ರದಲ್ಲಿ ಸಿದ್ಧರು ಹಾಗೂ ಮಹಾಪುರುಷರು ನೆಲೆಸಿರುವ ಬಗ್ಗೆ ಕುರುಹುಗಳು, ಗವಿ ಕಂದರಗಳು ಸಾಕ್ಷಿಯಾಗಿವೆ. ಉಜ್ಜನಿ ಗ್ರಾಮವನ್ನು ವಿಕ್ರಮಾದಿತ್ಯ ಮಹಾರಾಜ ಸ್ಥಾಪಿಸಿ, ತನ್ನ ರಾಜಧಾನಿಯಾದ ಉಜ್ಜನಿಯ ಹೆಸರನ್ನು ಈ ಊರಿಗೆ ಇಟ್ಟನೆಂಬ ಪ್ರತೀತಿ ಇದೆ. ವಿಕ್ರಮಾದಿತ್ಯನು ಹಲವಾರು ರಾಜ್ಯಗಳನ್ನು ಜಯಿಸಿ ಬೇಟೆಗೆಂದು ಈ ಕ್ಷೇತ್ರಕ್ಕೆ ಬಂದಾಗ ಮೊಲವೇ ಹುಲಿಯನ್ನು ಹಿಮ್ಮೆಟ್ಟಿಸಿದ ಪ್ರಸಂಗವನ್ನು ಕಂಡು ಈ ಕ್ಷೇತ್ರದಲ್ಲಿ ಯಾವುದೋ ಒಂದು ದಿವ್ಯಶಕ್ತಿ ಇರಬಹುದೆಂದು ಪರೀಕ್ಷಿಸಿ ನೋಡಲಾಗಿ ಶ್ರೀ ಚೌಡೇಶ್ವರಿ ದೇವಿ ನೆಲೆಗೊಂಡಿರುವುದನ್ನು ಅರಿತು ಆ ಜಾಗದಲ್ಲಿ ದೇವಾಲಯವನ್ನು ಪ್ರತಿಷ್ಠಾಪಿಸಿ ಶ್ರೀ ಚೌಡೇಶ್ವರಿಯ ಅಮ್ಮನವರ ಭಕ್ತನಾದನು. ಅಂದಿನಿಂದ ಇಂದಿನವರೆಗೂ ಶ್ರೀ ಚೌಡೇಶ್ವರಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಎಲ್ಲಾ ಜಾತಿ ಧರ್ಮದವರು ಪೂಜಿಸುತ್ತಾ ಬಂದಿದ್ದಾರೆ. ವರ್ಷಂಪ್ರತಿ ವಸಂತ ಮಾಸದಲ್ಲಿ ಶ್ರೀ ಚೌಡೇಶ್ವರಿ ಜಾತ್ರೋತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ. ಹಾಗೇ ಇಡೀ ಭರತಖಂಡದಲ್ಲಿ ಎಲ್ಲಿಯೂ ಕೂಡ ಜರುಗದ ವಿಶೇಷ ಆಚರಣೆ ಎಂದರೆ ಹರಿಜನರು ಬ್ರಾಹ್ಮಣರಾಗಿ ದೇವಿಯ ಅಗ್ನಿಕುಂಡ ಪ್ರವೇಶವನ್ನು ನೆರವೇರಿಸುತ್ತಾರೆ. ಈ ಜಾತ್ರೋತ್ಸವವು ಒಂದು ವಾರಗಳ ಕಾಲ ಜರುಗುತ್ತದೆ ಹಾಗೆ ಈ ಜಾತ್ರೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆಲ್ಲ ಶ್ರೀ ಚೌಡೇಶ್ವರಿದೇವಿಯ ಅನುಗ್ರಹವಿರುತ್ತದೆ.
