ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪರಿಣಾಮ ಸಂಭವಿಸಿದ ಅಪಘಾತ ಪ್ರಕರಣದಲ್ಲಿ, ಮೂರನೇ ವ್ಯಕ್ತಿಗೆ (ಥರ್ಡ್ ಪಾರ್ಟಿ) ವಿಮಾ ಕಂಪನಿಯಿಂದ ಪರಿಹಾರ ನೀಡುವುದನ್ನು ತಪ್ಪಿಸಲು ಮೋಟಾರು ವಾಹನ ಕಾಯ್ದೆ-1988ಕ್ಕೆ ತಿದ್ದುಪಡಿ ತರಬೇಕೆಂದು ಹೈಕೋರ್ಟ್ ಸೂಚಿಸಿದೆ.
ನಗರದ ಪ್ರತೀಕ್ ಕುಮಾರ್ ತ್ರಿಪಾಠಿ ಎಂಬುವವರು ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಅಪಘಾತಕ್ಕೊಳಗಾದರು. ಈ ಕುರಿತು ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧೀಕರಣವು 2.59 ಲಕ್ಷ ರೂಪಾಯಿ ಪರಿಹಾರ ಪಾವತಿಸಲು ಆದೇಶಿಸಿತ್ತು. ಈ ಆದೇಶದ ವಿರುದ್ಧ ಓರಿಯಂಟಲ್ ವಿಮಾ ಕಂಪನಿ ಹೈಕೋರ್ಟ್ ಮೆಟ್ಟಿಲು ಹತ್ತಿತ್ತು.
ಈ ಮೇಲ್ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಎಂ. ಉಮೇಶ್ ಅಡಿಗ ಅವರ ಪೀಠ, ಚಾಲಕ ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಇದ್ದರು ಎಂಬುದು ನಿಜ. ಹಾಗಾಗಿ ಅಪಘಾತಕ್ಕೆ ವಿಮಾ ಕಂಪನಿಯ ಬದಲು ವಾಹನದ ಮಾಲೀಕನೇ ಹೊಣೆಯಾಗಬೇಕು ಎಂದು ತಿಳಿಸಿತು. ನ್ಯಾಯಾಧೀಕರಣವು ಎದುರಿದ್ದ ವಾಹನದ ಅಜಾಗರೂಕತೆಯನ್ನೇ ಕಾರಣವೆಂದು ತಿಳಿಸಿ ಪರಿಹಾರ ನೀಡಲು ಆದೇಶಿಸಿದ ರೀತಿಯು ನ್ಯಾಯಸಮ್ಮತವಲ್ಲ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹೀಗಾಗಿ, ವಿಮಾ ಕಂಪನಿಗೆ ಪರಿಹಾರ ಪಾವತಿಸುವ ಹೊಣೆ ಇಲ್ಲ. ಪರಿಗಣಿಸಿದ ಮೊತ್ತವನ್ನು ಕಾನೂನು ಪ್ರಕಾರ ವಾಹನದ ಮಾಲೀಕನಿಂದ ವಸೂಲಿ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಸುರಕ್ಷತಾ ಅನುಮೋದನೆ: ಆಗಸ್ಟ್ 15ಕ್ಕೆ ಚಾಲನೆ ಸಾಧ್ಯತೆ


