ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಬಾಲಕ ಸಾವನ್ನಪ್ಪಿದ ಘಟನೆ ನಗರದ ಆಡುಗೊಡಿಯಲ್ಲಿ ನಡೆದಿದೆ. ಘಟನೆಯಲ್ಲಿ 8 ಜನ ಗಾಯಗೊಂಡಿದ್ದಾರೆ. ಅದರಲ್ಲಿ ಮೂವರ ಸ್ಥಿತಿ ಗಂಭಿರವಾಗಿದೆ ಎಂದು ತಿಳಿದುಬಂದಿದೆ.
ಮೃತ ಬಾಲಕನನ್ನು ಮುಬಾರಕ್ (8) ಎಂದು ಗುರುತಿಸಲಾಗಿದೆ. ತಿಮ್ಮರಾಜು ಎಂಬುವವರ ಮನೆಯಲ್ಲಿ ಸ್ಫೋಟ ಸಂಭವಿಸಿದ್ದು, ಆ ಮನೆ ಸಂಪೂರ್ಣ ಛಿದ್ರವಾಗಿದೆ. ಸ್ಫೋಟದಿಂದ ಅಕ್ಕಪಕ್ಕದ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಗಾಯಾಳುಗಳು ತೀವ್ರ ರಕ್ತಸ್ರಾವ ಹಾಗೂ ಸುಟ್ಟ ಗಾಯಗಳಿಂದ ನರಾಳಾಡುತ್ತಿರುವ ದೃಶ್ಯ ಸಹ ಕಂಡು ಬಂತು. ಗಾಯಾಳಯಗಳನ್ನು ಸಂಜಯ್ ಗಾಂಧಿ, ರಾಜೀವ್ ಗಾಂಧಿ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಿಲಿಂಡರ್ ಲೀಕ್ ಆಗಿ ಕೆಮಿಕಲ್ ರಿಯಾಕ್ಷನ್ ಆಗಿ ಈ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಆಡುಗೊಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಡೀ ರಾತ್ರಿ ಗ್ಯಾಸ್ ಲೀಕ್ ಆಗಿ ಕೆಮಿಕಲ್ ರಿಯಾಕ್ಷನ್ ಆಗಿ ಸ್ಫೋಟ ಸಂಭವಿಸಿರಬಹುದು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಸಿಎಂ ಭೇಟಿ
ಸಿದ್ದರಾಮಯ್ಯ ಅವರು ಸ್ಪೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ. ಕಸ್ತೂರಮ್ಮ ಎಂಬುವರ ಮನೇಲಿ ಈ ಸ್ಫೋಟ ಸಂಭವಿಸಿದೆ. ವರಾಂಡ ರೀತಿಯ ಮನೆ ಆಗಿದ್ದರಿಂದ ಎಲ್ಲಾ ಮನೆಗಳು ಬಿದ್ದಿವೆ. ಹಾನಿಯಾದ ಮನೆ ರಿಪೇರಿಗೆ ಸೂಚನೆ ನೀಡಲಾಗಿದೆ ಎಂದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮುಬಾರಕ್ ಎಂಬ ಹುಡುಗ ಸಾವನ್ನಪ್ಪಿದ್ದಾನೆ. 9 ಜನರಿಗೆ ಗಾಯಗಳಾಗಿವೆ. ಕಸ್ತೂರಮ್ಮಗೆ ಜಾಸ್ತಿ ಸುಟ್ಟ ಗಾಯಗಳಾಗಿದ್ದು, ಆಕೆಯ ಚಿಕಿತ್ಸೆಯನ್ನು ಸರ್ಕಾರ ಭರಿಸುತ್ತದೆ. ಪಕ್ಕದ ಮನೆಯವರ ಕಟ್ಟಡಗಳಿಗೂ ಹಾನಿಯಾಗಿದೆ. ಇದರ ಬಗ್ಗೆಯೂ ಗಮನಹರಿಸಲಾಗುತ್ತದೆ ಎಂದರು. ಮೃತಪಟ್ಟ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು.


