BBMP
Loading ...

GBA

Greater Bengaluru News9 : ಕರ್ನಾಟಕ ಸರ್ಕಾರ ಶಾಲೆಗಳ ರಜೆ ಇದ್ದ ಪ್ರಯುಕ್ತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದೆ. ಸರ್ಕಾರಿ ಶಿಕ್ಷಕರು, ಅಧಿಕಾರಿಗಳು ಈ ಸಮೀಕ್ಷೆಯ ಭಾಗವಾಗಿದ್ದಾರೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ನಡೆಯುವ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹೌದು, ಕಳೆದ 15 ದಿವಸಗಳಿಂದ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯ ನೆಪದಲ್ಲಿ ಬೆಂಗಳೂರಿನ ಎಲ್ಲಾ ನಗರ ಪಾಲಿಕೆ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗದೇ ಕಚೇರಿಗಳು ಸಂಪೂರ್ಣ ಬಣಗುಡುತ್ತಿವೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಮುಖ್ಯ ಆಯುಕ್ತರು ಇತ್ತ ಕಡೆ ಗಮನಹರಿಸಿ ಸಾರ್ವಜನಿಕ ಕೆಲಸಗಳು ಮುಂದುವರಿಯುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷ (ಎಎಪಿ) ಆಗ್ರಹಿಸಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಗರಪಾಲಿಕೆ ಕಚೇರಿಯಲ್ಲಿ, ಜಲಮಂಡಳಿ ಕಚೇರಿಯಲ್ಲಿ ಪಕ್ಷದ ಮುಖಂಡ ಅಣ್ಣ ನಾಯಕ್ ಫ್ಯಾಕ್ಟ್ ಚೆಕ್ ಮಾಡಿದ್ದಾರೆ. ವಿಡಿಯೋ ಮೂಲಕ ಸಮೀಕ್ಷೆಗಾಗಿ ಶಿಕ್ಷಣ ಇಲಾಖೆಯ ಸಿಬ್ಬಂದಿಗಳನ್ನು ಸರ್ಕಾರವು ನೇಮಿಸಿದೆ. ಆದರೆ ಬಿಬಿಎಂಪಿ ಸಿಬ್ಬಂದಿಗಳು ಕಳೆದ ಹಲವು ದಿವಸಗಳಿಂದ ಕಚೇರಿಗೆ ಬಾರದೆ ಗೈರು ಹಾಜರಾಗಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಭಂಗ ಉಂಟು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕೂಡಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರು ಹಾಗೂ ನಗರ ಪಾಲಿಕೆ ಆಯುಕ್ತರುಗಳು ತಮ್ಮ ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನು ನೀಡಿ ಕಚೇರಿಗಳಿಗೆ ಹಾಜರಾಗುವಂತೆ ಸೂಚನೆ ನೀಡಬೇಕು. ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ ಬೇಕೆಂದು ಅವರು ಒತ್ತಾಯಿಸಿದರು.

ಸಮೀಕ್ಷೆ ದಿನಗಳು ವಿಸ್ತರಣೆ, ಅರ್ಧ ದಿನ ಕೆಲಸ
ಜಾತಿ ಗಣತಿಯು ಈ ಮೊದಲು ಸೆಪ್ಟಂಬರ್ 22ರಿಂದ ಶುರುವಾಗಿ ಅಕ್ಟೋಬರ್ 07ರಂದು ಪೂರ್ಣಗೊಳಿಸಲು ಯೋಚನೆಯಲ್ಲಿತ್ತು. ಆದರೆ ಗಣತಿ ಕಾರ್ಯ ಬಾಕಿ ಉಳಿದ ಹಿನ್ನೆಲೆಯಲ್ಲಿ, ಈ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲಾಯಿತು. ಅಕ್ಟೋಬರ್ 08ರಿಂದಲೇ ಶಾಲಾ ಸಮಯ ಪರಿಷ್ಕರಿಸಲಾಯಿತು. ಸಮೀಕ್ಷೆಯನ್ನು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯೇ ಮಾಡುವ ಪ್ರಯುಕ್ತ ಅರ್ಧ ದಿನ ನೀವು ತರಗತಿ ನಡೆಸಬೇಕು. ಬಳಿಕ ನೀವು ಸಮೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಆದರೆ ಇದು ಪಾಲಿಕೆಯಂತ ಕಚೇರಿಗಳಿಗೆ ಅನ್ವಯವಾಗುವುದಿಲ್ಲ. ಅವರು ಬೆಳಗ್ಗೆಯಿಂದಲೇ ಸಮೀಕ್ಷೆ ಕೈಗೊಳ್ಳುತ್ತಿದ್ದು, ಇದರಿಂದ ದೈನಂದಿನ ಸರ್ಕಾರಿ ಕೆಲಸ ಕಾರ್ಯಗಳಿಗೆ ಅಡ್ಡಿ ಆಗಿದೆ ಎಂದು ಎಎಪಿ ಸೇರಿದಂತೆ ಹಲವುರ ದೂರಿದ್ದಾರೆ.

Leave a Reply

Your email address will not be published. Required fields are marked *