ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ಪೊಲೀಸರು ಮತ್ತೊಂದು ಕ್ರಮ ಕೈಗೊಳ್ಳಲಿದ್ದಾರೆ. ಜನರ ವಿರೋಧ, ಸರ್ಕಾರದ ಸೂಚನೆಯ ಹಿನ್ನಲೆಯಲ್ಲಿ ಸ್ಥಗಿತಗೊಳಿಸಿದ್ದ ವಾಹನ ಟೋಯಿಂಗ್ ಮತ್ತೆ ಆರಂಭಿಸಲಿದ್ದಾರೆ. ಇದಕ್ಕಾಗಿಯೇ ಸಂಚಾರಿ ಪೊಲೀಸರು ನಗರದ 22 ಅಧಿಕ ವಾಹನ ದಟ್ಟಣೆ ಇರುವ ಪ್ರದೇಶ, 75 ಜಂಕ್ಷನ್ಗಳನ್ನು ಗುರುತಿಸಿದ್ದಾರೆ. ಆದರೆ ಇದಕ್ಕೆ ಜನರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ.
ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿರುವ ವಾಹನಗಳ ಟೋಯಿಂಗ್ ಮತ್ತೆ ಪ್ರಾರಂಭವಾಗಲಿದೆ. ಪೊಲೀಸರು ಗುರುತಿಸಿರುವ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ)ಯಲ್ಲಿ ಈ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ. ಸಂಚಾರ ದಟ್ಟಣೆ ನಿಯಂತ್ರಣ, ಸಂಚಾರಿ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲು ಇದು ಅನಿವಾರ್ಯ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಬುಧವಾರ ಈ ಕುರಿತು ಸ್ವತಃ ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿದು, “ನಗರದಲ್ಲಿ ಈ ಹಿಂದೆ ವಾಹನಗಳ ಟೋಯಿಂಗ್ ವ್ಯವಸ್ಥೆ ಇತ್ತು. ಆದರೆ ಹಲವು ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಇದನ್ನು ಮರು ಜಾರಿಗೊಳಿಸಬೇಕು ಎಂಬ ಬೇಡಿಕೆ ಇತ್ತು. ಆದ್ದರಿಂದ ಸರ್ಕಾರ ನಿರ್ದಿಷ್ಟ ಪ್ರದೇಶದಲ್ಲಿ ಇದನ್ನು ಮತ್ತೆ ಜಾರಿಗೊಳಿಸಲು ಒಪ್ಪಿಗೆ ನೀಡಿದೆ” ಎಂದು ತಿಳಿಸಿದ್ದಾರೆ.
ಹಲವು ದೂರುಗಳು: ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿ ವಾಹನಗಳ ಟೋಯಿಂಗ್ ಅನ್ನು 2022ರ ಫೆಬ್ರವರಿಯಲ್ಲಿ ಸ್ಥಗಿತಗೊಳಿಸಿತ್ತು. ವಾಹನ ಸವಾರರು ವಾಹನಗಳ ಟೋಯಿಂಗ್ ಮಾಡುವವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಆದ್ದರಿಂದ ಸರ್ಕಾರ ವಾಹನಗಳ ಟೋಯಿಂಗ್ ನಿಯಮಗಳನ್ನು ಪರಿಷ್ಕರಣೆ ಮಾಡುವ ತನಕ ಅದನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿತ್ತು.
ಈಗ ಪುನಃ ನಗರದ ನಿರ್ದಿಷ್ಟ ಪ್ರದೇಶದಲ್ಲಿ ವಾಹನಗಳ ಟೋಯಿಂಗ್ ಮತ್ತೆ ಆರಂಭವಾಗಲಿದೆ. ನೋ ಪಾರ್ಕಿಂಗ್ ಜಾಗದಲ್ಲಿ ಕಾರು, ಬೈಕು ನಿಲ್ಲಿಸಿದ್ದರೆ ಅದನ್ನು ಟೋಯಿಂಗ್ ವಾಹನ ಸಿಬ್ಬಂದಿ ಎತ್ತಿಕೊಂಡು ಹೋಗಲಿದ್ದಾರೆ. ವಾಹನದ ಮಾಲೀಕರು ದಂಡವನ್ನು ಪಾವತಿ ಮಾಡಿ ತಮ್ಮ ವಾಹನ ಪಡೆಯಬೇಕಿದೆ. ಆದರೆ ವಾಹನಗಳ ಟೋಯಿಂಗ್ ನಿಯಮಗಳನ್ನು ಯಾವ ಮಾದರಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ?. ಅದರ ನಿಯಮಗಳೇನು?, ಟೋಯಿಂಗ್ ಸಂದರ್ಭದಲ್ಲಿ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರೆ ಏನು ಮಾಡಬೇಕು?, ವಾಹನಗಳ ಟೋಯಿಂಗ್ ಶುಲ್ಕಗಳೇನು? ಎಂಬ ಕುರಿತು ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ, ಅಲ್ಲದೇ ಈ ಕುರಿತು ಪ್ರಕಟಣೆಯನ್ನು ಸಹ ಹೊರಡಿಸಿಲ್ಲ.
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ ವಾಹನಗಳ ಟೋಯಿಂಗ್ ಅನ್ನು ಮರು ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಆದರೆ ಎಂದಿನಿಂದ ಜಾರಿ?, ಎಲ್ಲಿ ಜಾರಿ ಮಾಡಬೇಕು? ಎಂಬ ಕುರಿತು ಯಾವುದೇ ತೀರ್ಮಾನವನ್ನು ಇನ್ನು ಸಹ ಕೈಗೊಂಡಿಲ್ಲ.
ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆ, ಜಂಕ್ಷನ್ಗಳಲ್ಲಿ ನೋ ಪಾರ್ಕಿಂಗ್ ಪ್ರದೇಶದಲ್ಲಿ ಇರುವ ವಾಹನಗಳನ್ನು ಟೋಯಿಂಗ್ ಮಾಡಲು ತೀರ್ಮಾನಿಸಲಾಗಿದೆ. ಆದರೆ ಇದು ಯಾವಾಗಿನಿಂದ ಆರಂಭ ಎಂಬುದು ತಿಳಿದಿಲ್ಲ. ಟೋಯಿಂಗ್ ವಾಹನದ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ವಾಹನಗಳ ಟೋಯಿಂಗ್ ಬಗ್ಗೆ ಹಲವು ದೂರುಗಳು ಬಂದ ಹಿನ್ನಲೆಯಲ್ಲಿ ಫೆಬ್ರವರಿ 2022ರಲ್ಲಿ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಟೋಯಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು. ಹೊಸ ಮತ್ತು ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಘೋಷಣೆ ಮಾಡಿದ್ದರು.
ಮತ್ತೆ ಟೋಯಿಂಗ್ ಆರಂಭಿಸಲು ವಿರೋಧವಿಲ್ಲ. ಆದರೆ ಟೋಯಿಂಗ್ ವಾಹನದ ಸಿಬ್ಬಂದಿಗೆ ತರಬೇತಿ ನೀಡಿ, ದಂಡ ಮೊತ್ತವನ್ನು ನಿಗದಿಗೊಳಿಸಿ, ವಾಹನಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಿ, ಕಿರುಕುಳ ನೀಡಬೇಡಿ ಎಂದು ವಾಹನ ಸವಾರರು ಸಲಹೆ ನೀಡಿದ್ದಾರೆ.


