Greater Bengaluru News9 : ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ ನಡೆಸಿದರು. ಜೈಲಿನ ಒಳಭಾಗ ಹಾಗೂ ಹೊರಭಾಗವನ್ನು ವೀಕ್ಷಿಸಿದ ಅವರು, ಖೈದಿಗಳು ಮತ್ತು ಅಧಿಕಾರಿವರ್ಗದ ಕುಂದುಕೊರತೆಗಳನ್ನು ಆಲಿಸಿದರು.
ಪುರುಷ ಹಾಗೂ ಮಹಿಳಾ ಬ್ಯಾರಕ್ಗಳು, ಬೇಕರಿ, ಅಡುಗೆಮನೆ, ಆಸ್ಪತ್ರೆ ಸೇರಿದಂತೆ ಜೈಲಿನ ಎಲ್ಲ ವಿಭಾಗಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅಲೋಕ್ ಕುಮಾರ್, ಜೈಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಹೇಳಿದರು. ಆ ಬಳಿಕವೂ ಅಕ್ರಮಗಳು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಖೈದಿಗಳು ಕೆಲವು ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ. ಜೈಲು ಅಧಿಕಾರಿಗಳೂ ತಮ್ಮ ಕಾರ್ಯನಿರ್ವಹಣೆಯ ಸವಾಲುಗಳನ್ನು ವಿವರಿಸಿದ್ದಾರೆ. ಪ್ರಸ್ತುತ ಶೇಕಡಾ 40ರಷ್ಟು ವಾರ್ಡರ್ ಹುದ್ದೆಗಳು ಖಾಲಿಯಾಗಿವೆ. ಸುಮಾರು 4,700 ಖೈದಿಗಳನ್ನು ನಿಯಂತ್ರಿಸುವುದು ಸುಲಭವಲ್ಲವಾದರೂ, ಇದನ್ನು ನೆಪ ಮಾಡಿಕೊಂಡು ಸುಮ್ಮನೆ ಕೂತಿರಲು ಸಾಧ್ಯವಿಲ್ಲ ಎಂದು ಡಿಜಿಪಿ ಸ್ಪಷ್ಟಪಡಿಸಿದರು.
ಒಂದೇ ದಿನದಲ್ಲಿ ಸಂಪೂರ್ಣ ಬದಲಾವಣೆ ಅಸಾಧ್ಯವಾದರೂ, ಹಂತ ಹಂತವಾಗಿ ಸುಧಾರಣೆ ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿದರು.


