BBMP
Loading ...

Greater Bengaluru News9 : ರಾಜಧಾನಿಯ ನಾಗರಿಕರ ಬಹುದಿನಗಳ ಖಾತಾ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಕ್ಷೇತ್ರದ ಅಗ್ರಹಾರದಾಸರಹಳ್ಳಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರಾದ ಎಂ. ಕೃಷ್ಣಪ್ಪ ಅವರು “ಭೂ ಗ್ಯಾರಂಟಿ” ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಸಾರ್ವಜನಿಕರು ತಮ್ಮ ಆಸ್ತಿ ದಾಖಲೆಗಳನ್ನು ಸುಲಭವಾಗಿ ಮತ್ತು ಕಾನೂನುಬದ್ಧವಾಗಿ ಪಡೆದುಕೊಳ್ಳಲು ನೆರವಾಗುವಂತೆ ಈ ಜನಪರ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ನೂತನ “ಭೂ ಗ್ಯಾರಂಟಿ” ಯೋಜನೆಯ ಅಡಿಯಲ್ಲಿ ಪ್ರಮುಖವಾಗಿ ಎರಡು ಆಂದೋಲನಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರ ಆಸ್ತಿಗಳಿಗೆ ಹೆಚ್ಚಿನ ಭದ್ರತೆ ಸಿಗಲಿದೆ. ಮೊದಲನೆಯದಾಗಿ, ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ‘ಬಿ’ ಖಾತಾಗಳನ್ನು ‘ಎ’ ಖಾತಾಗಳನ್ನಾಗಿ ಪರಿವರ್ತಿಸುವ “B -> A ಖಾತಾ ಪರಿವರ್ತನೆ ಅಭಿಯಾನ” ಹಾಗೂ ಎರಡನೆಯದಾಗಿ ಡಿಜಿಟಲ್ ರೂಪದಲ್ಲಿ ಆಸ್ತಿ ದಾಖಲೆಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯ “E-ಖಾತಾ ಅಭಿಯಾನ”ಗಳನ್ನು ಕ್ಷೇತ್ರದಾದ್ಯಂತ ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಯೋಜನೆಯ ಅತ್ಯಂತ ಆಕರ್ಷಕ ಮತ್ತು ಪ್ರಮುಖ ಅಂಶವೆಂದರೆ ಸಾರ್ವಜನಿಕರಿಗೆ ಸಿಗುತ್ತಿರುವ ಭಾರಿ ರಿಯಾಯಿತಿ. ಕೇವಲ 100 ದಿನಗಳ ಈ ವಿಶೇಷ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಸ್ವತ್ತಿನ ಮೌಲ್ಯದ ಶೇಕಡಾ 5% ರಷ್ಟು ಶುಲ್ಕವನ್ನು ಪಾವತಿಸುವ ಬದಲಿಗೆ, ಕೇವಲ ಶೇಕಡಾ 2% ರಷ್ಟು ರಿಯಾಯಿತಿ ಶುಲ್ಕವನ್ನು ಪಾವತಿಸಿ ತಮ್ಮ ‘ಬಿ’ ಖಾತಾವನ್ನು ಸುಲಭವಾಗಿ ‘ಎ’ ಖಾತಾವನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಆಸ್ತಿ ಮಾಲೀಕರಿಗೆ ಆರ್ಥಿಕ ಹೊರೆ ತಗ್ಗಿಸುವ ಈ ಸುವರ್ಣಾವಕಾಶದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *