ರಾಮನಗರ: ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ರೌಡಿಶೀಟರ್ಗಳ ಹೆಡೆಮುರಿ ಕಟ್ಟಬೇಕಿದ್ದ ಪೊಲೀಸರು ಠಾಣೆಯಲ್ಲೇ ಇಬ್ಬರು ರೌಡಿಶೀಟರ್ಗಳಿಗೆ ಹಾರಹಾಕಿ ಸನ್ಮಾನಿಸಿದ ಘಟನೆ ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕಳೆದ ಅ.18ರಂದು ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಠಾಣೆಯಲ್ಲಿ ಆಯುಧಪೂಜೆ ಕಾರ್ಯಕ್ರಮದ ವೇಳೆ ಒಂದಷ್ಟು ಗಣ್ಯರನ್ನು ಸನ್ಮಾನಿಸಿ ಗೌರವಿಸುವುದನ್ನು ವಾಡಿಕೆ ಮಾಡಿಕೊಂಡಿರುವ ಪೊಲೀಸರು, ಗಣ್ಯರ ಹೆಸರಿನಲ್ಲಿ ರೌಡಿಶೀಟರ್ಗಳಾದ ಅಜ್ಜದ್ ಹಾಗೂ ಅಂಜದ್ ಎನ್ನುವವರಿಗೆ ಹಾರ, ಶಾಲು ಹಾಕಿ ಸನ್ಮಾನ ಮಾಡಿ ಫೋಟೊಗೆ ಪೋಸ್ ನೀಡಿದ್ದಾರೆ.
ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಪೊಲೀಸರೇ ರೌಡಿಶೀಟರ್ಗಳಿಗೆ ಸನ್ಮಾನಿಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ರೌಡಿಶೀಟರ್ಗಳಿಗೆ ಸತ್ಕರಿಸುವ ಪೊಲೀಸರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳು ಗೃಹಸಚಿವರಿಗೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.


