ಕೋಲಾರ: ರಾಜ್ಯ ಒಕ್ಕಲಿಗರ ಸಂಘ ಯಾವ ದಿಕ್ಕಿನತ್ತ ಹೋಗುತ್ತಿದೆ? ಅಧಿಕಾರಕ್ಕಾಗಿ ಪದೇ ಪದೇ ಪದಾಧಿಕಾರಿಗಳ ಬದಲಾವಣೆ, ಆಡಳಿತಾಧಿಕಾರಿಗಳ ನೇಮಕ ಸೇರಿದಂತೆ ನಡೆಯುತ್ತಿರುವ ವಿದ್ಯಮಾನಗಳು ನಗೆಪಾಟಲಿಗೆ ಈಡಾಗುತ್ತಿದೆ ಎಂದು ತುಮಕೂರಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕೋಲಾರ ಜಿಲ್ಲಾ- ರಾಜ್ಯ ಒಕ್ಕಲಿಗರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಬಂದಿದ್ದ ಪಲ್ಲಕ್ಕಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಒಕ್ಕಲಿಗರಿಗೆ ತನ್ನದೇ ಆದ ಸ್ಥಾನಮಾನವಿದೆ. ಆದರೆ ಒಕ್ಕಲಿಗರ ಸಂಘದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ, ಪ್ರತಿಷ್ಠೆಗಾಗಿ ಸಂಘವನ್ನು ಬೀದಿಗೆ ತಂದು ನಿಲ್ಲಿಸುವುದಾದರೆ ಸಮುದಾಯಕ್ಕೆ ಏನು ಸಂದೇಶ ಕೊಡುತ್ತೀರಿ? ಇತರೆ ಸಮುದಾಯದ ಸಂಘಗಳಿಗೆ ರಾಜ್ಯ ಒಕ್ಕಲಿಗರ ಸಂಘ ಮಾದರಿಯಾಗಬೇಕಿತ್ತು. ಆದರೆ ಇಲ್ಲಿ ಅಂತಹ ವಾತಾವರಣ ಕಂಡು ಬರುತ್ತಿಲ್ಲ ಎಂದು ನಿರ್ದೇಶಕರ ನಡೆಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಒಕ್ಕಲಿಗರ ಸಂಘದಲ್ಲಿ ಮೆಡಿಕಲ್-ಎಂಜಿನಿಯರಿಂಗ್ ಸೀಟು ಹಂಚಿಕೆ ದೊಡ್ಡ ಸಾಧನೆಯಾಗಬಾರದು. ಹಣ ಮಾಡುವುದಕ್ಕಾಗಿ ವಿದ್ಯಾ ಸಂಸ್ಥೆಗಳನ್ನು ಬೆಂಗಳೂರಿಗೆ ಸೀಮಿತ ಮಾಡಿಕೊಳ್ಳಬಾರದು. ವಿದ್ಯಾಸಂಸ್ಥೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಬೇಕು. ಬಲಿಷ್ಠ ಒಕ್ಕಲಿಗರಿಗೆ ಸೀಟುಗಳು ಸಿಗುವುದಾದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಒಕ್ಕಲಿಗರ ಸಂಘ ಬಲಿಷ್ಠವಾಗಿದೆ. ಅಂತಹದ್ದರಲ್ಲಿ ನಿಮ್ಮಿಂದ ಸಮುದಾಯ ಏನು ನಿರೀಕ್ಷೆ ಮಾಡಬೇಕು? ಬಡತನ ರೇಖೆಗಿಂತ ಕಡಿಮೆ ಇರುವ ಸಮುದಾಯಕ್ಕೆ ಧ್ವನಿಯಾಗಿ ನಿಲ್ಲಬೇಕು. ಉಳ್ಳವರಿಗೆ ಸೀಟು ಹಂಚಿಕೆ ಮಾಡುವುದರ ಜತೆಗೆ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕೆಂದು ಕಿವಿಮಾತು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘವನ್ನು ರಾಜಕಾರಣಿಗಳು ಬೆದರಿಸುವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗ-ಜಗ್ಗಾಟದಿಂದ ಸರಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡುತ್ತಿದೆ. ಇನ್ನು ಮುಂದೆ ಇಂತಹ ವಾತಾವರಣ ನಿರ್ಮಾಣವಾಗದಂತೆ ಎಚ್ಚರ ವಹಿಸಿ ಸಮುದಾಯಕ್ಕೆ ಸೇವೆ ಮಾಡುವ ಕೆಲಸ ಮಾಡಬೇಕೆಂದು ಹೇಳಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಶ್ರಮ ಜೀವಿಗಳು, ಇಲ್ಲಿ ಶಾಶ್ವತ ನೀರಾವರಿಗಾಗಿ ಅನೇಕ ಸಂಘ-ಸಂಸ್ಥೆಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಆಳುವ ಸರಕಾರಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಯಾವುದೇ ಒಂದು ಯೋಜನೆ ಆರಂಭವಾಗುವ ಮೊದಲು ತೋರಿಸುವ ಕಾಳಜಿ ಕೊನೆಯವರೆಗೂ ತೋರಿಸುವುದಿಲ್ಲ. ಇದರಿಂದ ಅನೇಕ ನೀರಾವರಿ ಯೋಜನೆಗಳು ಕಾರ್ಯಗತವಾಗುತ್ತಿಲ್ಲ ಎಂದು ಹೇಳಿದರು.
ಇವತ್ತಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೊಟ್ಟೆಪಾಡಿಗಾಗಿ ವಿದ್ಯಾಭ್ಯಾಸ ಮಾಡುವ ಮಟ್ಟಕ್ಕೆ ಬಂದಿದ್ದಾರೆ. ಕೇವಲ ಹಣ ಗಳಿಸುವ ಉದ್ದೇಶದಿಂದ ಶಿಕ್ಷಣ ಪಡೆದರೆ ಸಾಲದು. ದೇಶ-ರಾಜ್ಯ, ಸಮುದಾಯಕ್ಕೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ತಾವುಗಳು ಜೀವನದಲ್ಲಿ ಬೆಳೆದ ಬಂದ ದಾರಿಯನ್ನು ಮರೆಯದೆ ಆಗಾಗ ತಿರುಗಿ ನೋಡಬೇಕೆಂದ ಅವರು, ಕೋಲಾರ ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗ ಸಂಘದ ಕಟ್ಟಡದ ಕಾಮಗಾರಿ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೋನಪ್ಪರೆಡ್ಡಿ, ಯಳುವಹಳ್ಳಿ ರಮೇಶ್ ಡಾ.ರಮೇಶ್, ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ. ಶಂಕರಪ್ಪ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ವಕೀಲ ಬಿಸಪ್ಪಗೌಡ, ಗುತ್ತಿಗೆದಾರ ವಿ.ಕೃಷ್ಣಾರೆಡ್ಡಿ, ಸಿಎಂಆರ್ ಶ್ರೀನಾಥ್, ಲಕ್ಷ್ಮೀನಾರಾಯಣ್, ಪತ್ರಕರ್ತ ವಿ.ಮುನಿರಾಜು, ಆಲಂಗೂರು ಶಿವಣ್ಣ, ಬಣಕನಹಳ್ಳಿ ನಟರಾಜ್, ಬಾಬುಮೌನಿ, ಮಾಲೂರು ಪ್ರಭಾಕರ್, ವಕೀಲರ ಸಂಘದ ಅಧ್ಯಕ್ಷ ಮುನೇಗೌಡ ಮತ್ತಿತರಿದ್ದರು.
ಇದು ನಿಮ್ಮ ವಾಹಿನಿ ಕಲಾವೇದಿಕೆಯಿಂದ ಅದ್ದೂರಿಯಾಗಿ ಜರುಗಿದ 11ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ


