BBMP
Loading ...

BESCOM

ಬೆಂಗಳೂರು: ರಾಜಧಾನಿಯ ಬೆಸ್ಕಾಂ ಹಾಗೂ ಜಲಮಂಡಳಿ ಕಚೇರಿಗಳ ಅಧಿಕಾರಿಗಳ ಬಳಿ ಲಕ್ಷಾಂತರ ರೂ.ನಗದು, ಒಂದು ದಿನದ ಮುಂಚೆಯೇ ಹಾಜರಾತಿ ಪುಸ್ತಕಕ್ಕೆ ಸಹಿ, ಖಾಸಗಿ ಏಜೆಂಟರ ಬಳಿ ಸರಕಾರದ ಕಡತಗಳ ನಿರ್ವಹಣೆ ಹಾಗೂ ಎಇಇ ಗೂಗಲ್‌ ಮುಖಾಂತರ 12 ಲಕ್ಷ ರೂ.ವರ್ಗಾವಣೆ ಸೇರಿದಂತೆ ಹಲವು ಅಕ್ರಮಗಳು ಗುರುವಾರ ಬಟಾಬಯಲಾಗಿವೆ.

ಲೋಕಾಯುಕ್ತ ನ್ಯಾಯಾಂಗ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಜಂಟಿಯಾಗಿ ಜಲಮಂಡಳಿ ಹಾಗೂ ಬೆಸ್ಕಾಂನ 45 ಕಚೇರಿಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಕ್ರಮಗಳ ಸರಮಾಲೆಯೇ ತೆರೆದುಕೊಂಡಿದೆ. ಅಧಿಕಾರಿಗಳ ಕರ್ತವ್ಯಲೋಪ, ಜೇಬಿನಲ್ಲಿ ಇಟ್ಟುಕೊಂಡಿದ್ದ ಕಂತೆ ಕಂತೆ ಹಣ, ಖಾಸಗಿ ವ್ಯಕ್ತಿಗಳ ದರ್ಬಾರ್‌ ಕಂಡು ಲೋಕಾ ಅಧಿಕಾರಿಗಳೇ ದಂಗಾಗಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌ ನೇತೃತ್ವದ ತಂಡ ಯಲಹಂಕ ಸ್ಯಾಟಲೈಟ್‌ನ ಬೆಸ್ಕಾಂ ಕಚೇರಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು, ಈ ವ್ಯಾಪ್ತಿಯಲ್ಲಿ ಬರೋಬ್ಬರಿ 1.18 ಕೋಟಿ ರೂ. ಬಿಲ್‌ ಪಾವತಿ ಕಟ್ಟಿಸಿಕೊಳ್ಳದೇ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳ ನಿರ್ಲಕ್ಷ್ಯ ಬಯಲಿಗೆ ಬಂದಿದೆ. ಜತೆಗೆ, ಕಚೇರಿಯ ನೌಕರರು ನಗದು ವಹಿವಾಟು ಘೋಷಿಸಿರಲಿಲ್ಲ. ಹಾಜರಾತಿಯನ್ನೂ ಸರಿಯಾಗಿ ಪಾಲಿಸದೆ ಅರ್ಧಕ್ಕೂ ಹೆಚ್ಚು ಬೆಸ್ಕಾಂ ನೌಕರರು ಗೈರಾಗಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ ನೇತೃತ್ವದ ತಂಡ ಎಂಜಿ ರಸ್ತೆ, ಇಂದಿರಾನಗರದಲ್ಲಿರುವ ಬೆಸ್ಕಾಂ ಹಾಗೂ ಜಲಮಂಡಳಿ ಕಚೇರಿಗಳಲ್ಲಿ ಶೋಧ ನಡೆಸಿದ್ದು, ಈ ವೇಳೆ ಜಲಮಂಡಳಿ ಎಇಇ ಜಿಯಾಉಲ್ಲಾ ಷರೀಫ್‌ ತಮ್ಮ ಗೂಗಲ್‌ ಪೇ ಖಾತೆಯಿಂದ ಒಂದೇ ವ್ಯಕ್ತಿಗೆ 12 ಲಕ್ಷಕ್ಕೂ ಅಧಿಕ ಮೊತ್ತ ವರ್ಗಾಯಿಸಿರುವುದು ಕಂಡು ಬಂದಿದೆ. ಯಾವ ಉದ್ದೇಶಕ್ಕೆ ಕಳಿಸಲಾಗಿದೆ ಎಂಬುದನ್ನೇ ಜಿಯಾ ಉಲ್ಲಾ ಸ್ಪಷ್ಟೀಕರಣ ನೀಡುವಲ್ಲಿ ವಿಫಲರಾದರು.

