BBMP
Loading ...

BESCOM

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಎಂಜಿನಿಯರ್‌ ವೈ.ಎಚ್‌.ಪಿ. ಯತೀಶ್‌ ವಿರುದ್ಧದ ಲಂಚದ ಆರೋಪ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. ಅಲ್ಲದೆ, ಲಂಚದ ಬೇಡಿಕೆ ಮತ್ತು ಸ್ವೀಕಾರ ಸಾಬೀತುಪಡಿಸಲು, ದೂರುದಾರರಿಗೆ ಆಗಬೇಕಾಗಿರುವ ಯಾವ ಕೆಲಸವೂ ತಮ್ಮ ಬಳಿ ಬಾಕಿ ಇಲ್ಲ ಎಂಬುದು ನಿರ್ಣಾಯಕವಲ್ಲ ಎಂದು ನ್ಯಾಯಾಲಯ ಹೇಳಿದೆ.

ಎಂಜಿನಿಯರ್‌ ವೈ.ಎಚ್‌.ಪಿ. ಯತೀಶ್‌ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಹಾಗಾಗಿ, ಇದೀಗ ಅವರು ತನಿಖೆ ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ”ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬೀಳುವ ಮುನ್ನದ ಬೆಳವಣಿಗೆಗಳು ಮತ್ತು 3.8 ಲಕ್ಷ ರೂ. ನಗದು ವಶಪಡಿಸಿಕೊಂಡಿರುವುದು ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬುದನ್ನು ಮೇಲ್ನೋಟಕ್ಕೆ ದೃಢಪಡಿಸುತ್ತದೆ,” ಎಂದು ಹೇಳಿದೆ.

ಅಲ್ಲದೆ, ”ಒಂದು ವೇಳೆ ಅರ್ಜಿದಾರರು ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂದಾದರೆ, ಏಕೆ ದೂರುದಾರರು ಹಣ ತೆಗೆದುಕೊಂಡು ವೆಂಕಟೇಶ್ವರ ಸ್ವೀಟ್‌ ಮೀಟ್‌ ಸ್ಟಾಲ್‌ ಬಳಿ ಬರುತ್ತಿದ್ದರು? ಮೇಲ್ನೋಟಕ್ಕೆ ಲಂಚಕ್ಕೆ ಬೇಡಿಕೆಯೊಡ್ಡಿರುವುದು ಸ್ಪಷ್ಟವಾಗುತ್ತದೆ ಮತ್ತು ಅರ್ಜಿದಾರರ ಕಾರಿನಲ್ಲಿ ಹಣ ಸಿಕ್ಕಿರುವುದು ಸ್ಪಷ್ಟವಾಗಿದೆ. ದೂರುದಾರರ ಬಳಿ ಹಣ ಇದ್ದುದು ಮತ್ತು ಅರ್ಜಿದಾರರು ಅದನ್ನು ಪಡೆದುಕೊಳ್ಳುತ್ತಿರುವಾಗ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ,” ಎಂದು ನ್ಯಾಯಾಲಯ ತಿಳಿಸಿದೆ.

”ಫಿನಾಪ್ತಲೀನ್‌ ಪರೀಕ್ಷೆಯಲ್ಲಿ ಅರ್ಜಿದಾರರ ಕೈಗಳು ಪಿಂಕ್‌ ಬಣ್ಣಕ್ಕೆ ಬದಲಾಗಿವೆ. ಸ್ವ್ಯಾಬ್‌ ಪರೀಕ್ಷೆಯನ್ನೂ ಮಾಡಲಾಗಿದೆ. ಎಲ್ಲಾ ರೀತಿಯಲ್ಲೂ ಮೇಲ್ನೋಟಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಸ್ವೀಕರಿಸುವುದು ಕಂಡು ಬರುತ್ತದೆ. ಹಾಗಾಗಿ, ಅರ್ಜಿದಾರರ ವಿರುದ್ಧ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲಾಗದು” ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಅರ್ಜಿ ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ
ನಗರದ ಅನ್ನಪೂರ್ಣೇಶ್ವರಿ ನಗರದಲ್ಲಿ ವೆಂಕಟೇಶ್‌ ಮತ್ತು ಅಜಯ್‌ ಕುಮಾರ್‌ ಎಂಬುವವರಿಗೆ ಸೇರಿದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕೋರಿ ಶ್ರೀ ಚಕ್ರ ಎಲೆಕ್ಟ್ರಿಕಲ್ಸ್‌ನ ವರ್ಕ್ ಇನ್ಸ್‌ಪೆಕ್ಟರ್‌ ಎನ್‌. ಚಂದನ್‌ ಕುಮಾರ್‌ 2024ರ ಫೆ.9ರಂದು ಅರ್ಜಿ ಸಲ್ಲಿಸಿದ್ದರು. ಆನಂತರ 2024ರ ಫೆ.22ರಂದು ಎಂಜಿನಿಯರ್‌ ಯತೀಶ್‌, ಚಂದನ್‌ ಕುಮಾರ್‌ ಅವರನ್ನು ಸಂಪರ್ಕಿಸಿ, ಸತೀಶ್‌ ಎಂಬುವವರ ಜತೆ ಮಾತನಾಡುವಂತೆ ಸೂಚನೆ ನೀಡಿದ್ದರು. ಫೆ.26ರಂದು ಸತೀಶ್‌ 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು.

ಹೋಟೆಲ್‌ನಲ್ಲಿ ಮಾತುಕತೆ ನಂತರ ಲಂಚದ ಮೊತ್ತವನ್ನು 3.8 ಲಕ್ಷಕ್ಕೆ ಇಳಿಸಲಾಯಿತು. ಆ ಕುರಿತು ಸಂಭಾಷಣೆ ವಿವರಗಳು ದೂರುದಾರರಾದ ಚಂದನ್‌ ಕುಮಾರ್‌ ಅವರ ದೂರವಾಣಿಯಲ್ಲಿ ರೆಕಾರ್ಡ್‌ ಆಗಿದ್ದವು. 2024ರ ಏ.8ರಂದು ಕೆಪಿಟಿಸಿಎಲ್‌ ಕಚೇರಿಯ ಹಿಂಭಾಗದ ಬ್ರಿಗೇಡ್‌ ಮೈದಾನ ಬಳಿ ಹಣ ನೀಡುವುದಾಗಿ ನಿಗದಿಯಾಗಿತ್ತು. ವೆಂಕಟೇಶ್ವರ ಸ್ವೀಟ್‌ ಮೀಟ್‌ ಸ್ಟಾಲ್‌ ಬಳಿ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯ ವಾಹನದಿಂದ ಹಣ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣದ ರದ್ದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಎಂಜಿನಿಯರ್‌, ತಮ್ಮ ವಿರುದ್ಧ ಲಂಚಕ್ಕೆ ಬೇಡಿಕೆ ಮತ್ತು ಸ್ವೀಕಾರಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರವಿಲ್ಲ. ದೂರುದಾರರ ಯಾವ ಕೆಲಸವೂ ತಮ್ಮ ಬಳಿ ಬಾಕಿ ಇರಲಿಲ್ಲ ಎಂದು ವಾದಿಸಿದ್ದರು. ಆದರೆ, ನ್ಯಾಯಾಲಯ ಅವರ ಎಲ್ಲಾ ವಾದ ತಿರಸ್ಕರಿಸಿದೆ.

ಕುಂಬಳಗೋಡು, ಕಲಾಸಿಪಾಳ್ಯ ಸೇರಿ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಮೆಸೇಜ್: ಹೈ ಅಲರ್ಟ್

Leave a Reply

Your email address will not be published. Required fields are marked *