ಶಾಸಕ ಹಾಗೂ ಎಂಸಿಎ ಅಧ್ಯಕ್ಷ ಸತೀಶ ಸೈಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ಬುಧವಾರ (ಆಗಸ್ಟ್ 13) ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಏಳು ಇಡಿ ಅಧಿಕಾರಿಗಳು ಕಾರವಾರದ ಸದಾಶಿವಗಡ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಸೈಲ್ ಮನೆಯಲ್ಲಿ ತಪಾಸಣೆ ಕೈಗೊಂಡಿದ್ದಾರೆ. ಇಬ್ಬರು ಸಿಐಎಎಸ್ಎಫ್ ಅಧಿಕಾರಿಗಳನ್ನು ಮನೆಯ ಹೊರಗೆ ನಿಯೋಜಿಸಲಾಗಿದೆ.
ಅಕ್ರಮ ಅದಿರು ಪ್ರಕರಣದಲ್ಲಿ ಸತೀಶ ಸೈಲ್ಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೈಕೋರ್ಟ್ ಅದಕ್ಕೆ ತಡೆ ನೀಡಿದ್ದು, ಸದ್ಯ ಸೈಲ್ ರಿಲೀಫ್ ಆಗಿದ್ದಾರೆ. ಇದೀಗ ಹೊಸ ಸವಾಲು ಎದುರಾಗಿದೆ.
ವಿಜಯನಗರದಲ್ಲೂ ಇಡಿ ದಾಳಿ
ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸಪೇಟೆಯಲ್ಲಿ ಇಬ್ಬರು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಇಡಿ ಬೆಳಂಬೆಳಗ್ಗೆ ದಾಳಿ ನಡೆಸಿ, ದಾಖಲೆಗಳಿಗಾಗಿ ಹುಡುಕಾಟ ನಡೆಸಿದೆ. ಸ್ವಸ್ತಿಕ್ ನಾಗರಾಜ್ ಹಾಗೂ ಕಾರದಪುಡಿ ಮಹೇಶ್ ಅವರ ಮನೆಗಳ ಮೇಲೆ ದಾಳಿ ನಡೆದಿದ್ದು, ಅಕ್ರಮ ಗಣಿಗಾರಿಕೆಯ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎನ್ನಲಾಗಿದೆ.
ಎಂ.ಜೆ ನಗರದ ರಸ್ತೆಯಲ್ಲಿರೋ ಗಣಿ ಉದ್ಯಮಿ ಸ್ವಸ್ತಿಕ್ ನಾಗರಾಜ್ ಸ್ಟೀಲ್ ಅಂಗಡಿ ಹಾಗೂ ಮನೆಯಲ್ಲಿ ಇಡಿ ಅಧಿಕಾರಿಗಳ ತೀವ್ರಶೋಧ ನಡೆಸಿದ್ದಾರೆ. ಮತ್ತೊಬ್ಬ ಗಣಿ ಉದ್ಯಮಿ ಹಾಗೂ ನಗರಸಭೆ ಸದಸ್ಯ ಕಾರದಪುಡಿ ಮಹೇಶ್ ಮನೆ, ಕಚೇರಿ ಮತ್ತು ಸ್ಟೀಲ್ ಅಂಗಡಿ ಮೇಲೆ ಇಡಿ ದಾಳಿ ನಡೆಸಿ ತೀವ್ರಶೋಧ ನಡೆಸಿದ್ದಾರೆ.