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರ್ಷಂಗಳು 1947ಕ್ಕೆ ಸರಿಯಾದ ಶ್ರೀ ವಿಶ್ವವಸುನಾಮ ಸಂವತ್ಸರದ ಚೈತ್ರ ಮಾಸ ಉತ್ತರಾಯಣ ಶಿಶಿರ ಋತು ಏಪ್ರಿಲ್ 14ರ ಸೋಮವಾರದಂದು ಆರತಿ, ಏಪ್ರಿಲ್ 15ರ ಮಂಗಳವಾರದಂದು ಅಗ್ನಿಕೊಂಡ ಮಹೋತ್ಸವ, ಏಪ್ರಿಲ್ 16ರ ಬುಧವಾರದಂದು ಬ್ರಹ್ಮರಥೋತ್ಸವ ಹಾಗೂ ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ ಏರ್ಪಡಿಲಾಗಿದೆ. ಕುಣಿಗಲ್ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಆದಿ ಕಾಲದಿಂದ ನಡೆಸಿರುವ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ವಿಶೇಷವಾಗಿ ನಡೆಯಲಿದೆ. ಭಕ್ತಮಹಾಜನರುಗಳು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.
ಶ್ರೀ ಚೌಡೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಉಸ್ತುವಾರಿ ಸದಸ್ಯರುಗಳಾದ ಶ್ರೀ ಸಂತೋಷ್.ಯು.ಎನ್.. ಶ್ರೀ ಸಂತೋಷ್.ಯು.ಟಿ., ಶ್ರೀ ಜಯರಾಮಯ್ಯ.ಯು.ಆರ್., ಶ್ರೀ ಶ್ರೀಧರ್.ಯು.ಎಸ್.. ಶ್ರೀ ದಿನೇಶ್.ಯು.ಎನ್.. ಶ್ರೀ ರಾಮಕೃಷ್ಣಯ್ಯ, ಶ್ರೀ ಅಶೋಕ್.ಯು.ಆರ್., ಶ್ರೀ ನಂಜೇಗೌಡ (ವಿನಯ್) ಯು.ಎಸ್.. ಶ್ರೀ ರಾಜಶೇಖರ್ ದೀಕ್ಷತ್, ಶ್ರೀ ಎನ್.ಆರ್.ರಾಮಕೃಷ್ಣಯ್ಯ, ಶ್ರೀ ಚಿಕ್ಕಣ್ಣ.ಯು.ಸಿ ಹಾಗೂ ಯಜಮಾನರುಗಳಾದ ಶ್ರೀ ಲೋಕೇಶ್ ಕಾಡೇಗೌಡರ, ಶ್ರೀ ರಾಮಣ್ಣ ಜವರೇಗೌಡ, ಶ್ರೀ ಕುಮಾರ್ ಹನುಮದಾಸೇಗೌಡ, ಶ್ರೀ ಯು.ಕೆ.ವೆಂಕಟೇಶ್ ಕೊಪ್ಲೇಗೌಡ (ಆಟೋ), ಶ್ರೀ ನರಸಿಂಹಯ್ಯ (ಗಿರಿ), ಶ್ರೀ ಬಲರಾಮು ಜೋಗಿಯರ, ಶ್ರೀ ಚೌಡಯ್ಯ ಮುಳುವಾಗಲಯ್ಯ, ಶ್ರೀ ಮರಿಹುಚ್ಚಯ್ಯ ಕೆಂಡೇಗೌಡರ, ಶ್ರೀ ರಾಜಣ್ಣ ಮಟ್ಟೇಗೌಡರ, ಶ್ರೀ ಶಿವಣ್ಣ ಮೂಗಣ್ಣರ, ಶ್ರೀ ಕೆಂಪಯ್ಯ ಚಾಮೇಗೌಡ, ಶ್ರೀ ಚಲುವಯ್ಯ ತೊಳಮ್ಮರ, ಶ್ರೀ ಅಪ್ಪಾಜಯ್ಯ ಕೋಶಯ್ಯ ಅವರು ಆತ್ಮೀಯ ಸ್ವಾಗತ ಕೋರಿದ್ದಾರೆ.





