Greater Bengaluru News9 : ಬಾಕಿ ಇದ್ದ ಬಿಲ್ ಹಣದ ಫೈ;ಲ್ ಅನ್ನು ಪಾಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಹಾಪುರ ಭೀಮರಾಯನಗುಡಿ ಕೆಬಿಜೆನ್ಎಲ್ ಕಚೇರಿಯ ಎಇಇ ಮತ್ತು ಜೆಇ ಯಾದಗಿರಿ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಫೋನ್ ಪೇ ಮೂಲಕ ಹಣ ಪಡೆದಿದ್ದ ಆರೋಪಿಗಳು
ಮಾಹಿತಿಗಳ ಪ್ರಕಾರ, ವಡೇರಾ ತಾಲೂಕಿನ ಗದ್ದೆಸೂಗೂರು ಗ್ರಾಮದ ಕಾಸಿಂಸಾಬ್ ಜಲಾಲ್ ಅವರು ನೀಡಿದ ದೂರಿನ ಅಡಿಯಲ್ಲಿ ಲೋಕಾಯುಕ್ತ ಪಿಎಸ್ಐ ಶೋಧ ಮಾಡಿದ್ದು, ಫೋನ್ ಪೇ ಮೂಲಕ ಹಣ ಪಡೆದಿರುವುದನ್ನ ಪತ್ತೆ ಮಾಡಿದ್ದಾರೆ.
35000 ಹಣ ಪಡೆದಿರುವುದು ಪತ್ತೆ
ಭೀಮರಾಯನಗುಡಿಯ ಕೆಬಿಜೆಎನ್ಎಲ್ ಎಇಇ ಮಧುಸೂಧನ್ ಹಾಗೂ ಜೆಇ ಮಂಜುನಾಥ್ ಅವರು ಬಿಲ್ ಫೈಲ್ ಪಾಸ್ ಮಾಡಲು ಲಂಚ ಕೇಳಿದ್ದರು. ಸುಮಾರು 35000 ಹಣವನ್ನ ಪಡೆದುಕೊಂಡಿದ್ದು, ಫೋನ್ ಪೇ ಮೂಲಕ ಹಾಕಿಕೊಂಡಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಜೆ ಹೆಚ್ ಇನಾಮದಾರ್, ಪಿಐ ಸಿದ್ರಾಮ ಬಲರೂಗಿ ಹಾಗೂ ಲೋಕಾಯುಕ್ತ ಸಿಬ್ಬಂದಿಗಳು ಎಸ್ಪಿ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ಮಾಡಿದ್ದಾರೆ.
ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಜಿಲ್ಲಾ ಲೆಕ್ಕ ವ್ಯವಸ್ಥಾಪಕ ಅರವಿಂದ್ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಗ್ಯ ಇಲಾಖೆಯ ಬಿಲ್ ಪಾಸ್ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ವೇಳೆ ಈ ದಾಳಿ ನಡೆದಿದೆ.
ತುಮಕೂರು ಜಿಲ್ಲೆಯ 11 ತಾಲ್ಲೂಕುಗಳಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಬೀದಿ ನಾಟಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದ ರಾಜಶೇಖರ್ ಎಂಬುವವರು ಡಾ. ಅಂಬೇಡ್ಕರ್ ಹೆಸರಿನಲ್ಲಿ ಎನ್ಜಿಒ (NGO) ನಡೆಸುತ್ತಿದ್ದಾರೆ. ಇವರು ಸಲ್ಲಿಸಿದ್ದ 1 ಲಕ್ಷ 98 ಸಾವಿರ ರೂಪಾಯಿ ಮೊತ್ತದ ಬಿಲ್ ಪಾಸ್ ಮಾಡಿಕೊಡಲು ಅರವಿಂದ್ ಅವರು 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ
ಲಂಚದ ಹಣದ ಪೈಕಿ 13 ಸಾವಿರ ರೂಪಾಯಿಗಳನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಅರವಿಂದ್ ಅವರನ್ನು ಕೆಂಪುಹಸ್ತವಾಗಿ ಹಿಡಿದಿದ್ದಾರೆ. ದೂರುದಾರ ರಾಜಶೇಖರ್ ಅವರು ನೀಡಿದ ಖಚಿತ ಮಾಹಿತಿಯ ಮೇರೆಗೆ ಡಿಹೆಚ್ಓ ಕಚೇರಿಯಲ್ಲೇ ಈ ಕಾರ್ಯಾಚರಣೆ ನಡೆಸಲಾಗಿದೆ.
20 ವರ್ಷಗಳಿಂದ ಒಂದೇ ಕಚೇರಿಯಲ್ಲಿ ವಾಸ್ತವ್ಯ
ವಿಶೇಷವೆಂದರೆ, ಆರೋಪಿ ಅರವಿಂದ್ ಕಳೆದ 20 ವರ್ಷಗಳಿಂದ ತುಮಕೂರು ಡಿಹೆಚ್ಓ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ದೀರ್ಘಕಾಲ ಒಂದೇ ಕಚೇರಿಯಲ್ಲಿ ಬೀಡುಬಿಟ್ಟಿದ್ದ ಇವರು, ಬಿಲ್ ಪಾವತಿ ವಿಚಾರದಲ್ಲಿ ಫಲಾನುಭವಿಗಳಿಗೆ ಕಿರುಕುಳ ನೀಡುತ್ತಿದ್ದರು ಎಂಬ ದೂರುಗಳು ಕೇಳಿಬಂದಿವೆ.


