BBMP
Loading ...

Siddaganga Mutt

ಬೆಂಗಳೂರು: ತುಮಕೂರಿನ ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್‌ ಬಿಲ್‌ ಪಾವತಿಸುವಂತೆ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ) ನೋಟಿಸ್ ನೀಡಿದ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಕೆಐಎಡಿಬಿ ಮಂಡಳಿಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲವೇ? ಸಿದ್ದಗಂಗಾ ಮಠಕ್ಕೆ ವಿದ್ಯುತ್‌ ಬಿಲ್‌ ನೋಟಿಸ್‌ ಏಕೆ? ‘ತ್ರಿವಿಧ ದಾಸೋಹ’ದ ಮಠಕ್ಕೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರತಿಪಕ್ಷಗಳು ಕೂಡ ಈ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿವೆ.

ಕೆಐಎಡಿಬಿಗೆ ಸಿದ್ದಲಿಂಗ ಸ್ವಾಮೀಜಿಗಳಿಂದ ಪತ್ರ: ವಿದ್ಯುತ್ ಬಿಲ್ ಪಾವತಿ ವಿಚಾರವಾಗಿ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಪತ್ರ ಬರೆದಿದ್ದಾರೆ. ದೇವರಾಯನಪಟ್ಟಣ ಕೆರೆಯಿಂದ ಸಿದ್ದಗಂಗಾ ಮಠಕ್ಕೆ ಕುಡಿಯುವ ನೀರಿನ ಉಪಯೋಗಕ್ಕೆ ಬಳಕೆ ಮಾಡಲು ಸ್ಥಾಪಿಸಲ್ಪಟ್ಟಿರುವ ಶುದ್ದೀಕರಣ ಘಟಕ ಇನ್ನೂ ಪ್ರಾರಂಭವಾಗಿಲ್ಲ. ಪ್ರಾಯೋಗಿಕವಾಗಿ ಕೆರೆ ನೀರನ್ನು ಭರ್ತಿ ಮಾಡಿರುತ್ತಾರೆ. ಶುದ್ಧೀಕರಣ ಘಟಕ ಪ್ರಾರಂಭವಾಗಬೇಕಾಗಿದ್ದು, ಸದರಿ ಶುದ್ದೀಕರಣ ಘಟಕದಿಂದ ಸಿದ್ದಗಂಗಾ ಮಠದ 10000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪ್ರತಿನಿತ್ಯ ಮಠಕ್ಕೆ ಬರುವ ಭಕ್ತರಿಗೆ ಹಾಗೂ ಅಕ್ಕಪಕ್ಕದ ಗ್ರಾಮಗಳಾದ ದೇವರಾಯಪಟ್ಟಣ, ಮಾರನಾಯ್ಕನಪಾಳ್ಯ, ಬಸವಪಟ್ಟಣ, ಬಂಡೇಪಾಳ್ಯ ಸೇರಿದಂತೆ ಹಲವು ಹಳ್ಳಿಗಳಿಗೆ ನೀರು ಸರಬರಾಜು ವ್ಯವಸ್ಥೆ ಮಾಡಬೇಕಾಗಿರುತ್ತದೆ. ಇದರಿಂದ ಸಿದ್ದಗಂಗಾ ಮಠದಿಂದ ವಿದ್ಯುತ್ ಬಿಲ್ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಹಳ್ಳಿಗಳಿಗೆ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಸರ್ಕಾರದ ಆದ್ಯ ಕರ್ತವ್ಯ. ಅದಕ್ಕಾಗಿ ಬರುವ ವಿದ್ಯುತ್ ಬಿಲ್ ಸರ್ಕಾರದಿಂದ ಪಾವತಿ ಮಾಡಬೇಕೇ ಹೊರತು ಸಂಘ ಸಂಸ್ಥೆಗಳು ಪಾವತಿ ಮಾಡಲು ಬರುವುದಿಲ್ಲ. ಕೆಐಎಡಿಬಿ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳು ದೇವರಾಯಪಟ್ಟಣ ಕೆರೆಯ ನೀರನ್ನು ಸಿದ್ದಗಂಗಾ ಮಠದ ದೈನಂದಿನ ಕೆಲಸ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದಾಗಿ ನೀಡಿರುವ ವರದಿಯನ್ನು ಪುನರ್ ಪರಿಶೀಲಿಸಿ ಕುಡಿಯುವ ನೀರಿನ ಸೌಕರ್ಯವನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಇದನ್ನ ಪುನರ್ ಪರಿಶೀಲನೆ ಮಾಡಬೇಕೆಂದು ಕೋರುತ್ತೇವೆಂದು ಪತ್ರದಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ.

