ಕಾರವಾರ: ರಾಜ್ಯ ಸರ್ಕಾರದ ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಘಟನೆ ಕಾರವಾರದಲ್ಲಿ (Karwar) ನಡೆದಿದೆ.
ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು (Mankal Vaidya) ಹೆಸ್ಕಾಂಗೆಗೆ ಒಂದು ವರ್ಷದಿಂದ ವಿದ್ಯುತ್ ಬಿಲ್ ತುಂಬದೇ ಬಾಕಿದಾರರ ಪಟ್ಟಿ ಸೇರಿದ್ದಾರೆ.
ಸಚಿವರು ಭಟ್ಕಳದ ತಮ್ಮ ಸ್ವಾಮ್ಯದ ಮನೆ, ಶಾಲೆ ಕಟ್ಟಡಗಳು, ಮಗಳ ಹೆಸರಿನಲ್ಲಿ ಇರುವ ಕಟ್ಟಡಗಳು ಸೇರಿದಂತೆ ಬರೋಬ್ಬರಿ 8,17,415 ರೂ.ಗಳಷ್ಟು ವಿದ್ಯುತ್ ಬಿಲ್ ಭರಣ ಮಾಡುವುದನ್ನು ಬಾಕಿ ಇರಿಸಿಕೊಂಡಿದ್ದಾರೆ.
ಭಟ್ಕಳದ ನಾಗೇಶ್ ನಾಯ್ಕ ಎಂಬವರು ಈ ಕುರಿತು ಮಾಹಿತಿ ಹಕ್ಕಿನಲ್ಲಿ ಹೆಸ್ಕಾಂ ನಿಂದ ಮಾಹಿತಿ ಪಡೆದಿದ್ದು, ಕಳೆದ ನವಂಬರ್ನಿಂದ ಒಂದು ವರ್ಷದ ಮಾಹಿತಿ ಕೇಳಿದ್ದರು. ಭಟ್ಕಳದ ಹೆಸ್ಕಾಂ ಇಲಾಖೆ ಈ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿದಾರರಿಗೆ ಮಾಹಿತಿ ನೀಡಿದ್ದು, ಇದರಲ್ಲಿ ಒಂದು ವರ್ಷದಲ್ಲಿ 8,17,415 ರೂ.ಗಳಷ್ಟು ಹೆಸ್ಕಾಂಗೆ ವಿದ್ಯುತ್ ಬಿಲ್ ಬಾಕಿ ಇದೆ. ಅದರಲ್ಲಿ ಸಚಿವ ಮಂಕಾಳು ವೈದ್ಯ ಹಾಗೂ ಅವರ ಪುತ್ರಿ ಬೀನಾ ಮಂಕಾಳು ವೈದ್ಯರ ಸ್ವಾಮ್ಯದ ಕಟ್ಟಡ, ಕಚೇರಿ, ಮನೆಗಳು ಸೇರಿವೆ.


