ಬೆಂಗಳೂರು: ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ವಿನೂತನ ಕಾರ್ಯವನ್ನು ಕೈಗೊಂಡಿದ್ದು, ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಅನ್ಯಭಾಷಿಕರು ಆಟೋದಲ್ಲಿ ಪ್ರಯಾಣಿಸುವಾಗ ಕನ್ನಡ ಭಾಷೆಯನ್ನು ಉಪಯೊಗಿಸಿ ಮಾತಾಡಲು ಪ್ರಯೋಜನವಾಗಲೆಂದು ಎಲ್ಲ ಆಟೋಗಳಿಗೆ ಫಲಕಗಳನ್ನು ಅಳವಡಿಸಲಾಗುತ್ತಿದೆ. ಫಲಕದಲ್ಲಿ ಕನ್ನಡದಲ್ಲಿ ಆಟೋ ಚಾಲಕನೊಂದಿಗೆ ಅನ್ಯಭಾಷೆಯ ಪ್ರಯಾಣಿಕರು ಹೇಗೆ ಮಾತನಾಡಬೇಕೆಂಬುದನ್ನು ವಿವರಿಸಲಾಗಿದೆ.

ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಪ್ರತಿ ಆಟೋಗಳಿಗೆ ಫಲಕಗಳನ್ನು ಅಳವಡಿಸಲಾಗುತ್ತಿದೆ. ಈ ಅಭಿಯಾನವನ್ನು ಇನ್ಸ್ಪೆಕ್ಟರ್ ಯೋಗೇಶ್ ಎಸ್. ಟಿ. ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಭಾಷೆ ಗೊತ್ತಿಲ್ಲದೆ ಪ್ರಯಾಣಿಕರು ಮತ್ತು ಆಟೋ ಚಾಲಕರ ನಡುವೆ ಕೆಲವೊಂದು ಗಲಾಟೆಗಳು ಆಗುತ್ತಿದ್ದು, ಇಂಥದ್ದನ್ನು ತಪ್ಪಿಸಲು ಮತ್ತು ಕರ್ನಾಟಕದಲ್ಲಿ ನೆಲೆಸಿರುವ ಅನ್ಯಭಾಷಿಕರಿಗೆ ಕನ್ನಡ ಕಲಿತುಕೊಳ್ಳಿ ಎಂದು ಹೇಳಲು ಇಂಥದ್ದೊಂದು ವಿನೂತನ ಪ್ರಯತ್ನವನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ಪೊಲೀಸರು ಮಾಡುತ್ತಿದ್ದಾರೆ.

ಇನ್ನು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯೋಗೇಶ್ ಎಸ್. ಟಿ. ಅವರು ಸಮಾಜಮುಖಿ ಕೆಲಸ ಇದೇ ಮೊದಲೇನಲ್ಲ. ಸದಾ ಹೊಸದನ್ನು ಚಿಂತಿಸುವ ಯೋಗೇಶ್, ಈ ಹಿಂದೆ ತಮ್ಮ ವ್ಯಾಪ್ತಿಯ ರಸ್ತೆಯಲ್ಲಿ ಗುಂಡಿ ಬಿದ್ದಿದ್ದ ರಸ್ತೆಯನ್ನು ಕಾಂಕ್ರಿಟ್ ವಾಹನದ ಮೂಲಕ ಮುಚ್ಚಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.