ಅಷ್ಟೇ ಅಲ್ಲದೆ, ಚಿದಾನಂದ ಎಂಬುವವರ ಬಳಿ ಅನಧಿಕೃತವಾಗಿ ಇಟ್ಟುಕೊಂಡಿದ್ದ 1.86 ಲಕ್ಷ ರೂ. ನಗದು ಪತ್ತೆಯಾಗಿದೆ. ಅದೇ ರೀತಿ ಶ್ರೀನಿವಾಸ್‌ ಬಳಿ 15 ಸಾವಿರ, ವಿಶ್ವನಾಥ್‌ ಎಂಬ ಅಧಿಕಾರಿ ಬಳಿ 32 ಸಾವಿರ ರೂ. ಹೆಚ್ಚುವರಿಯಾಗಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಜಲಮಂಡಳಿ ಹಾಗೂ ಬೆಸ್ಕಾಂ ಹಲವು ಅಧಿಕಾರಿಗಳ ಪರವಾಗಿ ಕೆಲವು ಎಂಟರ್‌ಪ್ರೈಸಸ್‌ ಕಂಪನಿಗಳಿಗೆ ಡಿಜಿಟಲ್‌ ಪೇಮೆಂಟ್‌ ಮೂಲಕ ಹಣ ಪಾವತಿಯಾಗಿದೆ. ಯಾವ ಉದ್ದೇಶಕ್ಕೆ ಈ ಹಣ ವರ್ಗಾವಣೆಯಾಗಿದೆ ಎಂಬುದರ ಗುಟ್ಟು ಗೊತ್ತಾಗಬೇಕಿದೆ. ಹೀಗಾಗಿ, ಜಿಯಾ ಉಲ್ಲಾ ಷರೀಫ್‌ ಸೇರಿ ಹಲವು ಅಧಿಕಾರಿಗಳ ಬ್ಯಾಂಕ್‌ ಖಾತೆಗಳ ಡಿಜಿಟಲ್‌ ಪೇಮೆಂಟ್‌ ವಿವರ ಪಡೆಯುವಂತೆ ಸೂಚಿಸಲಾಗಿದೆ ಎಂದು ನ್ಯಾ.ಬೀರಪ್ಪ ತಿಳಿಸಿದ್ದಾರೆ.

ಮುಂಚಿತ ಸಹಿ
ಶೋಧ ನಡೆಸಿದ ಅಷ್ಟೂ ಕಚೇರಿಗಳಲ್ಲಿಯೂ ನೌಕರರ ಹಾಜರಾತಿ ಪುಸ್ತಕವನ್ನೇ ಸರಿಯಾಗಿ ನಿರ್ವಹಿಸಿಲ್ಲ. ಅರ್ಧಕ್ಕರ್ಧ ನೌಕರರು ಕೆಲಸಕ್ಕೇ ಬಂದಿರಲಿಲ್ಲ. ವಿಶ್ವನಾಥ್‌ ಎಂಬ ಅಧಿಕಾರಿ ಶುಕ್ರವಾರದ್ದೂ ಗುರುವಾರವೇ ಸಹಿ ಹಾಕಿದ್ದಾರೆ. ಮುಂಚಿತವಾಗಿಯೇ ಸಹಿ ಹಾಕಿ ಲೋಪವೆsಗುವ ಉದ್ದೇಶ ನೋಡಿದರೆ ನಮಗೆ ಶಾಕ್‌ ಆಗುತ್ತಿದೆ ಎಂದು ನ್ಯಾ.ಬೀರಪ್ಪ ಆಶ್ಚರ್ಯ ವ್ಯಕ್ತಡಿಸಿದರು.

ಕ್ರಿಮಿನಲ್‌ ಕೇಸ್‌
ತಡರಾತ್ರಿ ತನಕವೂ ಶೋಧ ಕಾರ್ಯಾಚರಣೆ ನಡೆಸಿ ಕಡತಗಳನ್ನು ಜಪ್ತಿ ಮಾಡಲಾಗಿದೆ. ಸರಕಾರದ ಕಡತಗಳನ್ನು ಖಾಸಗಿ ವ್ಯಕ್ತಿಗಳು ಇಟ್ಟುಕೊಳ್ಳುವುದು ಕಾನೂನು ಬಾಹಿರ. ಈ ನಿಟ್ಟಿನಲ್ಲಿ ಅಂತಹ ಕಡತ ಕೊಟ್ಟ ಅಧಿಕಾರಿಗಳ ವಿರುದ್ಧ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಬೀರಪ್ಪ ಹೇಳಿದರು. ಉಪಲೋಕಾಯುಕ್ತ ಕೆ.ಎನ್‌. ಫಣೀಂದ್ರ ನೇತೃತ್ವದ ತಂಡ ಮಲ್ಲೇಶ್ವರ ಹಾಗೂ ಆನಂದರಾವ್‌ ವೃತ್ತದಲ್ಲಿರುವ ಕಚೇರಿಗಳಿಗೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದೆ. ದಾಳಿ ಸಂಬಂಧ ಎಲ್ಲ ಅಧಿಕಾರಿಗಳಿಂದ ವರದಿ ತರಿಸಿಕೊಂಡ ಬಳಿಕ ವಿಚಾರಣೆ ಸಲುವಾಗಿ ಇಲಾಖೆಯ ಕಾರ್ಯದರ್ಶಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ ನೋಟಿಸ್‌ ನೀಡಲಾಗುವುದು ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಾರ್ವಜನಿಕರಿಂದ ಸಾಕಷ್ಟು ದೂರು ಬಂದ ಹಿನ್ನೆಲೆ ಬೆಸ್ಕಾಂ, ಜಲಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Leave a Reply

Your email address will not be published. Required fields are marked *