BBMP
Loading ...

Greater Bengaluru

ಬೆಂಗಳೂರು, (ಸೆಪ್ಟೆಂಬರ್ 02): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇಂದಿನಿಂದ ಇತಿಹಾಸದ ಪುಟಗಳಲ್ಲಿ ಸೇರ್ಪಡೆಗೊಂಡು, ಹೊಸ ರೂಪದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಾರ್ಯಾರಂಭಗೊಂಡಿದೆ. ರಾಜ್ಯ ಸರ್ಕಾರ ಪ್ರಕಟಿಸಿರುವ ಅಧಿಸೂಚನೆಯಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ನಗರಪಾಲಿಕೆಗಳು ಕಾರ್ಯನಿರ್ವಹಿಸಲಿದ್ದು, ಈ ಐದು ನಗರಪಾಲಿಕೆಗಳಿಗೆ ಆಯುಕ್ತರನ್ನು ಸಹ ನೇಮಕ ಮಾಡಲಾಗಿದೆ. ಇನ್ನು ಈ ಬಗ್ಗೆ ಬೆಂಗಳೂರು ಉಸ್ತುವಾರಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಗ್ರೇಟರ್ ಬೆಂಗಳೂರು ಅಥಾರಿಟಿ ಬಗ್ಗೆ ಮಾಹಿತಿ ನೀಡಿದ್ದು, ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮಹಾನಗರ ಪಾಲಿಕೆ ಅಂತ ವಿಂಗಡಣೆ ಮಾಡಲಾಗಿದ್ದು, ಐದು ಸಂಸ್ಥೆಗೂ ಆಡಳಿತಾಧಿಕಾರಿ, ಆಯುಕ್ತರನ್ನ ಹಾಗೂ ಐಎಎಸ್, ಕೆಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಯಾವುದೇ ರಾಜಕಾರಣಿಗಳ ಹೆಸರನ್ನೂ ಪಾಲಿಕೆಗೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

 

ಐವರು ಮೇಯರ್ , ಎರಡೂವರೆ ವರ್ಷ ಅವಧಿ
ಇಂದು ಇತಿಹಾಸ ಪುಟಕ್ಕೆ ಪವಿತ್ರವಾದ ಬೆಂಗಳೂರು ಸೇರಿದೆ. ಜಿಬಿಎ ಬೆಂಗಳೂರು ಹೆಸರನ್ನ ಹೊಂದಿಕೊಂಡಿದೆ. ಸಹಕಾರ ಇರಲಿ ಅಂತಾ ಐದು ಪಾಲಿಕೆಗಳನ್ನಾಗಿ ಮಾಡಿದ್ದೇವೆ. ಜುಲೈ 25ರಂದು 55 ಜನರು ಹಲವು ತಕರಾರು ಸಲ್ಲಿಸಿದ್ದರು. 5 ಮಹಾನಗರ ಪಾಲಿಕೆ ಕಡತಗಳನ್ನ ರಾಜ್ಯಪಾಲರಿಗೆ ಕಳಿಸಲಾಗಿತ್ತು. 120 ದಿನಗಳ ಕಾಲ ಪ್ರಾಧಿಕಾರ ರಚಿಸಿ ಅದೇಶಿಸಲಾಗಿದೆ. 75 ಜನರನ್ನ ಸದಸ್ಯರನ್ನಾಗಿ ಮಾಡಲಾಗುತ್ತೆ. ಐವರು ಮೇಯರ್ ಇರುತ್ತಾರೆ. ಎಲ್ಲಾ ಮೇಯರ್ ಗಳಿಗೂ ಎರಡೂವರೆ ವರ್ಷ ಅವಧಿ ಇರುತ್ತಾರೆ. ನಮಗೆ ಟೈಮ್ ಲೈನ್ ಇದೆ. ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದೇವೆ. ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣೆ ಮಾಡಲು‌ ಬರೆದಿದ್ದೇವೆ ಎಂದು ಮಾಹಿತಿ ನೀಡಿದರು.

 

ನವೆಂಬರ್ ಬಳಿಕ ಎಲೆಕ್ಷನ್
ಜಿಬಿಎ ಅಧೀನದ ಐದು ಪಾಲಿಕೆಗಳಿಗೆ ಚುನಾವಣೆ ನಡೆಸುವ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ,ಡಿಲಿಟೇಷನ್ ಪ್ರಕ್ರಿಯೆಯನ್ನ ರಾಜ್ಯ ಚುನಾವಣಾ ಆಯೋಗ ಮುಗಿಸಬೇಕು. ಆದಾದ್ಮೇಲೆ ಚುನಾವಣೆ. ನವೆಂಬರ್ ಬಳಿಕ ಎಲೆಕ್ಷನ್‌ ಬಗ್ಗೆ ನೋಡೋಣ ಎಂದರು ಸ್ಪಷ್ಟಪಡಿಸಿದರು.

