Greater Bengaluru News9 : ಕೆಳಸೇತುವೆ ನಿರ್ಮಾಣಕ್ಕಾಗಿ ರಾಮೋಹಳ್ಳಿ ರೈಲ್ವೆ ಗೇಟ್ ಬಳಿಯ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ ಎಂದು ನೈಋುತ್ಯ ರೈಲ್ವೆಯು ತಿಳಿಸಿದೆ.
ಕೆಂಗೇರಿ ಮತ್ತು ಹೆಜ್ಜಾಲ ರೈಲು ನಿಲ್ದಾಣಗಳ ನಡುವಿನ ರಾಮೋಹಳ್ಳಿ ರೈಲ್ವೆ ಗೇಟ್ ಸಂಖ್ಯೆ 16ರ ಮೂಲಕ ಬೆಂಗಳೂರು-ಮೈಸೂರು ರಸ್ತೆ ಮತ್ತು ದೊಡ್ಡ ಆಲದಮರ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಳಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
ಎಂದಿನಿಂದ ಎಲ್ಲಿಯವರೆಗೂ ರಸ್ತೆ ಬಂದ್
ಈ ಹಿನ್ನೆಲೆಯಲ್ಲಿ ಡಿ.7ರಿಂದ 9 ತಿಂಗಳ ಕಾಲ ರಾಮೋಹಳ್ಳಿ ರೈಲ್ವೆ ಗೇಟ್ ಬಳಿಯ ರಸ್ತೆಯನ್ನು ಮುಚ್ಚಲಾಗುತ್ತಿದೆ. ಈ ಮಾರ್ಗದಲ್ಲಿರುವ ರೈಲ್ವೆ ಕ್ರಾಸಿಂಗ್ನಿಂದಾಗಿ ಆಗಾಗ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು, ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಮೋಹಳ್ಳಿ ಮತ್ತು ದೊಡ್ಡ ಆಲದ ಮರ ಕಡೆಗೆ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಬೇಕು. ಸಂಚಾರ ಪೊಲೀಸರು ಶೀಘ್ರದಲ್ಲೇ ಬದಲಿ ಮಾರ್ಗಗಳ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ.


