ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಾಕೋ ಎಲ್ಲವೂ ಸರಿ ಇಲ್ಲವೆಂಬಂತೆ ಕಾಣುತ್ತಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ. ಬಿಜಯೇಂದ್ರರ ವಿರುದ್ಧ ಅಸಮಾಧಾನಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದೀಗ ಈ ಸಾಲಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ. ಸುಧಾಕರ್ ಸೇರ್ಪಡೆಯಾಗಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಡಾ.ಕೆ. ಸುಧಾಕರ್, ವಿಜಯೇಂದ್ರ ಅಹಂಕಾರ, ದರ್ಪ ಸಹಿಸಿ ಸಾಕಾಗಿದೆ. ಇನ್ನೇನಿದ್ದರೂ ಯುದ್ಧ ಮಾಡುವುದೊಂದೇ ಬಾಕಿ. ಪಕ್ಷದ ರಾಜ್ಯ ಉಸ್ತುವಾರಿ, ಕೇಂದ್ರ ನಾಯಕರ ಗಮನಕ್ಕೆ ತಂದಿರುವೆ. ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರಿಗೆ ಮಣೆ. ರಿಯಲ್ ಎಸ್ಟೇಟ್ ನಿಂದ ದುಡ್ಡು ತಂದು ಕೊಡುವವರಿಗೆ ಅವಕಾಶ ನೀಡಲಾಗುತ್ತಿದೆ.
ವಿಜಯೇಂದ್ರ ಅವರನ್ನು ನೆಚ್ಚಿಕೊಂಡರೆ ಪಕ್ಷ ಸಮಾಧಿ ಮಾಡಲು ಹೊರಟಿದ್ದಾರೆ. ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯತ್ನಾಳ್, ರಮೇಶ ಜಾರಕಿಹೊಳಿ, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ ಅವರನ್ನು ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಸೇರಿ 13 ಜಿಲ್ಲೆಗಳ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚಿಸಿಲ್ಲ ಎಂದು ಕಿಡಿಕಾರಿದ್ದಾರೆ.
ವಿಜಯೇಂದ್ರ ಧೋರಣೆ, ಅಹಂಕಾರಕ್ಕೆ ಧಿಕ್ಕಾರ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ನಾಯಕರಿಗೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ. ವಿಜಯೇಂದ್ರರ ಧೋರಣೆ ಬದಲಿಸಿ ಇಲ್ಲವೇ ರಾಜ್ಯಾಧ್ಯಕ್ಷರನ್ನು ಬದಲಾಯಿಸಿರಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಗಮನಕ್ಕೆ ತಂದಿರುವೆ. ಕೊನೆಯ ಹಂತವಾಗಿ ಮಾಧ್ಯಮದ ಮುಂದೆ ಬಂದಿರುವೆ. ಪಕ್ಷದ ಕೇಂದ್ರ ನಾಯಕರು ನನ್ನನ್ನು ಕ್ಷಮಿಸಲಿ ಎಂದು ಹೇಳಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಬೇಕೆಂಬ ದುರುದ್ದೇಶದಿಂದ ಅಡ್ಡದಾರಿ ಹಿಡಿದು ತಮಗೆ ಬೇಕಾದವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ರಾಷ್ಟ್ರೀಯ ನಾಯಕರು ಈಗಲಾದರೂ ಮಧ್ಯೆ ಪ್ರವೇಶಿಸಿ ಸರಿ ಮಾಡದಿದ್ದರೆ ಪಕ್ಷ, ಕಾರ್ಯಕರ್ತರಿಗೆ ಭವಿಷ್ಯವಿಲ್ಲ. ತೀವ್ರ ನೊಂದ, ಬೇಸತ್ತ ನಾಯಕರೆಲ್ಲ ಸಭೆ ಸೇರಲಿದ್ದೇವೆ. ಬಿ.ಎಸ್.ಯಡಿಯೂರಪ್ಪ ಮಾತು ಕೂಡ ಕೇಳುವ ಸ್ಥಿತಿಯಲ್ಲಿಲ್ಲ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ. ಸುಧಾಕರ್, ಬಿವೈ. ವಿಜಯೇಂದ್ರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾ ಕುಂಭಮೇಳದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ, 10 ಜನ ಸಾವನ್ನಪ್ಪಿರುವ ಶಂಕೆ, ಐವರು ಕನ್ನಡಿಗರು ನಾಪತ್ತೆ