 

ಉತ್ತಮ ಸೇವೆ, ಆಡಳಿತ
ಐದು ಸಂಸ್ಥೆಗೂ ಆಡಳಿತಾಧಿಕಾರಿ, ಆಯುಕ್ತರನ್ನ ಹಾಗೂ ಐಎಎಸ್, ಕೆಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮಹಾನಗರ ಪಾಲಿಕೆ ಅಂತ ವಿಂಗಡಣೆ ಮಾಡಲಾಗಿದೆ. ಯಾವುದೇ ರಾಜಕಾರಣಿಗಳ ಹೆಸರನ್ನೂ ಪಾಲಿಕೆಗೆ ಇಡಲಿಲ್ಲ. ನಾಳೆಯಿಂದಲೇ ಎಲ್ಲ‌ ತೆರಿಗೆ ಸಂಬಂಧಪಟ್ಟ ಪಾಲಿಕೆಗೆ ಹೋಗುತ್ತೆ. 74ನೇ ತಿದ್ದುಪಡಿಯನ್ನ ನಾವು ಟಚ್ ಮಾಡುವುದಿಲ್ಲ. ಪಾಲಿಕೆಗಳಿಗೆ ಎಲ್ಲವೂ ಹೋಗಲಿದೆ. ಮೀಸಲಾತಿ, ಚುನಾವಣೆ ಬಗ್ಗೆ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಉತ್ತಮ ಸೇವೆ, ಆಡಳಿತ ಇರಲಿದೆ. ಸರ್ಕಾರದ ಹಣ ಜಿಬಿಎ, ಜಿಬಿಎ ಹಣ ಸರ್ಕಾರಕ್ಕೆ ಅವಶ್ಯಕತೆ ಇದ್ರೆ ಹೋಗುತ್ತೆ ಎಂದು ಹೇಳಿದರು.

 

ನ. 1ರಂದು ಎಲ್ಲಾ ಪಾಲಿಕೆಗಳಿಗೆ ಭೂಮಿ ಪೂಜೆ
ಕಚೇರಿಗಳು ಎಲ್ಲಿರಬೇಕು ಅಂತ ಸೂಚಿಸಿದ್ದೇವೆ. ನವೆಂಬರ್ 1ರಂದು ಎಲ್ಲ ಕಡೆ ಹೊಸ ಭೂಮಿ ಪೂಜೆ ಆಗಬೇಕು.ಐದು ಪಾಲಿಕೆಗಳೂ ಸಹ ಒಂದೇ ರೀತಿ ವಿನ್ಯಾಸ ಇರಬೇಕು. ಬಿಜಿಎ, ಪಾಲಿಕೆಗೂ ಲೋಗೋ ಇರಲಿದೆ. ಡಿಸೈನಿಗೆ ಐದು ಲಕ್ಷ ಅವಾರ್ಡ್ ಕೊಡ್ಬೇಕು. ಜಿಬಿಎ ಮೂರು ತಿಂಗಳಿಗೆ ಒಂದು ಸಭೆಯನ್ನ ಮಾಡಬೇಕು. ಎಲೆಕ್ಷನ್ ನ ಚುನಾವಣಾ ಆಯೋಗ ಮಾಡುತ್ತೆ. ಎಲ್ಲ ಕೋರ್ಟ್ ಗೆ ಹೋಗಾಯ್ತು. ತಕರಾರು ಹಾಕಿ ಆಯ್ತು. ಸುಪ್ರೀಂ ಕೋರ್ಟ್ ಅನುಮತಿ‌ ಕೊಟ್ಟಿದೆ. 30.11.2025 ಆದ್ಮೇಲೆ ಬನ್ನಿ ಎಂದು ಸಮಯ ಕೊಟ್ಟಿದ್ದಾರೆ ಎಂದು ವಿವರಿಸಿದರು.


ಐದು ಪಾಲಿಕೆಗಳಿಗೆ ನೂತನ ಆಯುಕ್ತರು
*ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ-ರಾಜೇಂದ್ರ ಚೋಳನ್.
*ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ: ರಮೇಶ್ ಜಿ.ಎಸ್ , *ಅಪರ ಆಯುಕ್ತೆ- ಸ್ನೇಹಲ್ ಸುಧಾಕರ್
*ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ: ಪೊಮ್ಮಳ ಸುನಿಲ್ ಕುಮಾರ್
*ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ: ರಮೇಶ್ ಕೆ.ಎನ್ ; *ಅಪರ ಆಯುಕ್ತ: ಪಾಂಡುರಾಹುಲ್ ತುಕರಾಮ್
*ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ: ರಾಜೇಂದ್ರ ಕೆ.ವಿ

Leave a Reply

Your email address will not be published. Required fields are marked *