ಬೆಂಗಳೂರು: ಬೆಂಗಳೂರಿನ ನಾಗರಿಕ ಸಂಸ್ಥೆಯಾದ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಟೀ, ಕಾಫಿ, ತಿಂಡಿ ಸೇರಿದಂತೆ ಆಹಾರ ಪೂರೈಕೆಯ ವ್ಯವಸ್ಥೆಗಾಗಿ 99.00 ಲಕ್ಷ ರೂಪಾಯಿ ಮೊತ್ತದ ಟೆಂಡರ್ ಕರೆಯಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿತಲ್ಲದೇ, ಬಿಬಿಎಂಪಿ ಟೆಂಡರ್ಗೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿವೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬಿಬಿಎಂಪಿ ಸಭೆಯಗಳಲ್ಲಿ ಆಹಾರ ಪೂರೈಕೆಗಾಗಿ ಜನರ ತೆರಿಗೆ ಹಣವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪೋಲಾಗುತ್ತಿದೆಯೇ?. ಪಾಲಿಕೆಯ ಈ ದುಂದುವೆಚ್ಚ ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟೆಂಡರ್ ಕರೆದಿದ್ದ ಪೇಪರ್ ಕಟಿಂಗ್ ಫೋಟೋ ವೈರಲ್ ಆಗಿತ್ತು. ಟೆಂಡರ್ ಸಾಕಷ್ಟು ವಿರೋಧ ಕೇಳಿ ಬಂದವು.
ಈ ಟೆಂಡರ್ ಕುರಿತು ಸ್ಪಷ್ಟನೆ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವದಂತಿಗಳು ಹಬ್ಬಿವೆ. ಪಾಲಿಕೆ ವ್ಯಾಪ್ತಿಯಲ್ಲಿ ವರ್ಷವಿಡೀ ನಡೆಯುವ ಸಭೆಗಳು ಹಾಗೂ ಸಮಾರಂಭಗಳು/ಕಾರ್ಯಕ್ರಮಗಳಿಗಾಗಿ ದಿನಾಂಕ: 17-03-2024 ತಾರೀಖಿಗೆ ಅನ್ವಯಿಸುವಂತೆ ಅಂದಿನ ಪತ್ರಿಕೆಗಳಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಈ ಟೆಂಡರ್ನಡಿ ಆಹಾರ, ತಿಂಡಿ, ಟೀ, ಕಾಫಿ ಪೂರೈಕೆ ವ್ಯವಸ್ಥೆಯು ಕೇವಲ ಒಂದು ಸಭೆ, ಕಾರ್ಯಕ್ರಮಕ್ಕೆ ಅಲ್ಲ. ಈ ಟೆಂಡರ್ ಕೇವಲ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.
ಬಿಬಿಎಂಪಿ ವತಿಯಿಂದ ವರ್ಷವಿಡೀ ನಡೆಸುವ ಎಲ್ಲಾ ಸಭೆಗಳು, ನಿಯಮಿತ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಹಾರ ಪೂರೈಕೆಗಾಗಿ ಈ ಟೆಂಡರ್ ಕರೆಯಲಾಗಿದೆ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.
ಟೆಂಡರ್ನ ಸಿಂಧುತ್ವವು ಟೆಂಡರ್ ನೀಡಿದ ದಿನಾಂಕದಿಂದ ಒಂದು ವರ್ಷದ ಅವಧಿಯದ್ದಾಗಿರುತ್ತದೆ. ಈ ಕ್ರಮವು ಪಾಲಿಕೆಯ ಹಣಕಾಸಿನ ಬಳಕೆಯಲ್ಲಿ ನಿರ್ಧಿಷ್ಟ ವೃತ್ತಿಪರತೆಯನ್ನು ತರುತ್ತದೆ. ಅಲ್ಲದೇ ಪ್ರತಿ ಸಣ್ಣ ಸಣ್ಣ ಸಭೆ, ಕಾರ್ಯಕ್ರಮಗಳಲ್ಲಿ ಆಹಾರ ಪೂರೈಕೆಗೆ ಪ್ರತ್ಯೇಕವಾಗಿ ದರ ನಿಗಧಿ ಮಾಡುವ ಮತ್ತು ಹೆಚ್ಚಿನ ತೊಡಕುಗಳಿಗೆ ಕಾರಣವಾಗುವ ಪ್ರಮೇಯವನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ಬಿಬಿಎಂಪಿಯ ಆಡಳಿತ ವಿಭಾಗದ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್ ರವರು ಸ್ಪಷ್ಟಪಡಿಸಿದ್ದಾರೆ.


