BBMP
Loading ...

DK Shivakumar

Greater Bengaluru News9 : ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಯ ಕಸರತ್ತಿಗೆ ತೆರೆಬೀಳುವ ಕ್ಷಣ ಬಂದಿದೆ. ಕಾಂಗ್ರೆಸ್​ ಹೈಕಮಾಂಡ್​ ನೂತನ ಸಚಿವರ ಪಟ್ಟಿಯನ್ನು ಫೈನಲ್​ ಮಾಡಿದ್ದು, ಇಂದು ಸಂಜೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪದಗ್ರಹಣ ಸಮಾರಂಭಕ್ಕಾಗಿ ಈಗಾಗಲೇ ರಾಜಭವನದಲ್ಲಿ ಸಿದ್ಧತೆಯು ಆರಂಭವಾಗಿದೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3, 2026 ರಂದು ಅಧಿಕಾರ ಸ್ವೀಕರಿಸಿದರು. ಬರೋಬ್ಬರಿ ಎರಡು ತಿಂಗಳ ಬಳಿಕ ಸಂಪುಟ ವಿಸ್ತರಣೆಯಾಗುತ್ತಿದ್ದು, ಸಿಎಂ ಡಿಕೆಶಿ ನೇತೃತ್ವದ ಸಚಿವ ಸಂಪುಟವನ್ನು ಸೇರುವ ನೂತನ ಸಚಿವರು ಯಾರು ಯಾರು ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ. ಸುಮಾರು ಎರಡು ತಿಂಗಳ ಕಾಲ ಹಲವು ರಾಜಕೀಯ ಲೆಕ್ಕಾಚಾರಗಳು ಹಾಗೂ ಸುದೀರ್ಘ ಕಸರತ್ತುಗಳ ಬಳಿಕ ನೂತನ ಸಚಿವರ ಅಂತಿಮ ಪಟ್ಟಿಯನ್ನು ರೆಡಿ ಮಾಡಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಅವರ ನಡುವಿನ ಮಹತ್ವದ ಸಭೆಯ ಬಳಿಕ ಅಂತಿಮ ಪಟ್ಟಿ ರೆಡಿಮಾಡಲಾಗಿದೆ. ಅಧಿಕೃತ ಪಟ್ಟಿಯಲ್ಲಿ ಖಾಲಿಯಿರುವ 20 ಸಚಿವ ಸ್ಥಾನಗಳನ್ನು ತುಂಬಲು ನಿರ್ಧರಿಸಲಾಗಿದ್ದು, ಈ ಮೂಲಕ ಸಂಪುಟ ಸೇರಲಿರುವ ನೂತನ ಸಚಿವರ ಹೆಸರುಗಳು ಅಂತಿಮಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ನೂತನ ಸಚಿವರ ಪಟ್ಟಿ

  1. ಪಿ.ಎಂ.ನರೇಂದ್ರಸ್ವಾಮಿ
  2. ಶಿವರಾಜ್ ತಂಗಡಗಿ
  3. ರುದ್ರಪ್ಪ ಲಮಾಣಿ
  4. ಕೆ.ಎಸ್.ಬಸವಂತಪ್ಪ
  5. ಬಿ.ನಾಗೇಂದ್ರ
  6. ಟಿ.ರಘುಮೂರ್ತಿ
  7. B. Z. ಜಮೀರ್ ಅಹಮದ್ ಖಾನ್
  8. ರಿಜ್ವಾನ್ ಅರ್ಷದ್
  9. ಸಂತೋಷ್ ಲಾಡ್
  10. ಮಧು ಬಂಗಾರಪ್ಪ
  11. ಪುಟ್ಟರಂಗಶೆಟ್ಟಿ
  12. ಮಂಕಾಳ ವೈದ್ಯ
  13. ಡಾ. ಅಜಯ್ ಸಿಂಗ್
  14. ಎನ್. ಚಲುವರಾಯ ಸ್ವಾಮಿ
  15. ಕೆ.ಎಂ.ಶಿವಲಿಂಗೇಗೌಡ
  16. ಎಚ್.ಸಿ.ಬಾಲಕೃಷ್ಣ
  17. ಶ್ರೀಮತಿ. ಗಾಯತ್ರಿ ಶಾಂತೇಗೌಡ
  18. ಬಸವರಾಜ ರಾಯರೆಡ್ಡಿ
  19. ವಿಜಯಾನಂದ ಕಾಶಪ್ಪನವರ್
  20. ಲಕ್ಷ್ಮಣ ಸವದಿ

ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವು ಇಂದು ಸಂಜೆ 4 ಗಂಟೆಗೆ ರಾಜಭವನದಲ್ಲಿ ನಡೆಯಲಿದ್ದು, ಸಿದ್ಧತೆಗಳು ನಡೆಯುತ್ತಿವೆ. ಪಕ್ಷದ ಹೈಕಮಾಂಡ್ ನಾಯಕರು ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವಾಗ ಜಾತಿ, ಧರ್ಮ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಹಾಗೂ ವಿವಿಧ ಸಾಮಾಜಿಕ ವರ್ಗಗಳ ನಡುವಿನ ಸಮತೋಲನವನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಆರು ಮಂದಿಗೆ ಪುನಃ ಅವಕಾಶ ಕಲ್ಪಿಸಿಕೊಡಲಾಗಿದೆ.

ಇದೇ ವೇಳೆ ಜಿ.ಎಸ್.ಪಾಟೀಲ್ ಅವರಿಗೆ ಸ್ಪೀಕರ್ ಹಾಗೂ ಪೊನ್ನಣ್ಣ ಅವರಿಗೆ ಉಪ ಸಭಾಧ್ಯಕ್ಷ ಸ್ಥಾನ ಒಲಿಯಲಿದೆ. ಇನ್ನೂ ವಿಧಾನ ಪರಿಷತ್​ನ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಹಾಗೂ ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಈ ಬಾರಿ ಮಾಜಿ ಸಚಿವೆ ಲಕ್ವ್ಮೀ ಹೆಬ್ಬಾಳ್ಕರ್ ಹಾಗೂ ಎಂ.ಸಿ .ಸುಧಾಕರ್​ ಅವರಿಗೆ ಭಾರಿ ನಿರಾಸೆ ಉಂಟಾಗಿದೆ. ಇನ್ನೂ ಜೆಡಿಎಸ್​ ಬಿಟ್ಟು ಕಾಂಗ್ರೆಸ್ ಸೇರಿದ ಕೆ.ಎಂ.ಶಿವಲಿಂಗೇಗೌಡರಿಗೆ ಕೊನೆಗೂ ಸಚಿವ ಸ್ಥಾನ ಒಲಿದಿದೆ.

ಕೈಬಿಟ್ಟ ಸಚಿವರ ಪಟ್ಟಿ

  1. ಬೋಸರಾಜ್
  2. ಎಚ್.ಕೆ. ಪಾಟೀಲ್
  3. ದಿನೇಶ್ ಗುಂಡೂರಾವ್
  4. ರಹೀಂಖಾನ್
  5. ಸುಧಾಕರ್
  6. ವೆಂಕಟೇಶ್
  7. ಎಚ್.ಸಿ. ಮಹದೇವಪ್ಪ
  8. ಲಕ್ಷ್ಮೀ ಹೆಬ್ಬಾಳ್ಕರ್
  9. ಶರಣಬಸಪ್ಪ ದರ್ಶನಾಪೂರ
  10. ಶಿವಾನಂದಪಾಟೀಲ್

ಜೂನ್ 3 ರಂದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಚರ್ಚೆಯಲ್ಲಿದ್ದ ಈ ಸಂಪುಟ ವಿಸ್ತರಣೆಯು ಜುಲೈ 31 ರಂದು ನಡೆಯಬೇಕಿತ್ತು, ಆದರೆ ದೆಹಲಿಯಲ್ಲಿ ನಡೆದ ನಾಯಕರ ಸಭೆಯ ಬಳಿಕ ಇದು ಇಂದಿಗೆ ಮುಂದೂಡಲ್ಪಟ್ಟಿತ್ತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಜೊತೆಗೆ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಬಿ.ಕೆ. ಹರಿಪ್ರಸಾದ್ ಅವರು ಈ ಸಂಪುಟ ವಿಸ್ತರಣೆಯ ಸಮಾಲೋಚನಾ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *