Greater Bengaluru News9 : ಜಮೀನು ಸರ್ವೇಗೆ ಲಂಚ ಸ್ವೀಕರಿಸುತ್ತಿದ್ದ ಭೂಮಾಪಕ ಲಂಚ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ಹರೀಶ್ ರೆಡ್ಡಿ ಹಾಗೂ ಸಹಾಯಕ ರಾಜು ಆರೋಪಿಗಳು. ಗೌರಿಬಿದನೂರು ತಾಲೂಕಿನ ಹಳೇ ಉಪ್ಪಾರಹಳ್ಳಿ ಗ್ರಾಮದ ಮುದ್ದಗಂಗಮ್ಮ ಎಂಬುವವರು ಇಲ್ಲಿನ ಸಾಯಿಬಾಬಾ ದೇವಸ್ಥಾನದ ಬಳಿ ಇರುವ ಮುಕ್ಕಾಲು ಗುಂಟೆ ಜಮೀನನ್ನು ಪೋಡಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಭೂಮಾಪಕ ಹರೀಶ್ ರೆಡ್ಡಿ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದ. ಅಂತಿಮವಾಗಿ ಕೆಲಸ ಮಾಡಿಕೊಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆಯಿರಿಸಿದ್ದ. ಮುಂಗಡವಾಗಿ 3 ಸಾವಿರ ರೂ. ಹಣ ಪಾವತಿಸಿದ್ದ ಮುದ್ದಗಂಗಮ್ಮ ಬಳಿಕ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಇದರಿಂದ ಲೋಕಾಯುಕ್ತರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಗೌರಿಬಿದನೂರು ನಗರದ ಎಲ್.ಐ.ಸಿ ಕಚೇರಿಯ ಬಳಿಯ ನಂದಿನಿ ಹಾಲಿನ ಘಟಕದ ಬಳಿ ಉಳಿದ 20 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಸಾಕ್ಷಿ ಸಮೇತ ಹರೀಶ್ ರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಲೋಕಾಯುಕ್ತ ಎಸ್.ಪಿ ಆಂತೋನಿ ಜಾನ್, ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೀರೇಂದ್ರ ಕುಮಾರ್, ವೃತ್ತ ನಿರೀಕ್ಷಕರಾದ ಶಿವರಾಜ್ ಕುಮಾರ್, ನಿರ್ಮಲಾ, ಸಿಬ್ಬಂದಿ ಗುರು ರಾಮಚಂದ್ರ ಲಿಂಗರಾಜು ಅರುಣ್ ಕುಮಾರ್, ನಾಗರಾಜು, ಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿತು.