ವಿದ್ಯುತ್ ಬಿಲ್​ ಕಟ್ಟುವಂತೆ ಸಿದ್ಧಗಂಗಾ ಮಠಕ್ಕೆ ನೋಟಿಸ್​ ನೀಡಿರುವ ವಿಚಾರವಾಗಿ ಚಾಮರಾಜನಗರದಲ್ಲಿ ಸಿದ್ದಲಿಂಗಶ್ರೀ ಪ್ರತಿಕ್ರಿಯೆ ನೀಡಿದ್ದು, ಕೆಐಎಡಿಬಿಯಿಂದ ನಮ್ಮ ಮಠಕ್ಕೆ ನೋಟಿಸ್ ಬಂದಿರುವುದು ನಿಜ. ಇದನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಮಠದಿಂದ ಪತ್ರ ಬರೆದಿದ್ದೇವೆ ಎಂದಿದ್ದಾರೆ.

ನೋಟಿಸ್​ ವಾಪಸ್ ಪಡೆಯುತ್ತೇವೆ
ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್​ ವಾಪಸ್ ಪಡೆಯುತ್ತೇವೆ. ಅಧಿಕಾರಿಗಳ ತಪ್ಪು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಬಗ್ಗೆ ನಮಗೆಲ್ಲರಿಗೂ ಗೊತ್ತು. ಈಗಾಗಲೇ ನಾನು ಕೆಐಎಡಿಬಿ ಸಿಇಒಗೆ ಹೇಳಿದ್ದೇನೆ. ಸಿದ್ದಗಂಗಾ ಮಠದ ಸ್ವಾಮೀಜಿ ಜೊತೆಗೂ ಮಾತನಾಡುತ್ತೇನೆ. ಕೆಐಎಡಿಬಿ ವ್ಯಾಪ್ತಿಗೆ ಬರುವ ಕೆರೆ ನೀರನ್ನು ಬಳಸಿಕೊಂಡರೂ ಪರವಾಗಿಲ್ಲ ಎಂದು ಅವರು ಹೇಳಿದ್ದಾರೆ.

ತಪ್ಪು ಮಾಡಿದ್ದರೆ ಅಧಿಕಾರಿ ಅಮಾನತು
ಸಿದ್ದಗಂಗಾ ಮಠಕ್ಕೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುತ್ತೇವೆ. ಸಿದ್ದಗಂಗಾ ಮಠದ ಮೇಲೆ ಅಪಾರವಾದ ಗೌರವ ಇದೆ. ನೀರು ಬಳಕೆಯಾಗದೆ ನೋಟಿಸ್ ನೀಡಿದ್ದರೆ ಅಧಿಕಾರಿಯನ್ನ ಅಮಾನತು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಸಿದ್ದಗಂಗಾ ಮಠಕ್ಕೆ ಉಚಿತವಾಗಿ ನೀರನ್ನು ಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.

ಸರ್ಕಾರದ ವಿರುದ್ಧ ಸಿಟಿ ರವಿ ವಾಗ್ದಾಳಿ: ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್​ ನೋಟಿಸ್​ ವಿಚಾರವಾಗಿ ಪರಿಷತ್ ಸದಸ್ಯ ಸಿಟಿ ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಮಠಗಳಿಗೆ ಕೊಡುವ ಪರಂಪರೆ ಇದೆ. ಆದರೆ ಮಠದಿಂದ ಕಿತ್ತುಕೊಳ್ಳುವುದು ಇದ್ಯಾವ ಸೀಮೆ ಪರಂಪರೆ ಎಂದು ಬೆಳಗಾವಿಯಲ್ಲಿ ಅವರು ಪ್ರಶ್ನಿಸಿದ್ದಾರೆ.

ಹಲವು ಮಠಗಳು ಅನ್ನದಾಸೋಹ, ಉಚಿತ ಶಿಕ್ಷಣ ನೀಡುತ್ತಿವೆ. ಹೀಗಾಗಿ ಮಠಗಳಿಗೆ ಕೊಡುವ ಪರಂಪರೆ ನಮ್ಮಲ್ಲಿದೆ. ಮಠದಿಂದಲೇ ಕಿತ್ತುಕೊಳ್ಳುವ ಸರ್ಕಾರ ಯಾವ ಪರಿಸ್ಥಿತಿಗೆ ಬಂದಿದೆ? ಹಾಗಾದರೆ ಇವರು ಭಿಕಾರಿಗಳಾಗಿದ್ದಾರಾ? ನಾಚಿಕೆ ಆಗಲ್ವಾ? ನೋಟಿಸ್ ವಾಪಸ್ ಪಡೆದುಕೊಳ್ಳಿ. ಸುತ್ತಮುತ್ತ ಕೆರೆಗಳಿಗೆ ನೀರು ಹರಿಸಿದ್ದಕ್ಕೆ ಮಠಕ್ಕೆ ನೋಟಿಸ್ ಕೊಡುತ್ತೀರಾ? ಮಠಕ್ಕೆ ನೋಟಿಸ್ ಕೊಟ್ಟಿರುವ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಿ ಎಂದು ರವಿ ಆಗ್ರಹಿಸಿದರು.

ವಿದ್ಯುತ್ ನಿಗಮಗಳಲ್ಲಿ 260 ಕೋಟಿ ರೂಪಾಯಿ ಹಗರಣ: ಕೇಳಿಬಂತು ಗಂಭೀರ ಆರೋಪ

Leave a Reply

Your email address will not be published. Required fields are marked *