ಬೆಂಗಳೂರು: ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆಯ ಗಾಯ ಇನ್ನೂ ಹಸಿಯಾಗಿರುವಗಲೇ ಮತ್ತೊಂದು ಬರೆ ಬಿದ್ದಿದೆ. ಪ್ರತಿ ಯೂನಿಟ್ಗೆ 36 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಇಂದು (ಮಾರ್ಚ್ 20) ಆದೇಶ ಹೊರಡಿಸಿದೆ.
ಹೊಸ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಈಗಾಗಲೇ ಬಸ್ ಟಿಕೆಟ್ ದರ, ಮೆಟ್ರೋ ಪ್ರಯಾಣ ದರ ಹಾಗೂ ದಿನಸಿ ಉತ್ಪನ್ನಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಇದೀಗ ವಿದ್ಯುತ್ ದರ ಬಿಸಿ ತುಪ್ಪವಾಗಲಿದೆ.
ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್ಸಿ ಹೊಸ ದರ ಜಾರಿಗೆ ಬರಲಿದೆ.
ಕೆಪಿಟಿಸಿಎಲ್ ಮತ್ತು ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಸಿಬ್ಬಂದಿಯ ಪಿಂಚಣಿ ಹಾಗೂ ಗ್ರಾಚ್ಯುಟಿಯ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಬೇಕಿತ್ತು. 2021-22 ರಿಂದ 2024-25ನೇ ಆರ್ಥಿಕ ವರ್ಷಗಳ ಪಿಂಚಣಿ ಹಾಗೂ ಗ್ರಾಚ್ಯುಟಿ ಬಾಕಿ ಹಾಗೂ 2025-26ನೇ ಹಣಕಾಸು ವರ್ಷದಿಂದ ಆಗುವ ಖರ್ಚು ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಕೋರಿ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಈ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಕೆಇಆರ್ಸಿ ಅಸ್ತು ಎಂದಿದೆ.
ಸರ್ಕಾರದ ಪಾಲನ್ನು ಜನರಿಂದಲೇ ವಸೂಲಿ ಮಾಡಲು ಕೆಇಆರ್ಸಿ ಅವಕಾಶವನ್ನು ನೀಡಿದ್ದು, ಇಂದು ಆದೇಶವನ್ನು ಹೊರಡಿಸಿದೆ. ಈ ಆದೇಶದಂತೆ 2025-26ರಲ್ಲಿ 36 ಪೈಸೆ ಹೆಚ್ಚಳವಾಗಿದೆ. ಇದಿಷ್ಟೇ ಅಲ್ಲದೆ, 2026-27ರಲ್ಲಿ ಪ್ರತಿ ಯೂನಿಟ್ಗೆ ತಲಾ 35 ಪೈಸೆ ಮತ್ತು 2027-28ರಲ್ಲಿ ತಲಾ 34 ಪೈಸೆಯನ್ನು ಹೆಚ್ಚಿಸಲು ಕೆಇಆರ್ಸಿ ಸಮ್ಮತಿ ನೀಡಿದೆ.
ಕರ್ನಾಟಕ ವಿದ್ಯುತ್ ಸುಧಾರಣಾ ನಿಯಮಗಳಿಗೆ 2022ರಲ್ಲಿ ತಿದ್ದುಪಡಿ ತರಲಾಗಿತ್ತು. ಆ ತಿದ್ದುಪಡಿಯಂತೆ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ಗ್ರಾಹಕರಿಗೆ ವರ್ಗಾಯಿಸಲು ಇಚ್ಛಿಸಿದರೆ ಕೆಇಆರ್ಸಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಲಾಗಿದೆ. ಹೀಗಾಗಿ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಅರ್ಜಿ ಸಲ್ಲಿಸಿದ್ದವು. ಇದೀಗ ಕೆಇಆರ್ಸಿ ಒಪ್ಪಿಗೆ ಸೂಚಿಸಿ, ಆದೇಶ ಹೊರಡಿಸಿದೆ. ಪಿಂಚಣಿ ಮತ್ತು ಗ್ರಾಚ್ಯುಟಿಯ ಸರ್ಕಾರದ ಪಾಲನ್ನು ಭರಿಸಲು ಮುಂದಿನ 3 ಹಣಕಾಸು ವರ್ಷಗಳಲ್ಲಿ ಗ್ರಾಹಕರಿಂದ ಬರೋಬ್ಬರಿ 8,519.55 ಕೋಟಿ ರೂಪಾಯಿ ಮೊತ್ತವನ್ನು ವಸೂಲಿ ಮಾಡಲು ಕೆಇಆರ್ಸಿ ಒಪ್ಪಿಗೆ ನೀಡಿದೆ.
ಬೆಸ್ಕಾಂ ಕರ್ಮಕಾಂಡ ಬಯಲು: ಸ್ಮಾರ್ಟ್ ಮೀಟರ್ ಹೆಸರಲ್ಲಿ ಹಣದ ಸುಲಿಗೆ, ಫಿಕ್ಸ್ ರೇಟ್ ಬೇರೆ ಮಾರಾಟದ ರೇಟೇ ಬೇರೆ


